ಸಮುದಾಯದಿಂದ ಸಮುದಾಯಕ್ಕೆ ಶಿಕ್ಷಣ ಮತ್ತು ಸೇವೆ ನೀಡಲು ಶಿಬಿರಗಳು ಸಹಕಾರಿಯಾಗಿವೆ. ರಾಷ್ಟ್ರೀಯ ಸೇವಾ ಯೋಜನೆ ಬಹಳ ಹಿಂದಿನಿಂದಲೂ ವಿದ್ಯಾರ್ಥಿಗಳ ಆತ್ಮ ಮತ್ತು ಮನಸ್ಸನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ.

ನರೇಗಲ್ಲ: ವಿದ್ಯಾರ್ಥಿಗಳು ಸಮುದಾಯ ಸೇವಾ ಚಟುವಟಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಾಗೂ ಸಮಾಜದ ಸೇವೆ ಮಾಡಲು ಎನ್‌ಎಸ್‌ಎಸ್‌ ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ಅದರ ಸದ್ಬಳಕೆಗೆ ಮುಂದಾಗಬೇಕು ಎಂದು ಪ್ರಾಂಶುಪಾಲ ಎಸ್.ಎಲ್.‌ ಗುಳೇದಗುಡ್ಡ ತಿಳಿಸಿದರು.ಸ್ಥಳೀಯ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ವತಿಯಿಂದ ಸಮೀಪದ ಕೋಟುಮಚಗಿ ಗ್ರಾಮದಲ್ಲಿ ನಡೆದ ಎನ್‌ಎಸ್‌ಎಸ್‌ ಘಟಕದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಸಮುದಾಯದಿಂದ ಸಮುದಾಯಕ್ಕೆ ಶಿಕ್ಷಣ ಮತ್ತು ಸೇವೆ ನೀಡಲು ಶಿಬಿರಗಳು ಸಹಕಾರಿಯಾಗಿವೆ. ರಾಷ್ಟ್ರೀಯ ಸೇವಾ ಯೋಜನೆ ಬಹಳ ಹಿಂದಿನಿಂದಲೂ ವಿದ್ಯಾರ್ಥಿಗಳ ಆತ್ಮ ಮತ್ತು ಮನಸ್ಸನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ ಎಂದರು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸುವುದಕ್ಕೆ, ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಶಿಬಿರಗಳ ಅವಶ್ಯಕತೆಯಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕಲಿಕೆಯ ಜತೆಗೆ ಶಿಬಿರಗಳಲ್ಲಿ ಪಾಲ್ಗೊಂಡು ಸೇವಾನುಭವ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಸಾವಯವ ಕೃಷಿಕ ವೀರೇಶ ನೇಗಲಿ ಮಾತನಾಡಿ, ಎನ್‌ಎಸ್‌ಎಸ್‌ ಶಿಬಿರದ ವಿದ್ಯಾರ್ಥಿಗಳು ಗ್ರಾಮದಲ್ಲಿ ಸ್ವಚ್ಛತೆ, ಕೃಷಿಕ ಕಾಯಕ ಹಾಗೂ ಸಂಸ್ಕೃತಿಕ ಚಟುವಟಕೆಗಳನ್ನು ಯಶಸ್ವಿಯಾಗಿ ಮಾಡಿದರು. ಗ್ರಂಥಾಲಯ ಭೇಟಿ, ಭಜನಾ ಕಾರ್ಯಕ್ರಮ ಗ್ರಾಮಸ್ಥರನ್ನು ಆಕರ್ಷಿಸಿತು ಎಂದರು. ಎನ್ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಸುನಂದಾ ಮುಂಜಿ ವಾರ್ಷಿಕ ಶಿಬಿರದ ವರದಿ ವಾಚನ ಮಾಡಿದರು. ಅನಿಲಕುಮಾರ, ಪ್ರೇಮಾ ಕಾತ್ರಾಳ, ಶ್ವೇತಾ, ಕೆ.ಎಸ್.‌ ಪಾಟೀಲ, ವಿದ್ಯಾಧರ ರಮಾಣಿ ಇದ್ದರು.