ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯದಲ್ಲಿ ಸಂಚಾರ ಪೊಲೀಸರು ಬೈಕ್ ಅಡ್ಡಗಟ್ಟಿದ್ದರ ಪರಿಣಾಮ ತಾಲೂಕಿನ ಗೊರವನಹಳ್ಳಿಯ 3 ವರ್ಷದ ಬಾಲಕಿ ರಿತೀಕ್ಷಾ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಎದುರು ವಿವಿಧ ಸಂಘಟನೆಗಳ ಒಕ್ಕೂಟದ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲೇ ಸೂಕ್ತ ಚಿಕಿತ್ಸೆ ನೀಡಿದ್ದರೆ ಪಾಲಕರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಹಾಗೂ ದುರ್ಘಟನೆ ಸಂಭವಿಸುತ್ತಿರಲಿಲ್ಲ ಎಂದು ಆರೋಪಿಸಿ ಆಸ್ಪತ್ರೆ ಆಡಳಿತಾಧಿಕಾರಿ ಹಾಗೂ ಮುಖ್ಯ ವೈದ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಸಂಘಟನೆಗಳ ಒಕ್ಕೂಟದ ಸಂಚಾಲಕ ನ.ಲಿ.ಕೃಷ್ಣ ಮಾತನಾಡಿ, ಗೊರವನಹಳ್ಳಿಯಲ್ಲಿ ನಾಯಿ ಕಚ್ಚಿದ ಬಾಲಕಿಯನ್ನು ಪೋಷಕರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಮಿಮ್ಸ್ ಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಈ ವೇಳೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡದೇ ಬಾಲಕಿ ರಿತೀಕ್ಷಾ ಸಾವಿಗೆ ಸಂಚಾರಿ ಪೊಲೀಸರಷ್ಠೆ ಅಲ್ಲದೇ, ವೈದ್ಯರ ನಿರ್ಲಕ್ಷ್ಯವು ಕಾರಣ ಎಂದು ಆರೋಪಿಸಿದರು.ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ಆಸ್ಪತ್ರೆಯಲ್ಲಿ ಸರಿಯಾಗಿ ಸಾರ್ವಜನಿಕರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಸ್ಕ್ಯಾನಿಂಗ್ ಹಾಗೂ ಔಷಧಿಗಳಿಗೆ ಹೊರಗೆ ಕಳುಹಿಸುತ್ತಾರೆ. ಎಷ್ಟೋ ಮಂದಿ ರೋಗಿಗಳಿಗೆ ಸಣ್ಣಪುಟ್ಟದಕ್ಕೂ ಜಿಲ್ಲಾಸ್ಪತ್ರೆಗೆ ಹೋಗಿ ಎನ್ನುತ್ತಾರೆ ಎಂದು ದೂರಿದರು.
ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್ ಮಾತನಾಡಿ, ಆಸ್ಪತ್ರೆಗೆ ವೈದ್ಯರು ನಿಗಧಿತ ಸಮಯಕ್ಕೆ ಬಂದಿಲ್ಲ. ಕರ್ತವ್ಯದ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ತಹಸೀಲ್ದಾರ್ ಸ್ಮಿತಾರಾಮು ಮಾತನಾಡಿ, ನಾಯಿ ಕಡಿತದಿಂದ ಚಿಕಿತ್ಸೆಗೆ ಬಂದ ಬಾಲಕಿ ರಿತೀಕ್ಷಾಗೆ ಜಿಲ್ಲಾಸ್ಪತ್ರೆಗೆ ಶಿಪಾರಸ್ಸು ಮಾಡಿದ ವೈದ್ಯರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡದೆ ನಿರ್ಲಕ್ಷ್ಯ ತೊರಿದ್ದು ವಿಷಾದನೀಯ ಎಂದರು.
ತಾಪಂ ಇಒ ರಾಮಲಿಂಗಯ್ಯ ಮಾತನಾಡಿ, 42 ಗ್ರಾಪಂಗಳ ಬಜೆಟ್ ಪರಿಷ್ಕರಿಸಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಕ್ರಮ ವಹಿಸಲಾಗುವುದು. ಈ ಸಂಬಂಧ ತುರ್ತಾಗಿ ಪಿಡಿಒಗಳ ಗಮನ ಸೆಳೆಯುವುದಾಗಿ ತಿಳಿಸಿದರು.ಆರೋಗ್ಯ ಇಲಾಖೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್, ತಾಲೂಕು ಆರೊಗ್ಯ ವೈಧ್ಯಾಧಿಕಾರಿ ರವೀಂದ್ರ ಬಿ.ಗೌಡ, ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಮಾತನಾಡಿದರು.
ಪ್ರತಿಭಟನೆಯಲ್ಲಿ ಚನ್ನಸಂದ್ರ ಲಕ್ಷ್ಮಣ್, ಅವಿನಾಶ್ ಗೊಪಾಲ್, ಚನ್ನಪ್ಪ, ರೈತಸಂಘಟನೆ ಶಂಕರೇಗೌಡ, ನಾಗರಾಜು, ವಿನೊದ್ ಬಾಬು, ಉಮೇಶ್, ಕಸಾಪ ತಾಲೂಕು ಅಧ್ಯಕ್ಷ ಸುನೀಲ್, ಮುಖಂಡರಾದ ಮ.ನ.ಪ್ರಸನ್ನಕುಮಾರ್, ಹೂತಗೆರೆ ಜನಾರ್ಧನ, ಆತಗೂರು ನಿಂಗಪ್ಪ, ಮರಳಿಗ ಶಿವರಾಜ್, ಬಸವರಾಜ್, ಮಲವರಾಜ್ ಪುಟ್ಟಲಿಂಗಯ್ಯ, ಅಪ್ಪಾಜಿ, ಶಿವಕುಮಾರ್ ಇದ್ದರು.