ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹಗ್ಗವನ್ನು ಹೊಸೆದು ಮಾರುವ ಕಾಯಕವನ್ನು ಪ್ರಾಮಾಣಿಕತೆಯಿಂದ ಮಾಡುತ್ತಾ 12ನೇ ಶತಮಾನದಲ್ಲಿ ವಚನ ಸಾಹಿತ್ಯಕ್ಕೆ ತನ್ನದೇ ಕೊಡುಗೆ ನೀಡಿ ಸಾಮಾಜ ಸೇವೆ ಮಾಡಿದವರು ನುಲಿಯ ಚಂದಯ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್ ತಿಳಿಸಿದರು.ಸೋಮವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತಿಯಲ್ಲಿ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ದುಡಿದು ತಿನ್ನಬೇಕೆನ್ನುವ ಕಾಯಕನುಲಿಯ ಚಂದಯ್ಯನವರ ವಚನಗಳನ್ನು ಓದಿದಾಗ ಗುರು -ಲಿಂಗ-ಜಂಗಮ ಮತ್ತು ಕಾಯಕ – ದಾಸೋಹ ಸೇವೆ ಎನ್ನುವ ಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ತಾನು ಕಾಯಕ ನಿರತನಾಗಿ ಪ್ರತಿನಿತ್ಯದ ಅನ್ನವನ್ನು ತಾನೇ ದುಡಿದು ತಿನ್ನಬೇಕು ಎನ್ನುವ ಕಾಯಕ ಸಿದ್ದಾಂತ ಕಾಣುತ್ತದೆ ಎಂದು ಅವರು ತಿಳಿಸಿದರು. ಉಪನ್ಯಾಸಕ ಪ್ರಕಾಶ್ ಮಾತನಾಡಿ, ಹನ್ನೆರಡನೆಯ ಶತಮಾನದ ಶಿವಶರಣರಲ್ಲಿ ನುಲಿಯ ಚಂದಯ್ಯನವರನ್ನು ಹಠಯೋಗಿ ಎಂದು ಕರೆಯುತ್ತಾರೆ. ಇವರು ಚಂದೇಶ್ವರ ಲಿಂಗ ಎಂಬ ಅಂಕಿತ ನಾಮದಲ್ಲಿ ಸುಮಾರು 48 ವಚನ ರಚಿಸಿದ್ದರು. ಹುಲ್ಲನ್ನು ಕೊಯ್ದು, ಅದರಿಂದ ನಾರು ತೆಗೆದು, ನಾರನ್ನು ನುಲಿದು, ಹಗ್ಗಮಾಡಿ, ಅದನ್ನು ಮಾರಿ ಬಂದ ಹಣದಲ್ಲಿ ಇವರು ಮೊದಲು ಜಂಗಮಕ್ಕೆ ಪ್ರಸಾದ ಅರ್ಪಿಸಿ ಉಳಿದದ್ದನ್ನು ತಾನು ಪ್ರಸಾದ ಸ್ವೀಕರಿಸುತ್ತಿದ್ದರು ಎಂದರು.
ಈ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕ್ರತರಾದ ಮುಖ ವೀಣೆ ಆಂಜೀನಪ್ಪ ಹಾಗೂ ಸಮುದಾಯದ ಮುಖಂಡರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪ ವಿಭಾಗಾಧಿಕಾರಿ ಅಪೂರ್ವ ಬಿದರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿಲ್ಲೆಯ ಕೊರಮ-ಕೊರಚ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿ.ಪಿ.ಚಿಕ್ಕಪ್ಪಯ್ಯ,ಗೌರವ ಅಧ್ಯಕ್ಷ ವೆಂಕಟರೋಣಸ್ವಾಮಿ, ಮತ್ತಿತರರು ಇದ್ದರು.