ರಾಷ್ಟ್ರವನ್ನು ಬಲಿಷ್ಠವನ್ನಾಗಿ ಮಾಡುವ ಮೂಲಕ ಎಲ್ಲರಲ್ಲೂ ಸೇವಾ ಭಾವನೆ ಬೆಳೆಸಿ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸತನದ ಶಕ್ತಿ ತುಂಬಲು ಸಹಕಾರಿಯಾಗಿದೆ.

ಶಿರಹಟ್ಟಿ: ವಿದ್ಯಾರ್ಥಿಗಳ ಕ್ರಿಯಾಶೀಲ ವ್ಯಕ್ತಿತ್ವ ಹೊರಹೊಮ್ಮಲು ಹಾಗೂ ಶಿಸ್ತು, ಶ್ರದ್ಧೆ, ಪ್ರಾಮಾಣಿಕ ಪ್ರಯತ್ನ, ಸಹಬಾಳ್ವೆ, ಸೇವಾ ಮನೋಭಾವ, ಭ್ರಾತೃತ್ವ ಭಾವನೆ ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಅತ್ಯವಶ್ಯವಾಗಿದೆ ಎಂದು ಫಕೀರೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಉಮೇಶ ಅರಹುಣಸಿ ತಿಳಿಸಿದರು.ಫಕೀರೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವತಿಯಿಂದ ತಾಲೂಕಿನ ಕೊಂಚಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ೨೦೨೫- ೨೬ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎನ್‌ಎಸ್‌ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಬದಲಾವಣೆ ತರುತ್ತದೆ. ರಾಷ್ಟ್ರ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.ರಾಷ್ಟ್ರವನ್ನು ಬಲಿಷ್ಠವನ್ನಾಗಿ ಮಾಡುವ ಮೂಲಕ ಎಲ್ಲರಲ್ಲೂ ಸೇವಾ ಭಾವನೆ ಬೆಳೆಸಿ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸತನದ ಶಕ್ತಿ ತುಂಬಲು ಸಹಕಾರಿಯಾಗಿದೆ. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದ್ದು, ಯುವಶಕ್ತಿ ಮತ್ತು ಸಾಮರ್ಥ್ಯವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವ ಮೂಲಕ ಅವರಲ್ಲಿ ಸಮುದಾಯ ಸೇವೆಯ ಉತ್ಸಾಹವನ್ನು ಮೂಡಿಸುತ್ತಿದೆ. ವಿದ್ಯಾರ್ಥಿಗಳು ಸೇವಾ ಮನೋಭಾವ ಮತ್ತು ನಾಯಕತ್ವ ಗುಣ ಬೆಳಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದರು.ಶಿಕ್ಷಕ ಸುರೇಶ ಕೊಡಬಾಳ ಮಾತನಾಡಿ, ವಿದ್ಯಾರ್ಥಿ ಯುವಜನರು ದುಶ್ಚಟಗಳಿಗೆ ದಾಸರಾಗಿ ತಮ್ಮನ್ನು ತಾವೇ ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ದುಶ್ಚಟಗಳಿಂದ ಹೊರಬಂದು ಉತ್ತಮವಾಗಿ ಓದಿ ಗ್ರಾಮಾಂತರ ಪ್ರದೇಶದ ಮಕ್ಕಳು ಮುಂದೆ ಬರಬೇಕು. ಹಳ್ಳಿಗಳು ನಂದಾದೀಪವಾಗಬೇಕಾದರೆ ರಾಷ್ಟ್ರೀಯ ಯೋಜನೆಯಲ್ಲಿ ವಿದ್ಯಾರ್ಥಿಗಳು ತೊಡಗಬೇಕು ಎಂದರು.

ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರೀದಾ ಬೇಗಂ ಫೀರಸಾಬ ನದಾಫ್ ಉದ್ಘಾಟಿಸಿದರು. ಮುಖಂಡ ಉದಯಕುಮಾರ ತೋಟರ್ ಮಾತನಾಡಿದರು. ಅಕ್ಕಮ್ಮ ಫಕ್ಕಿರಪ್ಪ ಮೇಗಳಮನಿ, ಜಗದೀಶ್ ಮಾದಲಾಲಿ, ಸಂಜೀವ್ ಹುಡೇದ, ವೇದಮೂರ್ತಿ ಪರಯ್ಯ ವಿಭೂತಿಮಠ, ರಾಜು ಹತ್ತಿಕಾಳು, ಶಾಲೆಯ ಮುಖ್ಯೋಪಾಧ್ಯಾಯ ಎನ್.ಬಿ. ಪೂಜಾರ ಇತರರು ಇದ್ದರು.