ಸಾರಾಂಶ
- ಅಮ್ಮ ಯೋಜನೆಯಡಿ ಉಚಿತ ಆರೋಗ್ಯ ಶಿಬಿರ
ಕನ್ನಡಪ್ರಭ ವಾರ್ತೆ, ಕೊಪ್ಪಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ತಾವು ಸ್ಥಾಪಿಸಿದ ಅಮ್ಮ ಫೌಂಡೇಶನ್ನಡಿ ಅಮ್ಮ ಯೋಜನೆ ಎಂಬ ಹೆಸರಿನಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದ್ದು ಎಲ್ಲವೂ ರಾಜಕೀಯ ರಹಿತವಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಜೆಡಿಎಸ್ ಶೃಂಗೇರಿ ಕ್ಷೇತ್ರಾಧ್ಯಕ್ಷ ಬಿ.ಎಚ್.ದಿವಾಕರ್ ಭಟ್ ಭಂಡಿಗಡಿ ಹೇಳಿದರು. ಭಾನುವಾರ ಅಮ್ಮ ಫೌಂಡೇಶನ್ನ ಅಮ್ಮ ಯೋಜನೆಯಡಿ ಮಾವಿನಕಟ್ಟೆ ಕೋಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಅಮ್ಮ ಯೋಜನೆಯಡಿ ಕೊರೊನಾ ಸಮಯ ದಲ್ಲಿ ಆಹಾರ ಕಿಟ್ಗಳ ವಿತರಣೆ, ಔಷಧಿ, ಫೇಸ್ ಮಾಸ್ಕ್ ಹಾಗೂ ಇತರೆ ಅಗತ್ಯ ಔಷಧಿಗಳ ವಿತರಣೆ ಮುಂತಾದ ಕಾರ್ಯಗಳನ್ನು ಮಾಡಿದ್ದು ಕೋವಿಡ್ ನಂತರವೂ ತಮ್ಮ ಕಚೇರಿಯಲ್ಲಿ ಬೇಡಿಕೆಯಿದ್ದ ಅನೇಕ ಅನಾರೋಗ್ಯ ಪೀಡಿತರಿಗೆ ವಾಟರ್ ಬೆಡ್, ವ್ಹೀಲ್ಚೇರ್, ಮನೆ, ದೇವಸ್ಥಾನಗಳ ದುರಸ್ತಿಗೆ ಅನುದಾನ, ನೀಡುತ್ತಿರುವ ಶೆಟ್ಟರು ಮೈಸೂರಿನಲ್ಲಿ ತಮ್ಮದೇ ಒಡೆತನದ ಜ್ಞಾನಸರೋವರ ಎಂಬ ಅಂತರಾಷ್ಟ್ರೀಯ ಖಾಸಗಿ ಶಾಲೆ ನಡೆಸುತ್ತಿದ್ದರೂ ಸರ್ಕಾರಿ ಶಾಲೆಗಳು ಮುಚ್ಚಿ ಹೋಗ ಬಾರದೆಂಬ ಉದ್ದೇಶದಿಂದ ಶಾಲಾ ಮಕ್ಕಳಿಗೆ ಕಲಿಕಾ ವಸ್ತುಗಳ ವಿತರಣೆ, ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕ ಹೀಗೆ ಹತ್ತು ಹಲವು ಕಾರ್ಯ ಮಾಡುತ್ತಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಹಲವೆಡೆ ಆಸ್ಪತ್ರೆಗಳಿದ್ದರೂ ವೈದ್ಯಕೀಯ ಸಿಬ್ಬಂದಿಗಳಿಲ್ಲದಿರುವುದನ್ನು ಮನಗಂಡು ಕ್ಷೇತ್ರಾದ್ಯಂತ ಮೂರೂ ತಾಲೂಕುಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲು ಮುಂದಾಗಿದ್ದಾರೆ. ಇದೀಗ ೧೮ನೇ ಶಿಬಿರ ಕೋಡೂರಿನಲ್ಲಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇದು ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿನಯ್ ಕಣಿವೆ ಅಮ್ಮ ಫೌಂಡೇಶನ್ ಕಾರ್ಯಸೂಚಿ ಬಗ್ಗೆ ವಿವರಿಸಿದರು. ಕೊಪ್ಪ ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಕೆ.ಜಿ.ಶೋಭಿಂತ್, ಮುನಿಯೂರು ದೇವಸ್ಥಾನ ಸಮಿತಿ ಕಾರ್ಯದರ್ಶಿ ಗಿರೀಶ್ ಭಟ್, ಅಮ್ಮ ಫೌಂಡೇಶನ್ ನಿರ್ದೇಶಕ ಶಿವಕರ್ ಎಸ್.ಶೆಟ್ಟಿ, ಮುಂತಾದವರು ಮಾತನಾಡಿದರು. ಶಿಬಿರದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಜನ ಪಾಲ್ಗೊಂಡು ಹೃದಯ ತಪಾಸಣೆ, ಈಸಿಜಿ, ಮೂಳೆ ಮತ್ತು ಕೀಲು, ಸಾಮಾನ್ಯ ರೋಗ, ಮಧುಮೇಹ, ರಕ್ತದೊತ್ತಡ, ಮತ್ತು ನೇತ್ರ ತಪಾಸಣೆ ಮಾಡಿಸಿಕೊಂಡರು. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದ ತಜ್ಞ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆ, ಉಡುಪಿ ಪ್ರಸಾದ್ ನೇತ್ರಾಲಯದ ತಜ್ಞ ವೈದ್ಯರ ತಂಡದಿಂದ ಕಣ್ಣಿನ ತಪಾಸಣೆ ನಡೆಯಿತು. ಕಣ್ಣಿನ ಪೊರೆ ಚಿಕಿತ್ಸೆಗೆ ಆಯ್ಕೆಯಾದ ೧೭ ಜನರನ್ನು ಉಡುಪಿ ಪ್ರಸಾದ್ ಆಸ್ಪತ್ರೆಗೆ ಕರೆದೊಯ್ದು ಉಚಿತ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಅಮ್ಮ ಫೌಂಡೇಶನ್ ನಿರ್ದೇಶಕ ಪ್ರಭಾಕರ್ ಎಸ್.ಶೆಟ್ಟಿ, ಕೋಡೂರು ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ವೆಂಕಟೇಶ್, ಮಾಜಿ ಅಧ್ಯಕ್ಷ ಆನಂದ್ ಹಸಿರುಕೊಡಿಗೆ, ಮುಖ್ಯಶಿಕ್ಷಕ ಓಂಕಾರಪ್ಪ, ನಿವೃತ್ತ ಮುಖ್ಯಶಿಕ್ಷಕ ಸತೀಶ್ ಮಾಕಾರು, ಗೌರಿಗದ್ದೆಯ ಸುಮಾ ಅರುಣ್ ಮುಂತಾದವರಿದ್ದರು.