ಸಾರಾಂಶ
ನರೇಗಲ್ಲ: ಎನ್ಎಸ್ಎಸ್ ಶಿಬಿರದಿಂದ ರಾಷ್ಟ್ರೀಯತೆ, ಭಾವೈಕ್ಯತೆ, ಸಹಬಾಳ್ವೆ, ನಾಯಕತ್ವ ಗುಣ ಬೆಳೆಯುತ್ತದೆ. ಇದರಿಂದ ಯುವಕರಲ್ಲಿ ಸೇವಾ ಮನೋಭಾವದ ಜತೆಗೆ ವೈಜ್ಞಾನಿಕತೆಯೂ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹನಮಂತಪ್ಪ ಎಚ್. ಅಬ್ಬಿಗೇರಿ ಹೇಳಿದರು. ಅವರು ಸ್ಥಳೀಯ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವತಿಯಿಂದ ಮಜರೆ ಕೋಡಿಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ನಡೆದ ಎನ್ಎಸ್ಎಸ್ ಘಟಕದ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಡ ಹಾಗೂ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ಕಲಿಯುವ ಇಲ್ಲಿನ ಸರ್ಕಾರಿ ಕಾಲೇಜಿಗೆ ಹೋಗಲು ರಸ್ತೆ ಸಮಸ್ಯೆ ಇರುವ ಕಾರಣ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಆದ್ದರಿಂದ ಆದಷ್ಟು ಬೇಗ ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಎಂದರು.
ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ಭೂಮಿಯ ಮೇಲೆ ನಾಯಕರು ಹುಟ್ಟುತ್ತಾರೆ, ಬೆಳೆಯುತ್ತಾರೆ, ಸಾಯುತ್ತಾರೆ. ಆದರೆ ನಾಯಕತ್ವ ಎಂದಿಗೂ ಸಾಯುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳು ತಮ್ಮನ್ನು ಕ್ರಿಯಾಶೀಲ ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ನಾಯಕತ್ವ ಗುಣಗಳಿಂದ ಉತ್ತಮ ಯೋಜನೆ ಮತ್ತು ಕರ್ತವ್ಯದಿಂದ ಜೀವನದ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದರು.ಪ.ಪಂ. ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಸರ್ಕಾರಿ ಕಾಲೇಜಿನ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಕಾರ್ಯಗಳು ನಡೆದಿವೆ. ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪ್ರಾಂಶುಪಾಲ ಎಸ್. ಎಲ್. ಗುಳೆದಗುಡ್ಡ ಮುಂತಾದವರು ಮಾತನಾಡಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಅವರನ್ನು ಸನ್ಮಾನಿಸಲಾಯಿತು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶಿವಮೂರ್ತಿ ಕುರೇರ, ಸುನಂದಾ ಮುಂಜಿ, ಅಂಜನಮೂರ್ತಿ ಕೆ. ಎಚ್., ಜಯಶ್ರೀ ಮುತಗಾರ, ವಿನಯಶ್ರೀ, ಶಶಿಕಲಾ ವಿ. ಎಸ್., ವಿ. ಸಿ. ಇಲ್ಲೂರ, ವಿ.ಕೆ. ಸಂಗನಾಳ, ಕಿರಣ ರಂಜಣಗಿ, ಎನ್. ಎಸ್. ಹೊನ್ನೂರ, ಚಂದ್ರು ಸಂಶಿ, ಎಸ್. ಬಿ. ಕಿನ್ನಾಳ, ಬಸವರಾಜ ಎಸ್. ಮಡಿವಾಳರ, ಬಿ.ಕೆ. ಕಂಬಳಿ, ಪ್ರೇಮಾ ಕಾತ್ರಾಳ, ಶ್ವೇತಾ ಹುಣಸಿಮರದ, ಶಂಕರ ನರಗುಂದ, ಎಂ.ಎಫ್. ತಹಸೀಲ್ದಾರ್, ಕೆ.ಎನ್. ಕಟ್ಟಿಮನಿ, ಸಿದ್ದು ನವಲಗುಂದ, ಮಲ್ಲಪ್ಪ ಸಮಗಂಡಿ ಇದ್ದರು.