ಕನ್ನಡಪ್ರಭ ವಾರ್ತೆ ಜೋಯಿಡಾ
ತಂದೆ-ತಾಯಿಗಳನ್ನ ಚೆನ್ನಾಗಿ ನೋಡಿಕೊಳ್ಳಬೇಕು. ನಂತರ ಹಿರಿಯರಿಗೆ ಗೌರವ ಕೊಡಬೇಕು ಅಂದಾಗ ಮಾತ್ರ ಅತ್ಯುತ್ತಮ ನಾಯಕನಾಗಲು ಸಾಧ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ತಿಳಿಸಿದರು.ಉಳವಿಯಲ್ಲಿ ಧಾರವಾಡದ ಕರ್ನಾಟಕ ವಿವಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೋಯಿಡಾ ಮತ್ತು ಶ್ರೀ ಉಳವಿ ಚನ್ನಬಸವೇಶ್ವರ ಟ್ರಸ್ಟ್, ಇವುಗಳ ಸಹಯೋಗದಲ್ಲಿ ಐತಿಹಾಸಿಕ ಸ್ಮಾರಕಗಳು ಹಾಗೂ ಪಾರಂಪರಿಕ ಸ್ಥಳಗಳ ಸಂರಕ್ಷಣೆ, ಸ್ವಚ್ಛತೆಗಾಗಿ ಹಮ್ಮಿಕೊಳ್ಳಲಾದ ವಿಶ್ವವಿದ್ಯಾಲಯ ಮಟ್ಟದ ಎನ್.ಎಸ್.ಎಸ್. ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ.ಬಿ. ದಳಪತಿ ಪ್ರಾಸ್ತಾವಿಕ ಮಾತನಾಡಿ, ಈ ನಾಯಕತ್ವ ಶಿಬಿರದಲ್ಲಿ ಮೂರು ಜಿಲ್ಲೆಗಳಾದ ಧಾರವಾಡ, ಗದಗ, ಕಾರವಾರ ಭಾಗದಿಂದ 200 ಎನ್.ಎಸ್.ಎಸ್. ಸ್ವಯಂ ಸೇವಕರು, 10 ಕಾರ್ಯಕ್ರಮ ಅಧಿಕಾರಿಗಳು ಬಂದಿದ್ದಾರೆ. 7 ದಿನಗಳ ಕಾಲ ಶಿಬಿರ ನಡೆಯುತ್ತದೆ. ಇಲ್ಲಿ ಸೇವಾ ನಿರತ ಕಾರ್ಯಗಳು ಜರಗುತ್ತವೆ. ಈ ಶಿಬಿರದ ಮುಖ್ಯ ಉದ್ದೇಶ ಪ್ಲಾಸ್ಟಿಕ್ ಮುಕ್ತ ಉಳವಿ, ಸ್ಮಾರಕಗಳ ಸಂರಕ್ಷಣೆ, ಜನರಿಗೆ ಸ್ವಚ್ಛತೆ ಅರಿವು ಮೂಡಿಸುವುದು, ಪ್ಲಾಸ್ಟಿಕ್ನಿಂದ ಆಗುವ ದುಷ್ಪರಿಣಾದ ಅರಿವು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಭಾವೈಕ್ಯತೆ ಬೆಳೆಸುವುದಾಗಿದೆ ಎಂದರು.ನಂತರ ಉಳವಿಯ ಪ್ರಧಾನ ಅರ್ಚಕ ಎಸ್.ಎಂ. ಕಲ್ಮಠ ಶಾಸ್ತ್ರೀ, ಶ್ರೀ ಉಳವಿ ಚನ್ನಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಸಂಜಯ ಕಿತ್ತೂರ, ಸಭೆಯ ಅಧ್ಯಕ್ಷ ಗೋಪಾಲಭಟ್ಟ ಶಿವಪುರ ಮಾತನಾಡಿದರು.
ಅಸ್ಲಮ ಮುಗದ, ಮಂಜುಳಾ ವಸ್ತ್ರದ, ಡಾ. ಅಂಜಲಿ ರಾಣೆ, ಮಹಮ್ಮದ ವಾಯೀಜ್, ರಾಜ್ಯ ಎನ್.ಎಸ್.ಎಸ್. ಪ್ರಶಸ್ತಿ ಪುರಸ್ಕೃತ ಶಿವಯೋಗಿ ಹಾವೇರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಕಸ್ತೂರಿ ದಳವಾಯಿ, ಡಾ. ನೇತ್ರಾವತಿ ಗಬ್ಬೂರ್ ಡಾ. ಪುಂಡಲೀಕ ಮಾದರ ನಡೆಸಿಕೊಟ್ಟರು.