ಸಾರಾಂಶ
ರಾಣಿಬೆನ್ನೂರು: ವಿದ್ಯಾರ್ಥಿಗಳಿಗೆ ಲೋಕಸೇವೆ ಮೂಲಕ ರಾಷ್ಟ್ರನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡಂತಹ ಅನುಭವ ನೀಡಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಸಹಕಾರಿಯಾಗಿವೆ ಎಂದು ಎನ್ಎಸ್ಎಸ್ ಜಿಲ್ಲಾ ನೋಡೆಲ್ ಅಧಿಕಾರಿ ಎಚ್. ಶಿವಾನಂದ ಹೇಳಿದರು.
ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶುಕ್ರವಾರ ಸಂಜೆ ರಾಣಿಬೆನ್ನೂರಿನ ಶ್ರೀ ಬಸವಚೇತನ ಶಿಕ್ಷಣ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.ಮಹಾತ್ಮಾ ಗಾಂಧೀಜಿ ಕನಸಿನಂತೆ ಶಿಕ್ಷಣದ ಜೊತೆಗೆ ನಾಯಕತ್ವ ಗುಣ ಹಾಗೂ ದೇಶ ಭಕ್ತಿ ಮೂಡಿಸುವ ಕೆಲಸವನ್ನು ಎನ್ಎಸ್ಎಸ್ ಮಾಡುತ್ತದೆ. ಸ್ವಚ್ಛ ಭಾರತದ ಕನಸು ನನಸಾಗಲು ಎಲ್ಲರೂ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಬೇಕು. ವಿದ್ಯಾರ್ಥಿಗಳು ಉತ್ತಮ ಜೀವನ ಕೌಶಲ್ಯಗಳನ್ನು ರೂಪಿಸಿಕೊಂಡು ರಾಮರಾಜ್ಯ ಮಾಡಲು ಮುಂದಾಗಬೇಕು. ವಿದ್ಯಾರ್ಥಿಗಳಲ್ಲಿ ಸೂಕ್ತ ಪ್ರತಿಭೆ ಹೊರಹಾಕಲು ಶಿಬಿರದ ವೇದಿಕೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಶಿಬಿರಕ್ಕೆ ಚಾಲನೆ ನೀಡಿದ ರಾಣಿಬೆನ್ನೂರಿನ ದೊಡ್ಡಪೇಟೆ ವಿರಕ್ತಮಠದ ಗುರುಬಸವ ಸ್ವಾಮೀಜಿ ಮಾತನಾಡಿ, ಸ್ವಚ್ಛತೆ ಇದ್ದಲ್ಲಿ ಉತ್ತಮ ಆರೋಗ್ಯವಿರಲು ಸಾಧ್ಯವಿದೆ. ಹಳ್ಳಿಗಳು ಅಭಿವೃದ್ಧಿ ಹೊಂದಲು ಪರಿಸರ ಸಂರಕ್ಷಣೆಗೆ ಯುವಕರು ಮುಂದಾಗಬೇಕು. ಶಿಬಿರಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಅರ್ಹರಾಗಿರುತ್ತಾರೆ. ಆರೋಗ್ಯ ಕಾಳಜಿ, ಸ್ವಚ್ಛತೆ, ಜನಜಾಗೃತಿಯಂತಹ ವಿಷಯಗಳನ್ನು ಜನರಿಗೆ ತಲುಪಿಸಲು ಶಿಬಿರಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಶ್ರದ್ಧೆ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುವಂತೆ ತಿಳಿಸಿದರು.ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಗಚ್ಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಸಿದ್ದಣ್ಣ ಕಡೂರ, ಸೋಮನಗೌಡ ಮಾಳಗಿ, ರಾಜೀವ ಕನ್ನಪ್ಪಳವರ, ಪ್ರೊ. ಗಿರಿಜಾ ಬೇವಿನಹಳ್ಳಿ, ಜ್ಯೋತಿ ಕಟ್ಟಿಮನಿ, ಪವಿತ್ರಾ ಯಡಚಿ, ಕಾರ್ಯಕ್ರಮದ ಅಧಿಕಾರಿ ಹಾಲೇಶ ಓಲೇಕಾರ, ಪ್ರೊ. ಕೃಷ್ಣ ಯರಬಾಳ ಮತ್ತಿತರರು ಉಪಸ್ಥಿತರಿದ್ದರು.