ಸಾರಾಂಶ
ಕನ್ನಡಪ್ರಭ ವಾರ್ತೆ ಜಗಳೂರು
ದಾವಣಗೆರೆ ಕ್ಷೇತ್ರದಲ್ಲಿ 25 ವರ್ಷ ಆಡಳಿತ ಮಾಡಿದ ಬಿಜೆಪಿಯನ್ನು ಸೋಲಿಸಿ ನಮ್ಮನ್ನು ಗೆಲ್ಲಿಸಿದ್ದಕ್ಕೆ ಜಗಳೂರು ಕ್ಷೇತ್ರದ ಜನರಿಗೆ ನಾನು ಚಿರಋಣಿಯಾಗಿರುವೆ. ಇನ್ನು ಮುಂದೆ ನಮ್ಮನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎಂದು ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಬಿಜೆಪಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಗಾಯಿತ್ರಿ ಸಿದ್ದೇಶ್ವರ್ ವಿರುದ್ಧ ಹೆಸರೇಳದೇ ಪರೋಕ್ಷ ವಾಗ್ದಾಳಿ ಮಾಡಿದರು.ತಾಲೂಕಿನ ಮಹಾರಾಜನಹಟ್ಟಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶಂಕುಸ್ಥಾಪನೆ, ಶಾಸಕರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗಿ, ಚಿಕ್ಕಮ್ಮನಹಟ್ಟಿ ಗ್ರಾಮದ ಸಣ್ಣ ಕೆರೆಗೆ ಬಾಗಿನ ಅರ್ಪಿಸಿದ ನಂತರ ಪಟ್ಟಣದ ತರಳುಬಾಳು ಸಮುದಾಯಭವನದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಜನತಾ ದರ್ಶನ:ಪ್ರಭಕ್ಕ ಎಂಬುದು ಸಾಂಕೇತಿಕ. ನನ್ನಜಯ ಅಲ್ಲ. ನಿಮ್ಮ ಜಯ ಆಗಿದೆ. ಮನೆ ಬಾಗಿಲು, ಮನಸ್ಸಿನ ಬಾಗಿಲು ಯಾವಾಗಲು ತೆರೆದಿರುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಜನತಾ ದರ್ಶನ ಮಾಡುವ ಮೂಲಕ ಜನರ, ಕೂಲಿಕಾರರ, ರೈತರ ಕಷ್ಟಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಇತ್ಯರ್ಥ ಪಡಿಸಲು ಪ್ರತ್ನಿಸುವೆ.
ಕುಡಿಯುವ ನೀರು, ಆರೋಗ್ಯ ,ಶಿಕ್ಷಣಕ್ಕೆ ಒತ್ತು:ಇನ್ನು ಮುಂದೆ ಜಗಳೂರು ಶಾಸಕರು, ಸಚಿವರು, ಸಂಸದರು ಸೇರಿ ಟ್ರಿಪಲ್ ಎಂಜಿನ್ ಸರ್ಕಾರ ನಮ್ಮದು. ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಸೇರಿ ಅಭಿವೃದ್ಧಿಯೇ ನಮ್ಮ ಮಂತ್ರವಾಗಿದೆ. ಸಂಸತ್ನಲ್ಲಿ ಆರೋಗ್ಯ, ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿಗಳು ಕೇವಲ ಮಾತಿನಲ್ಲಿ ವಿಶ್ವಗುರು ಆಗಬಾರದು ಕೆಲಸ ಮಾಡಿ ತೋರಿಸಬೇಕು. ಅಂಬಾನಿಯಂತ ಶ್ರೀಮಂತರು ಬಡವರಿಗೆ ಸಹಾಯ ಹಸ್ತ ಮಾಡುವಂತೆ ಮನವಿ ಮಾಡಿದೆ. ದಾವಣಗೆರೆಯಲ್ಲಿ 2 ಹೆಕ್ಟೇರ್ ಜಮೀನು ನೀಡಿದರೇ ಐಟಿಬಿಟಿ ಸ್ಥಾಪನೆ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಕೇಂದ್ರ ಸಚಿವರಾದ ಜಿತಿನ್ ಪ್ರಸಾದ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ನಮ್ಮ ಮನೆ ಮಗಳು ಡಾ.ಪ್ರಭಮಲ್ಲಿಕಾರ್ಜುನ ಸಂಸದರಾಗಿ ಆಯ್ಕೆಯಾಗಿದ್ದಾರೆ. ದಾವಣಗೆರೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಂಸತ್ನಲ್ಲಿ ಪ್ರಸ್ತಾಪಿಸಿದ್ದಾರೆ. ಇದು ಟ್ರಯಲ್ ಇನ್ನು ಮುಂದೆ ವರ್ಜಿನಲ್ ಆಟ ಶುರುಆಗುತ್ತದೆ. ಟ್ರಿಪಲ್ ಎಂಜಿನ್ ಸರ್ಕಾರದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 57 ಕೆರೆಗಳಿಗೆ ನೀರು, ಭದ್ರಮೇಲ್ದಂಡೆ, ಸೇರಿ ಕ್ಷೇತ್ರದ ಅಭಿವೃದ್ಧಿ ಸಂಕಲ್ಪ ಮಾಡಿದ್ದೇವೆ. ಕ್ಷೇತ್ರದ ಜನರ ಋಣವನ್ನು ಸಂಸದರು, ಸಚಿವರು, ಶಾಸಕರು ತೀರಿಸುತ್ತೇವೆ ಎಂದರು.ಕರ್ನಾಟಕ ತಾಂಡಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ್ ನಾಯ್ಕ ಮಾತನಾಡಿ, ಜಗಳೂರಿನಲ್ಲಿ ನಿವೇಶನ ನೀಡಿದರೆ ಬಂಜಾರ ಸಮುದಾಯ ಭವನಕ್ಕೆ ₹2.5 ಕೋಟಿ ಜಗಳೂರು ವಿಧಾನ ಸಭಾ ಕ್ಷೇತ್ರದ ಲಂಬಾಣಿ ತಾಂಡಗಳ ಅಭಿವೃದ್ಧಿಗೆ ₹5 ಕೋಟಿ ಕೊಡುವುದಾಗಿ ಭರವಸೆ ನೀಡಿದರು.
ಬ್ರಾಹ್ಮಣ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ, ಸಂಸದೆ ಡಾ.ಪ್ರಭಮಲ್ಲಿಕಾರ್ಜುನರಿಗೆ ಮುಂದಿನ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಎಲ್ಲಾ ಗುಣಲಕ್ಷಣ ಹೊಂದಿದ್ದಾರೆ ಎಂದು ಭವಿಷ್ಯ ನುಡಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಶಿರ್ ಅಹಮ್ಮದ್, ಅರಸಿಕೆರೆ ಬ್ಲಾಕ್ ಅಧ್ಯಕ್ಷ ಮಂಜುನಾಥ್, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ರಾಜ್ಯ ಎಸ್ಟಿಸೆಲ್ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಪ್ರಧಾನಕಾರ್ಯದರ್ಶಿ ಕೀರ್ತಿಕುಮಾರ್, ಸಿ.ತಿಪ್ಪೇಸ್ವಾಮಿ, ಪಿ.ಸುರೇಶ್ ಗೌಡ, ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಪಪಂ ಸದಸ್ಯರು ಇತರರು ಉಪಸ್ಥಿತರಿದ್ದರು.