ಕೊಪ್ಪಳ: ನೋ ಸ್ಟಾಕ್, ದಯಮಾಡಿ ಗ್ರಾಹಕರು ಸಹಕರಿಸಬೇಕು. ಇದು,ಕೊಪ್ಪಳ ನಗರದ ಕಾರ್ಗಿಲ್ ಪೆಟ್ರೋಲ್ ಬಂಕ್ನಲ್ಲಿ ಹಾಕಿರುವ ಬೋರ್ಡ್.
ಪೆಟ್ರೋಲ್ ಮತ್ತು ಡೀಸೆಲ್ ಅಭಾವ ಇಲ್ಲ, ಕೃತಕ ವದಂತಿ ಹರಡಬೇಡಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿಕೊಳ್ಳುತ್ತಿರುವ ಮಧ್ಯೆ ಅಲ್ಲೊಂದು, ಇಲ್ಲೊಂದು ಪೆಟ್ರೋಲ್ ಬಂಕ್ನಲ್ಲಿ ನೋಸ್ಟಾಕ್ ಬೋರ್ಡ್ ಆತಂಕವನ್ನುಂಟು ಮಾಡುವಂತೆ ಮಾಡಿದೆ.ಲೋಡ್ ಬಾರದೇ ಇರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಖಾಲಿಯಾಗಿದೆ. ಹೀಗಾಗಿ, ನೋ ಸ್ಟಾಕ್ ಬೋರ್ಡ್ ಹಾಕಿದ್ದಾರೆ. ಇದು ಗ್ರಾಹಕರನ್ನು ಮತ್ತೊಂದು ಪೆಟ್ರೋಲ್ ಬಂಕ್ಗೆ ಹೋಗಿ ಒಂದು ಲೀಟರ್ ಇಂಧನ ಹಾಕಿಸಿಕೊಳ್ಳುವವರನ್ನು ಸಾಲ ಮಾಡಿ ನಾಲ್ಕಾರು ಲೀಟರ್ ಹಾಕಿಸಿಕೊಳ್ಳುವಂತೆ ಮಾಡಿದೆ. ಇದರಿಂದ ಪೆಟ್ರೋಲ್ ಬಂಕ್ನಲ್ಲಿ ಎಂದಿನಂತೆ ರಶ್ ಇರುವುದು ಕಂಡು ಬರುತ್ತಿದೆ.
ಪೆಟ್ರೋಲ್, ಡೀಸೆಲ್ ದುಬಾರಿ:ಕೊಪ್ಪಳ ತಾಲೂಕಿನ ಗಿಣೇಗೇರಿ ರಸ್ತೆಯಲ್ಲಿರುವ ನಯಾರ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವುದು ನಾನಾ ವದಂತಿಗೆ ಕಾರಣವಾಗಿದೆ.ಗಿಣೇಗೇರಿ ಬಳಿ ಇರುವ ನಯಾರ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ₹104.18ಯಿಂದ ದಿಢೀರನೇ ₹109.18 ಮಾಡಿ ಡೀಸೆಲ್ ದರವೂ ಲೀಟರ್ಗದೆ ₹3 ಹೆಚ್ಚಳ ಮಾಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯೂ ನಾನಾ ವದಂತಿಗಳಿಗೆ ಕಾರಣವಾಗಿದೆ. ಎಲ್ಲ ಬಂಕ್ ಗಳಲ್ಲಿಯೂ ಹೆಚ್ಚಳವಾಗುತ್ತಿದೆ ಎಂದು ಗ್ರಾಹಕರು ಸುತ್ತಾಡಲು ಶುರು ಮಾಡಿದರು.
ಸಿಲಿಂಡರ್ ಸಮಸ್ಯೆ: ಕೊಪ್ಪಳ ಜಿಲ್ಲಾದ್ಯಂತ ಸಿಲಿಂಡರ್ ಸಮಸ್ಯೆ ಮುಂದುವರೆದಿದ್ದು, ಗುರುವಾರವೂ ಸಹ ಭಾರತ ಗ್ಯಾಸ್ ಎಜೆನ್ಸಿಯಲ್ಲಿ ಸಿಲಿಂಡರ್ ಸಿಗದೇ ಗ್ರಾಹಕರು ಪರದಾಡಿದರು.
ಲೋಡ್ ಬಾರದೇ ಇರುವುದರಿಂದ ಸಿಲಿಂಡರ್ ಬಂದಿಲ್ಲ. ಹೀಗಾಗಿ, ಬೀಗ ಹಾಕಿದ್ದರಿಂದ ಆತಂಕಗೊಂಡಿದ್ದ ಗ್ರಾಹಕರು ಎಜೆನ್ಸಿಯ ಎದುರು ಸಿಲಿಂಡರ್ಗಾಗಿ ಗೋಳಾಡುತ್ತಿರುವುದು ಕಂಡು ಬಂದಿತು.ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಗ್ರಾಹಕರಿಗೆ ಸಂತೈಸಿ ಕಳುಹಿಸುತ್ತಿರುವುದು ಕಂಡು ಬಂತು. ಕೆಲವೊಂದು ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ವಾಣಿಜ್ಯ ಸಿಲಿಂಡರ್ ಅಭಾವ, ಟಿ ಸ್ಟಾಲ್ ಬಂದ್ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗದೆ ಇರುವುದರಿಂದ ಸಣ್ಣಪುಟ್ಟ ಹೋಟೆಲ್ ಬಂದಾಗಿವೆ. ಅದರಲ್ಲೂ ಟೀ ಸ್ಟಾಲ್ನಲ್ಲಿ ಚಹ ಮಾರುವುದನ್ನು ಬಿಟ್ಟು, ಮಜ್ಜಿಗೆ ಮಾರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಕೊಪ್ಪಳ ಮೀಡಿಯಾ ಕ್ಲಬ್ ಬಳಿ ಇರುವ ಟೀ ಸ್ಟಾಲ್ನಲ್ಲಿ ಸಿಲಿಂಡರ್ ಸಮಸ್ಯೆಯಾಗಿದೆ. ಮನೆಯಲ್ಲಿ ಚಹ ಮಾಡಿಕೊಂಡು ಬಂದು ಅಂಗಡಿಯಲ್ಲಿಟ್ಟಿದ್ದಾನೆ ಮತ್ತು ಮಜ್ಜಿಗೆ ಮಾರಾಟ ಮಾಡುತ್ತಿದ್ದಾನೆ. ಸಿಲಿಂಡರ್ ಇರದೆ ಇರುವುದರಿಂದ ಸಮಸ್ಯೆಯಾಗಿದೆ ಎನ್ನುತ್ತಾನೆ.