ಭಾರತ-ಅಮೆರಿಕಾ ಒಪ್ಪಂದದಿಂದ ಯಾರಿಗೂ ಲಾಭವಿಲ್ಲ. ಈ ಮಧ್ಯೆಯೂ ಅಮೆರಿಕಾ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಒಪ್ಪುತ್ತಿದ್ದಾರೆ. ಆ ಮೂಲಕ ಅಮೆರಿಕಾ ಹೇಳಿದಂತೆ ನಾವು ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಕಿಡಿಕಾರಿದರು.

ಹುಬ್ಬಳ್ಳಿ: ಭಾರತ-ಅಮೆರಿಕಾ ಒಪ್ಪಂದದಿಂದ ಯಾರಿಗೂ ಲಾಭವಿಲ್ಲ. ಈ ಮಧ್ಯೆಯೂ ಅಮೆರಿಕಾ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಒಪ್ಪುತ್ತಿದ್ದಾರೆ. ಆ ಮೂಲಕ ಅಮೆರಿಕಾ ಹೇಳಿದಂತೆ ನಾವು ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಅಮೆರಿಕಾದಿಂದ ಭಾರತಕ್ಕೆ ಬರುವ ಯಾವ ವಸ್ತುಗಳಿಗೆ ಟ್ಯಾಕ್ಸ್ ಇಲ್ಲ. ರೈತರ ಉತ್ಪನ್ನಗಳಿಗೆ ಜೀರೋ ಟ್ಯಾಕ್ಸ್ ಹಾಕುತ್ತಿದ್ದು, ರೈತರಿಗೆ ಇದರಿಂದ ತೊಂದರೆ ಆಗಲಿದೆ. ಇಂತಹ ವಿಚಾರಗಳ ಬಗ್ಗೆ ಪರಾಮರ್ಶೆ ಮಾಡಬೇಕಾದ ಬಿಜೆಪಿಗರು, ಪ್ರಧಾನಿಗಳ ನಡೆ ವಿರುದ್ಧ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಪುಸ್ತಕಕ್ಕೆ ಏಕೆ ಪರವಾನಗಿ ನೀಡಲಾಗುತ್ತಿಲ್ಲ. ಬಿಜೆಪಿಯವರು ಮುಂದಿನ ದಿನಗಳಲ್ಲಿ ನರವಣೆ ಅವರನ್ನು ದೇಶದ್ರೋಹಿ ಎಂದು ಕರೆಯುವುದರಲ್ಲಿ ಸಂದೇಹವಿಲ್ಲ. ಬಿಜೆಪಿಗರು ಮಾತೆತ್ತಿದರೆ, ಮುಸ್ಲಿಂ, ಪಾಕಿಸ್ತಾನ, ಬಾಂಗ್ಲಾ ನುಸುಳುಕೋರರ ಬಗ್ಗೆ ಮಾತನಾಡುತ್ತಾರೆ. ನುಸುಳಕೋರರು ಒಳಗಡೆ ಬರದಂತೆ ತಡೆಯಬೇಕಿರುವುದು ಕೇಂದ್ರ ಸರ್ಕಾರ. ಕೇಂದ್ರದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರು, ಗಡಿಯಲ್ಲಿ ಸೂಕ್ತ ಭದ್ರತೆಗೆ ಕ್ರಮವಹಿಸಬೇಕು. ಇದರ ಬದಲಾಗಿ ರಾಜ್ಯ ಸರ್ಕಾರದ ಮೇಲೆ ಗೂಬೆ ಕುರಿಸುತ್ತ ರಾಜಕೀಯ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿಗರ ಪಾಲಿಗೆ ಮೋದಿ ಅವರೇ ದೇವರು. ರಾಮ ಮಂದಿರ ನಿರ್ಮಾಣ ಸಮಯದಲ್ಲಿ ರಾಮನ ಮೂರ್ತಿ ಭಾವಚಿತ್ರಕ್ಕಿಂತ ಮೋದಿಯವರದ್ದೇ ದೊಡ್ಡದಾಗಿತ್ತು. ರಾಮಾಯಣ ಮಹಾಭಾರತ ಮೈಥಾಲಜಿಕ್ ಸ್ಟೋರಿ ಅಂತ ಮೋದಿ ಅವರು ಹೇಳುತ್ತಾರೆ. ಆದರೆ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿಯೇ ಮಹಿಳೆಯರ ಮಿಸ್ಸಿಂಗ್ ಪ್ರಕರಣಗಳು ನಡೆದಿವೆ. ಮಾಡೆಲ್ ರಾಜ್ಯ ಎಂದು ಹೇಳುವ ಗುಜರಾತ್‌ನಲ್ಲಿಯೇ ಮಿಸ್ಸಿಂಗ್ ಪ್ರಕರಣ ದಾಖಲಾಗಿವೆ. ಬಿಜೆಪಿ ಅಧಿಕಾರ ಇರುವ ರಾಜ್ಯದಲ್ಲಿ ಸುರಕ್ಷತೆ ಇಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ ಎಂದರು.