ಸಾರಾಂಶ
ಕಮಲ ಹಾಸನ್ ಮೇಲೆ ಕಾನೂನು ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ಅವರ ನಟನೆಯ ಚಿತ್ರಗಳು ಪ್ರದರ್ಶನವಾಗಬಾರದು. ಇದೀಗ ಅವರ ಹೊಸ ಚಿತ್ರವೊಂದು ಕರ್ನಾಟಕದಲ್ಲೂ ಬಿಡುಗಡೆ ಆಗುತ್ತಿರುವುದನ್ನು ತಡೆಯಬೇಕು.
ಕುಷ್ಟಗಿ:
ನಟ ಕಮಲ ಹಾಸನ್ ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು, ರಾಜ್ಯದಲ್ಲಿ ಅವರ ನಟನೆಯ ಚಲನಚಿತ್ರವನ್ನು ಪ್ರದರ್ಶಿಸಲು ಅವಕಾಶ ನೀಡಬಾರದೆಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಜಿಲ್ಲಾಧ್ಯಕ್ಷ ಸಂತೋಷ ತೋಟದ ಮಾತನಾಡಿ, ಕಮಲ ಹಾಸನ್ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ಹೇಳುವ ಮೂಲಕ ಕನ್ನಡ ಭಾಷೆಯನ್ನು ಅವಮಾನಿಸಿದ್ದಾರೆ. ನಮ್ಮ ಭಾಷೆಗೆ 2 ಸಾವಿರ ವರ್ಷಕ್ಕಿಂತ ಹೆಚ್ಚಿನ ಇತಿಹಾಸವಿದೆ. ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂದರು.
ಅನೇಕ ಶಿಲಾಶಾಸನಗಳು ಕನ್ನಡ ಸಾಹಿತ್ಯಕ್ಕೆ ಸಾಕ್ಷಿಯಾಗಿವೆ. ಕನ್ನಡ ಮತ್ತು ತಮಿಳು ಸೇರಿದಂತೆ ತೆಲುಗು, ಮಲೆಯಾಳಂ ಭಾಷೆಗಳನ್ನು ಒಟ್ಟಾಗಿ ದ್ರಾವಿಡ್ ಭಾಷೆಗಳೆಂದು ಕರೆಯುತ್ತಾರೆ. ಎಲ್ಲ ಭಾಷೆಗಳಿಗೂ ಸ್ವತಂತ್ರ ಅಸ್ತಿತ್ವಗಳಿವೆ. ಎಲ್ಲ ಭಾಷೆಗಳನ್ನು ಗೌರವಿಸುವುದು ಕನ್ನಡಿಗರ ಹುಟ್ಟುಗುಣ. ಆದರೆ, ನಮ್ಮ ಭಾಷೆಗೆ ಅವಮಾನವಾದಾಗ ಅದನ್ನು ಸಹಿಸುವುದಿಲ್ಲ ಎಂದು ಹೇಳಿದರು.ಕಮಲ ಹಾಸನ್ ಮೇಲೆ ಕಾನೂನು ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ಅವರ ನಟನೆಯ ಚಿತ್ರಗಳು ಪ್ರದರ್ಶನವಾಗಬಾರದು. ಇದೀಗ ಅವರ ಹೊಸ ಚಿತ್ರವೊಂದು ಕರ್ನಾಟಕದಲ್ಲೂ ಬಿಡುಗಡೆ ಆಗುತ್ತಿರುವುದನ್ನು ತಡೆಯಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಸಂಘಟನೆಯ ಪ್ರಮುಖರಾದ ಬಿಬಿಜಾನ್ ಜಾತಗಾರ, ಯಮನಪ್ಪ ಕೋಮಾರ, ಮಹಾಂತೇಶ ಅಮರವತಿ, ಸಿದ್ದಪ್ಪ ಕಲಾಲಬಂಡಿ, ಮಲ್ಲು ಕಾಂಬಳೆ, ಪರಶುರಾಮ ಗದ್ದಿ, ಯಮನೂರಪ್ಪ ಕುರಿ ಸೇರಿದಂತೆ ಅನೇಕರು ಇದ್ದರು.