ಸಾರಾಂಶ
ಹರಪನಹಳ್ಳಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೋಂದಾಯಿತ ಕುಟುಂಬಗಳ ಜಾಬ್ ಕಾರ್ಡ್ ವ್ಯಾಲಿಡೇಶನ್ನ್ನು ಇ-ಕೆವೈಸಿ ಮುಖಾಂತರ ಪೂರ್ಣಗೊಳಿಸಲಾಗುತ್ತಿದೆ. ಎಲ್ಲ ನರೇಗಾ ಕೂಲಿಕಾರರು ಈ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹರಪನಹಳ್ಳಿ ತಾಪಂ ಇಒ ಚಂದ್ರಶೇಖರ್ ವೈ.ಎಚ್. ತಿಳಿಸಿದ್ದಾರೆ.ಅವರು ಈ ಕುರಿತು ಹೇಳಿಕೆ ನೀಡಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶದಂತೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಸೂಚನೆಯಂತೆ ವಿಜಯನಗರ ಜಿಪಂನ ಸಿಇಒ ಹಾಗೂ ಉಪಕಾರ್ಯದರ್ಶಿಗಳ ಮಾರ್ಗದರ್ಶನದಂತೆ ಹರಪನಹಳ್ಳಿ ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಕ್ರಿಯ ಕೂಲಿಕಾರರ ಜಾಬ್ಕಾರ್ಡ್ ಅನ್ನು ಇ-ಕೆವೈಸಿ ಮುಖಾಂತರ ವ್ಯಾಲಿಡೇಟ್ ಮಾಡಲಾಗುತ್ತಿದೆ. ನರೇಗಾ ಯೋಜನೆಯ ಎಲ್ಲ ಗ್ರಾಪಂಗಳ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ವ್ಯಾಲಿಡೇಶನ್ ಅಭಿಯಾನದ ಮಾದರಿಯಲ್ಲಿ ಅತೀ ತುರ್ತಾಗಿ ಇ-ಕೆವೈಸಿ ಮುಖಾಂತರ ಪೂರ್ಣಗೊಳಿಸಲು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.ನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರಲ್ಲಿ ಸಕ್ರಿಯ ಕೂಲಿಕಾರರ ಮಾಹಿತಿಯನ್ನು ಎನ್ಎಂಎಂಎಸ್ ಮೊಬೈಲ್ ತಂತ್ರಾಂಶದಲ್ಲಿ ಇ-ಕೆವೈಸಿ ಮಾಡುವ ಬಗ್ಗೆ ಈಗಾಗಲೇ ಎಲ್ಲ ಗ್ರಾಮ ಪಂಚಾಯಿತಿ, ಗ್ರಾಮ ಮಟ್ಟದಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಹರಪನಹಳ್ಳಿ ತಾಪಂನ ನರೇಗಾ ಶಾಖೆಯ ಐಇಸಿ ವಿಭಾಗದಿಂದ ನಿರ್ಮಿಸಿದ ಧ್ವನಿ ಮುದ್ರಿಕೆಯನ್ನು ಗ್ರಾಪಂನ ಕಸ ಸಂಗ್ರಹಿಸುವ ವಾಹನಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಎನ್ಎಂಎಂಎಸ್ ಇ-ಕೆವೈಸಿ ಅಪ್ಡೇಟ್ ಮಾಡಿಸಲು ಗ್ರಾಪಂ ಮಟ್ಟದ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಆದರೆ, ಕೆಲ ಗ್ರಾಮದಲ್ಲಿ ಮನರೇಗಾ ಕೂಲಿಕಾರರು ವೈಯಕ್ತಿಕ ಕೆಲಸಕ್ಕಾಗಿ ಮನೆಯಲ್ಲಿ ಇರದೇ ಬೇರೆಡೆ ಹೋದಾಗ ಮನೆಮನೆ ಭೇಟಿ ನೀಡಿದ ಸಂದರ್ಭದಲ್ಲಿ ಮೇಟಿ ಅಥವಾ ನರೇಗಾ ಸಿಬ್ಬಂದಿಗೆ ಅಲಭ್ಯವಾದಾಗ ಇ-ಕೆವೈಸಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ನರೇಗಾ ಕೂಲಿಕಾರರಿಗೆ ಕೆಲಸ ನೀಡುವ ಸಂದರ್ಭದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಎಲ್ಲ ಮನರೇಗಾ ಕೂಲಿಕಾರರ ಆದಷ್ಟು ಶೀಘ್ರ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕಿದೆ ಎಂದರು.
ಗ್ರಾಪಂನಲ್ಲಿ ಉಚಿತವಾಗಿ ಇ-ಕೆವೈಸಿ ಮಾಡಿಕೊಡಲಾಗುತ್ತಿದೆ. ಜತೆಗೆ ಮೇಟಿಗಳ ಮೂಲಕವಾದರೂ ಇಕೆವೈಸಿ ಮಾಡಿಸಿಕೊಳ್ಳಬಹುದು. ನರೇಗಾ ಯೋಜನೆಯ ಪಾರದರ್ಶಕ ಅನುಷ್ಟಾನಕ್ಕೆ ಮತ್ತೊಂದು ಹೆಜ್ಜೆ ಇ-ಕೆವೈಸಿ ಆಗಿದ್ದು, ನರೇಗಾ ಕೂಲಿಕಾರರು, ಕಾಯಕ ಬಂಧುಗಳು ಇ-ಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಗ್ರಾಮ ಪಂಚಾಯತಿ ಪಿಡಿಓ, ಕಾರ್ಯದರ್ಶಿ, ಡಿಇಒ, ಬಿಎಫ್ಟಿ, ಜಿಕೆಎಂ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.