ಸಾರಾಂಶ
ಪಾರದರ್ಶಕ ಆಡಳಿತ ಜಾರಿಗೊಳಿಸುವ ನಿಟ್ಟಿನಲ್ಲಿ ಈಗ ನಗರದ ಎಲ್ಲ ಎಸಿಪಿ ಹಾಗೂ ಇನ್ಸ್ಪೆಕ್ಟರ್ ವಾಹನಗಳಿಗೆ ಡ್ಯಾಶ್ ಕ್ಯಾಮೆರಾವನ್ನು ಅಳವಡಿಸುವ ಮಹತ್ವದ ನಿರ್ಧಾರವನ್ನು ಪೊಲೀಸ್ ಆಯುಕ್ತ ಬಿ.ದಯಾನಂದ್ ತೆಗೆದುಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪಾರದರ್ಶಕ ಆಡಳಿತ ಜಾರಿಗೊಳಿಸುವ ನಿಟ್ಟಿನಲ್ಲಿ ಈಗ ನಗರದ ಎಲ್ಲ ಎಸಿಪಿ ಹಾಗೂ ಇನ್ಸ್ಪೆಕ್ಟರ್ ವಾಹನಗಳಿಗೆ ಡ್ಯಾಶ್ ಕ್ಯಾಮೆರಾವನ್ನು ಅಳವಡಿಸುವ ಮಹತ್ವದ ನಿರ್ಧಾರವನ್ನು ಪೊಲೀಸ್ ಆಯುಕ್ತ ಬಿ.ದಯಾನಂದ್ ತೆಗೆದುಕೊಂಡಿದ್ದಾರೆ.ಈ ಮೊದಲು ಹೊಯ್ಸಳ ವಾಹನಗಳಿಗೆ ಡ್ಯಾಶ್ ಕ್ಯಾಮೆರಾವನ್ನು ಅಳವಡಿಸಿ ಗಸ್ತು ಸಿಬ್ಬಂದಿ ಕಾರ್ಯನಿರ್ವಹಣೆ ಮೇಲೆ ನಿಗಾವಹಿಸಲಾಗಿತ್ತು. ಈಗ ಎಸಿಪಿ ಹಾಗೂ ಪಿಐ ಜೀಪುಗಳಿಗೆ ಸಹ ಡ್ಯಾಶ್ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದಾರೆ.
‘ಪಾರದರ್ಶಕ ಹಾಗೂ ಉತ್ತರಾದಾಯಿತ್ವ ಕಾಣಿಸುವ ನಿಟ್ಟಿನಲ್ಲಿ ಹೊಯ್ಸಳ ವಾಹನಗಳ ಡ್ಯಾಶ್ ಕ್ಯಾಮೆರಾ ಅಳವಡಿಸಲಾಯಿತು. ಈ ಕ್ಯಾಮೆರಾಗಳ ಮೂಲಕ ಘಟನೆಗಳು ಹಾಗೂ ವಾಹನ ತಲುಪಿದ ನಿಖರ ಸಮಯ ಎಲ್ಲವು ಸಹ ಚಿತ್ರೀಕರಿಸಲಾಗುತ್ತದೆ. ಇದರಿಂದ ಹೊಯ್ಸಳ ವಾಹನಗಳ ನಿರ್ವಹಣೆ ಕುರಿತು ಖಚಿತ ಮಾಹಿತಿ ಸಿಗುತ್ತಿದೆ. ಇದರ ಮುಂದುವರೆದ ಭಾಗವಾಗಿ ಈಗ ಎಲ್ಲ ಎಸಿಪಿ ಹಾಗೂ ಇನ್ಸ್ಪೆಕ್ಟರ್ ವಾಹನಗಳಿಗೂ ಡ್ಯಾಶ್ ಕ್ಯಾಮೆರಾ ಅಳವಡಿಸಲಾಗುತ್ತದೆ’ ಎಂದು ‘ಎಕ್ಸ್’ ತಾಣದಲ್ಲಿ ಪೊಲೀಸ್ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.ಹೊಯ್ಸಳ ವಾಹನಗಳ ಅಸಮಪರ್ಕ ಕಾರ್ಯನಿರ್ವಹಣೆ ಹಾಗೂ ಭ್ರಷ್ಟಾಚಾರದ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಆಯುಕ್ತರು, ಹೊಯ್ಸಳ ಸಿಬ್ಬಂದಿ ಕಾರ್ಯದಕ್ಷತೆ ಹೆಚ್ಚಿಸುವ ಸಲುವಾಗಿ ಡ್ಯಾಶ್ ಕ್ಯಾಮೆರಾವನ್ನು ಅಳವಡಿಸಿದ್ದರು. ಈ ಕ್ಯಾಮೆರಾಗಳು ನಗರದ ಕಮಾಂಡ್ ಸೆಂಟರ್ಗೆ ಸಂಪರ್ಕ ಹೊಂದಿರುತ್ತವೆ. ಕರ್ತವ್ಯ ಲೋಪವೆಸಗಿದ ಸಿಬ್ಬಂದಿ ತಪ್ಪು ಮಾಹಿತಿ ನೀಡಿದರೆ ಸಿಕ್ಕಿ ಬೀಳುತ್ತಾರೆ.