ವಿನಾಯಕನ ಹಬ್ಬದಲ್ಲಿ ಯಾವುದೇ ತರಹದ ವಿಘ್ನ ಬಾರದಂತೆ ಎಲ್ಲರೂ ನಡೆದುಕೊಳ್ಳಬೇಕೆಂದು ಡಿವೈಎಸ್ಪಿ ಬಲ್ಲಪ್ಪ ನಂದಗಾವೆ ಹೇಳಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ವಿನಾಯಕನ ಹಬ್ಬದಲ್ಲಿ ಯಾವುದೇ ತರಹದ ವಿಘ್ನ ಬಾರದಂತೆ ಎಲ್ಲರೂ ನಡೆದುಕೊಳ್ಳಬೇಕೆಂದು ಡಿವೈಎಸ್ಪಿ ಬಲ್ಲಪ್ಪ ನಂದಗಾವೆ ಹೇಳಿದರು.ಪಟ್ಟಣದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ಮೇಹಕರ, ಧನ್ನೂರ (ಹೆಚ್), ಖಟಕಚಿಂಚೋಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಗಣೇಶ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣೇಶನಿಗೆ ವಿಘ್ನವಿನಾಯಕ ಎಂದು ಕರೆಯುತ್ತೇವೆ. ಇಂತಹ ಗಣೇಶನ ಉತ್ಸವದಲ್ಲಿ ಯಾವುದೇ ವಿಘ್ನಗಳು ಬಾರದಂತೆ ಹಬ್ಬ ಆಚರಿಸಬೇಕು ಎಂದರು.
ಮಕ್ಕಳು ಸೇರಿದಂತೆ ಎಲ್ಲರೂ ಕಾನೂನು ಬಗ್ಗೆ ತಿಳಿದುಕೊಂಡು ಗಣೇಶ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ವಿಘ್ನೇಶ್ವರನ ಉತ್ಸವ ಉತ್ತಮ ರೀತಿಯಿಂದ ಅಚರಿಸಲು ಎಲ್ಲಾ ಇಲಾಖೆಗಳಿಂದ ಸಹಕಾರ ನೀಡಲಾಗುವುದು ಎಂದು ಹೇಳಿದರು.ಅಗ್ನಿಶಾಮಕ ಠಾಣೆಯ ಅಧಿಕಾರಿ ದತ್ತಾತ್ರಿ ಮಾತನಾಡಿ, ಗಣೇಶ ಉತ್ಸವದಲ್ಲಿ ಎಲ್ಲಾ ಗಣೇಶ ಪೆಂಡಾಲ್ಗಳಲ್ಲಿ ಅಗ್ನಿ ನಿರೋಧಕ ಪೆಂಡಾಲ್ಗಳನ್ನು ಅಳವಡಿಸಿ ಕೊಳ್ಳಬೇಕು. ಪೆಂಡಾಲ್ಗಳ ಹತ್ತಿರ ಅಗ್ನಿ ನಿರೋಧಕಗಳನ್ನು ಅಳವಡಿಸಿಕೊಳ್ಳಬೇಕು. ಮಾನವನ ನಿರ್ಲಕ್ಷ ಮತ್ತು ಬೇಜವಾಬ್ದಾರಿಯಿಂದ ಅಗ್ನಿ ಅವಘಡಗಳು ಸಂಭವಿಸುತ್ತವೆ. ಹೀಗಾಗಿ ಗಣೇಶ ಉತ್ಸವ ಸಮಿತಿಯವರು ಎಚ್ಚರಿಕೆಯಿಂದ ಹಬ್ಬ ಆಚರಿಸಬೇಕೆಂದು ಸಲಹೆ ನೀಡಿದರು.
ತಹಸೀಲ್ ಕಚೇರಿಯ ಶಿರಸ್ತೇದಾರ ಗೋಪಾಲ ಹಿಪ್ಪರ್ಗಿ ಮಾತನಾಡಿ, ಗಣೇಶ ಹಬ್ಬದ ಪ್ರತಿ ಪೆಂಡಾಲ್ ಸಮಿತಿಯಿವರು ತಮ್ಮ ತಮ್ಮ ಗಣೇಶ ಪೆಂಡಾಲ್ಗಳಿಗೆ ಸಂಬಂಧಿಸಿದಂತೆ ಶಾಂತಿಸಭೆ ನಡೆಸಬೇಕು. ಎಲ್ಲರೂ ಕೆಲಸ ಹಂಚಿಕೊಂಡು ಕಾರ್ಯನಿರ್ವಹಿಸಬೇಕು. ಏನಾದರೂ ಅವಘಡ ಸಂಭವಿಸಿದರೆ ಕಾನೂನು ಕೈಗೆತ್ತಿಕೊಳ್ಳದ ಹಾಗೆ ಪೊಲೀಸರ ಸಹಾಯ ಪಡೆದು ಅವಘಡ ಸರಿಪಡಿಸಬೇಕು. ಯಾವುದೇ ವಿವಾದಕ್ಕೆ ಆಸ್ಪದ ಕೊಡದೆ ಗಣೇಶ ಹಬ್ಬವನ್ನು ಉತ್ಸಾಹದಿಂದ ಆಚರಿಸಬೇಕೆಂದರು.ಶಾಂತಿ ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕ ಸೂರ್ಯಕಾಂತ ಬಿರಾದಾರ, ಗ್ರಾಮೀಣ ಸಿಪಿಐ ಹನುಮರೆಡ್ಡೆಪ್ಪ, ಪಿಎಸ್ಐ ಅಶೋಕ ಪಾಟೀಲ, ಮೇಹಕರ ಪಿಎಸ್ಐ ಸುದರ್ಶನ ರೆಡ್ಡಿ, ಖಟಕಚಿಂಚೋಳಿ ಪಿಎಸ್ಐ ವಿಶ್ವಾರಾಧ್ಯ ಘಾಣೂರ, ಧನ್ನೂರ (ಹೆಚ್) ಪಿಎಸ್ಐ ರಾಜಕುಮಾರ ಜಾಮಗೊಂಡ, ಜೆಸ್ಕಾಂನ ಸತೀಶ ಕುಮಾರ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ ಉಪಸ್ಥಿತರಿದ್ದರು. ಸಿ.ಜಿ.ಬಿರಾದಾರ ನಿರೂಪಿಸಿದರೆ, ಮಹೇಶ ವಂದಿಸಿದರು.