ಸಾರಾಂಶ
ಹಾನಗಲ್ಲ: ದಿನಾಚರಣೆ, ಹಬ್ಬ ಬಂದು ಹೋಗ್ತಾವ್, ಬರ್ತಾವ್. ಹೊಟ್ಟಿ ಪಡಿಪಾಟಲ, ಖರ್ಚು ನಿಲ್ಲಲ್ಲ. ದುಡಿದಿದ್ರ ಹೊಟ್ಟಿ ತುಂಬಲ್ಲ. ಕಾರ್ಮಿಕ ದಿನಾಚರಣೆ ಅಂತ ಮನ್ಯಾಗ ಕುಂತರ ಇವತ್ತಿನ ಪಗಾರ ಯಾರು ಕೊಡತಾರ ಎಂದು ದುಡಿಮೆಯೇ ದುಡ್ಡಿನ ತಾಯಿ ಅಂತ ಅಂತರಂಗದ ಮಾತುಗಳನ್ನು ಹೇಳಿದ ಕಾರ್ಮಿಕ ಮಹಮ್ಮದಹನೀಫ ಬಿಸ್ತಿ ಇವತ್ತೂ ಕೆಲಸ ಮಾಡೋದೆ ನನ್ನ ಖುಷಿ ಎಂದರು.ಗುರುವಾರ ಕಾರ್ಮಿಕ ದಿನಾಚರಣೆ ದಿನ ನವನಗರದ ಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ ಸಂದರ್ಭದಲ್ಲಿ ಮಾತನಾಡಿ, ಒಂದು ದಿನಕ್ಕ ಐದು ನೂರರಿಂದ ಆರೇಳು ನೂರು ಪಗಾರ ಸಿಗತೈತಿ. ಒಂದು ದಿನ ಮನ್ಯಾಗ ಕುಂತರ ಅಷ್ಟ ಪಗಾರ ಹೋಕೇತಿ. ಕಾರ್ಮಿಕ ದಿನಾಚರಣೆ ಅಂತ ಯಾರೂ ನಮಗೇನ ಸನ್ಮಾನ ಮಾಡಿ ಸಮಾರಂಭ ಮಾಡಿ ದುಡಿಯೋರಿಗೆ ಏನಾರ ಅನುಕೂಲ ಮಾಡತಾರ ಅಂದ್ರ ಅದು ಆಗಲ್ಲ. ಮನ್ಯಾಗ ಕುಂತು ಖಾಲಿ ಹರಟಿ ಹೊಡಿಯೋದಕ್ಕಿಂತ ದುಡಿಯೋದ ಲೇಸು ಎಂದು ತಮ್ಮ ಅಂತರಂಗದ ಮಾತು ಹೇಳಿದರು.ಕಾರ್ಮಿಕರಲ್ಲದವರಿಗೆ ಕಾರ್ಮಿಕರ ಸರ್ಕಾರದ ಸೌಲಭ್ಯ ಹೋಗುತ್ತಿದೆ. ಕೆಲಸ ಮಾಡುವವರಿಗೆ ಬಿಟ್ಟು ಮನ್ಯಾಗ ಇರೋರಿಗೆ ಸೌಲಭ್ಯ ಕೊಡತಾರು. ಏನು ವ್ಯವಸ್ಥಾ ಎಲ್ಲ ಹದಗೆಟ್ಟೇತಿ. ದುಡಿದು ತಿನ್ನೋದನ್ನ ದೇವರು ನಮಗ ಕೊಟ್ಟಾನ. ಅಷ್ಟ ಮಾಡಿಕೊಂಡು ಬದುಕು ನಡಸತೇವಿ. ಇದನ್ನ ಯಾರೂ ಬದಲು ಮಾಡಾಕ ಆಗಲ್ಲ. ಕಾರ್ಮಿಕ ದಿನಾಚರಣೆ ಹೆಸರಿಗಷ್ಟೇ ಎಂದ ಕಾರ್ಮಿಕ ಶಂಕರಣ್ಣ ಬಣಕಾರ ಬಿಸಿಲು ಬೇಗೆ, ಮಳಿ, ಚಳಿ ಎಲ್ಲವನ್ನೂ ಎದುರಿಸಿ ದುಡಿದು ಬದುಕೋದೆ ನಿಜವಾದ ಜೀವನ ಎಂದರು.ಕಾರ್ಮಿಕ ಕಾರ್ಡ್ ಇದ್ದವರಿಗೆ ಮದುವೆಗೆ, ಮೊದಲ ಹೆರಿಗೆಗೆ, ತಾಯಿ ಮಗು ಸಹಾಯಹಸ್ತ, ಸ್ಕಾಲರಶಿಪ್, ಕಾರ್ಮಿಕ ಕಿಟ್, ಸ್ಕೂಲ್ ಬ್ಯಾಗ್, ಲ್ಯಾಪ್ಟಾಪ್, ಸಾವು- ನೋವಿಗೆ ಸೇರಿದಂತೆ ಸರ್ಕಾರದ ಸೌಲಭ್ಯ ಸಂದಾಯವಾಗುತ್ತದೆ. ತಾಲೂಕಿನಲ್ಲಿ ಈಗ 6 ಸಾವಿರ ಕಾರ್ಮಿಕ ಕಾರ್ಡುದಾರರಿದ್ದಾರೆ ಎಂಬ ಮಾಹಿತಿ ಇದೆ. ತಾಲೂಕಿನಲ್ಲಿ 30 ಸಾವಿರ ಕಾರ್ಮಿಕ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಇನ್ನೂ ಹೊಸ ಕಾರ್ಡ್ಗಳಿಗಾಗಿ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ
ರಾಣಿಬೆನ್ನೂರು: ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಾಮಾಜಿಕ ಜೀವನಕ್ಕೆ ಸಹಕಾರ ನೀಡುವ ಸಾಮೂಹಿಕ ವಿವಾಹ ಆಯೋಜನೆ ಉತ್ತಮ ಕಾರ್ಯ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ನುಡಿದರು.ನಗರದ ದೊಡ್ಡಪೇಟೆ ಬಸವೇಶ್ವರ ದೇವಸ್ಥಾನದ ವತಿಯಿಂದ ಬಸವ ಜಯಂತಿ ಅಂಗವಾಗಿ ಗುರುವಾರ ಉಚಿತ ಸಾಮೂಹಿಕ ವಿವಾಹ ಹಾಗೂ ಬಸವೇಶ್ವರ ದೇವರ ರಥೋತ್ಸವ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗಿ, ಪ್ರಗತಿಗೆ ಪೂರಕವಾಗುತ್ತದೆ. ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹದಲ್ಲಿ ಸಂಸಾರ ಜೀವನಕ್ಕೆ ಪದಾರ್ಪಣೆ ಆದರ್ಶವಾಗಿದ್ದು, ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದರು.ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರೇಶ್ವರ ಶಿವಾಚಾರ್ಯರು ಮಾತನಾಡಿ, ಸಾಮೂಹಿಕ ವಿವಾಹ ಎಂದರೆ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರ ಧಾರ್ಮಿಕ ಕ್ಷೇತ್ರ, ಸಹಸ್ರಾರು ಭಕ್ತರ ಮತ್ತು ಮಠಾಧೀಶರ ಆಶೀರ್ವಾದದೊಂದಿಗೆ ಸಾಮೂಹಿಕ ವಿವಾಹ ಬಂಧನಕ್ಕೊಳಗಾಗುವ ಭಾಗ್ಯ ಜೀವನದ ಸಾರ್ಥಕತೆಯ ಕ್ಷಣವಾಗಿದೆ. ವಿವಾಹ ಬಂಧನವೆಂದರೆ ಎರಡು ಮನಸ್ಸು, ಜೀವಗಳು ಒಂದಾಗಿ ಪರಸ್ಪರ ಹಾಲುಜೇನಿನಂತೆ ಅನೋನ್ಯತೆಯಿಂದ ಜೀವನ ಸಾಗಿಸುವುದಾಗಿದೆ. ಪ್ರೀತಿ ತುಂಬಿದ ಸಂಸಾರದ ಜೋಡೆತ್ತಿನ ಬಂಡಿ ಸರಾಗವಾಗಿ ಸಾಗಿದಾಗ ಮಾತ್ರ ಆ ಮನೆ ಸ್ವರ್ಗವಾಗುತ್ತದೆ ಎಂದರು.ದೇವಸ್ಥಾನ ಸಮಿತಿ ಅಧ್ಯಕ್ಷ ಅಜಯ ಜಂಬಗಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ 34 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಂಗಡಿ, ಪ್ರಭುಸ್ವಾಮಿ ಕರ್ಜಗಿಮಠ, ಮಲ್ಲಿಕಾರ್ಜುನ ಪೂಜಾರ, ಮಂಜುನಾಥ ಕಬ್ಬಿಣದ, ಸಿದ್ದು ಚಿಕ್ಕಬಿದರಿ, ಬಸವರಾಜ ಚಿಮ್ಮಲಗಿ, ಯುವರಾಜ ಬಾರಟಕ್ಕೆ, ಅನಿಲಕುಮಾರ ಸಿದ್ದಾಳಿ, ಪವನಕುಮಾರ ಮಲ್ಲಾಡದ, ಅಭಿಲಾಷ ಪಟ್ಟಣಶೆಟ್ಟಿ ಮತ್ತಿತರರಿದ್ದರು.