ಮಣಿಪಾಲ: ಮರಣಕ್ಕೆ ಕಾರಣವಾಗಬಹುದಾದ ಯಕೃತ್ತಿನ ರಕ್ತಸ್ರಾವವನ್ನು ಶಸ್ತ್ರಚಿಕಿತ್ಸೆ ರಹಿತವಾಗಿ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರು ನೂತನ ತಂತ್ರಜ್ಞಾನ ನೆರವಿನಿಂದ ಗುಣಪಡಿಸಿದ್ದಾರೆ.

60 ವರ್ಷದ ವ್ಯಕ್ತಿ ರಕ್ತವಾಂತಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ದೀರ್ಘಕಾಲದ ಯಕೃತ್ ಕಾಯಿಲೆ ಇತ್ತು ಮತ್ತು ಪೋರ್ಟಲ್ ಹೈಪರ್ಟೆನ್ಷನ್‌ನಿಂದ ಈ ಸಮಸ್ಯೆ ಉಂಟಾಗಿತ್ತು. ಇಂತಹ ಯಕೃತ್ ಸಂಬಂಧಿ ಕಾಯಿಲೆಗಳಿಂದ ಉಂಟಾಗುವ ರಕ್ತಸ್ರಾವವನ್ನು ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಮರಣ ಪ್ರಮಾಣ ಹೆಚ್ಚಾಗಿರುತ್ತದೆ.

ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿ ತಜ್ಞ ಡಾ. ಶಿರಣ್ ಶೆಟ್ಟಿ ಅವರ ತಂಡವು ಎಂಡೋ ಅಲ್ಟ್ರಾಸೌಂಡ್‌ ತಂತ್ರಜ್ಞಾನ ಬಳಸಿಕೊಂಡು ರೋಗಿಯ ಹೊಟ್ಟೆಯ ಮೇಲ್ಭಾಗದಲ್ಲಿ ಉಬ್ಬಿದ್ದ ರಕ್ತನಾಳವು ಒಡೆದು ರಕ್ತಸ್ರಾವ ಆಗುತ್ತಿದ್ದುದನ್ನು ಪತ್ತೆ ಮಾಡಿತು. ನಂತರ ಡಾ. ಹರ್ಷಿತ್ ಕೆ. ನೇತೃತ್ವದ ಇಂಟರ್ವೆನ್ಷನಲ್ ರೇಡಿಯಾಲಜಿ ತಂಡವು ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಮೂಲಕ ರಕ್ತಸ್ರಾವಕ್ಕೆ ಕಾರಣವಾಗಿದ್ದ ರಕ್ತನಾಳದ ಸ್ರಾವವನ್ನು ಮುಚ್ಚಿತು.

ಈ ಚಿಕಿತ್ಸೆ ಬಳಿಕ ರೋಗಿ ಚೇತರಿಸಿಕೊಂಡಿದ್ದು, ಅವರನ್ನು 48 ಗಂಟೆಗಳೊಳಗೆ ಮನೆಗೆ ಕಳುಹಿಸಿಕೊಡಲಾಗಿದೆ.ಕೆಲವು ವರ್ಷಗಳ ಹಿಂದೆ ದೊಡ್ಡ ಶಸ್ತ್ರಚಿಕಿತ್ಸೆ ಮತ್ತು ವಾರಗಟ್ಟಲೆ ಆಸ್ಪತ್ರೆ ವಾಸವನ್ನು ಎದುರಿಸಬೇಕಾಗಿದ್ದ ಈ ಸಮಸ್ಯೆಗೆ ಈಗ ಸೂಜಿ ಚುಚ್ಚಿದಷ್ಟು ಸಣ್ಣ ರಂದ್ರದ ಮೂಲಕ, ದೇಹದ ಮೇಲೆ ಗಾಯವಿಲ್ಲದೆ ಚಿಕಿತ್ಸೆ ನೀಡಲಾಯಿತು.ಈ ನೂತನ ಎಂಡೋಸ್ಕೋಪಿ ಚಿಕಿತ್ಸೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯ ಒಡೆದುಹೋಗಿದ್ದ ನಿಖರವಾದ ರಕ್ತನಾಳವನ್ನು ಗುರುತಿಸಿ ನಿಖರವಾಗಿ ಚಿಕಿತ್ಸೆ ನೀಡಲು ಸಹಾಯಕವಾಗಿದೆ ಎಂದು ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಶಿರಣ್ ಶೆಟ್ಟಿ ಹೇಳಿದ್ದಾರೆ.