ಸಾರಾಂಶ
ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಸರಿಯಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ನಮ್ಮ ರಾಜ್ಯದ ಹಿತ ಕಾಪಾಡುವ ಸಲುವಾಗಿ ನಾವು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ. ರಾಜ್ಯದ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ. ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ.
ನವಲಗುಂದ: ರಾಜ್ಯದ ನೆಲ-ಜಲದ ವಿಷಯ ಬಂದಾಗ ನಾವು ರಾಜಕಾರಣ ಮಾಡಿಲ್ಲ. ಬೇರೆಯವರು ರಾಜಕಾರಣ ಮಾಡಿದರೂ ನಾವು ಅದನ್ನು ತೆಲೆಗೆ ತೆಗೆದುಕೊಂಡಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ಸದಸ್ಯರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರ ಮನವಿ ಸ್ವೀಕರಿಸಿ ಮಾತನಾಡಿದರು.ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಸರಿಯಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ನಮ್ಮ ರಾಜ್ಯದ ಹಿತ ಕಾಪಾಡುವ ಸಲುವಾಗಿ ನಾವು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ. ರಾಜ್ಯದ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ. ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ ಎಂದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ಪರಿಸರ ಇಲಾಖೆಯ ಅನುಮತಿ ಪಡೆದಿದ್ದೇವೆ. ಪರಿಸರ ಇಲಾಖೆ ಅನುಮತಿ ಪಡೆದ ಮೇಲೆ ಮುಗಿಯಿತು. ಗೋವಾದವರು ವನ್ಯಜೀವಿ ನೆಪ ಹೇಳುತ್ತಿದ್ದಾರೆ. ನಮ್ಮ ರಾಜ್ಯದ ವನ್ಯಜೀವಿ ರಕ್ಷಣೆ ಮಾಡುವುದು ನಮ್ಮ ಹಕ್ಕು ಅದನ್ನು ಕೇಳುವ ಹಕ್ಕು ಗೋವಾದವರಿಗಿಲ್ಲ. ಅದನ್ನೂ ಕೇಂದ್ರ ಸಚಿವರಿಗೆ ತಿಳಿಸಿದ್ದೇನೆ. ಅವರು ಈ ವಾರದಲ್ಲಿ ಸಮಯ ಕೊಡುವುದಾಗಿ ಹೇಳಿದ್ದಾರೆ.ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ ಅವರನ್ನು ಭೇಟಿ ಮಾಡಿ ಮಹದಾಯಿ ವ್ಯಾಪ್ತಿಯಲ್ಲಿ ಬರುವ ಸಂಸದರಾದ ನಾನು, ಜಗದೀಶ್ ಶೆಟ್ಟರ, ಪಿ.ಸಿ. ಗದ್ದಿಗೌಡರ ಹಾಗೂ ಇನ್ನೂ ಅನೇಕ ಸಂಸದರು ಸೇರಿ ಅವರಿಗೆ ಇನ್ನಷ್ಟು ವಿಷಯಗಳನ್ನು ಮನವರಿಕೆ ಮಾಡಿ ವನ್ಯಜೀವಿ ಮಂಡಳಿ ಅನುಮತಿ ಪಡೆಯಲು ಪ್ರಯತ್ನಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ ಬಿಜೆಪಿ ತಾಲೂಕು ಅಧ್ಯಕ್ಷ ಗಂಗಪ್ಪ ಮನಮಿ, ಸಾಯಿಬಾಬಾ ಆನಗೊಂದಿ, ಎ.ಬಿ. ಹಿರೇಮಠ, ಅಡಿವೆಪ್ಪ ಮನಮಿ, ಯಲ್ಲಪ್ಪ ದಾಡಿಬಾವಿ, ಎಸ್.ಬಿ. ದಾನಪ್ಪಗೌಡ್ರ, ಸುಭಾಷಚಂದ್ರುಗೌಡ್ರ ಪಾಟೀಲ್, ರೋಹಿತ್ ಮತ್ತಿಹಳ್ಳಿ, ಮಲ್ಲೇಶ ಉಪ್ಪಾರ, ಮಲ್ಲಿಕಾರ್ಜುನ ಸಂಗನಗೌಡ್ರ, ಪ್ರಭು ಇಬ್ರಾಹಿಂಪುರ, ಸಿದ್ದಲಿಂಗಪ್ಪ ಹಳ್ಳದ ಗಂಗಪ್ಪ ಸಂಗಟಿ, ನಿಂದಪ್ಪ ತೋಟದ, ರೈತ ಹೋರಾಟಗಾರು, ಯುವಕರು ಉಪಸ್ಥಿತರಿದ್ದರು.