ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ನರ್ಸಿಂಗ್ ವಿದ್ಯಾರ್ಥಿನಿಯ ಅಪಹರಣ ಪ್ರಕರಣವು ತಿರುವು ಪಡೆದುಕೊಂಡಿದೆ. ಹಿಂದು ಯುವತಿ ಅನ್ಯ ಕೋಮಿನ ಯುವಕನ ಜೊತೆಗೆ ಮುಂಬೈನಲ್ಲಿ ಇರುವುದು ಪತ್ತೆಯಾಗಿದೆ. ಈ ಜೋಡಿಯನ್ನು ಪತ್ತೆ ಹಚ್ಚಿದ ಪೊಲೀಸರು ಬೆಳಗಾವಿಗೆ ಕರೆತಂದಿದ್ದಾರೆ.ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ರಾಧಿಕಾ ಮುಚ್ಚಂಡಿ ಅದೇ ಗ್ರಾಮದ ಸದ್ರುದ್ದಿನ್ ಬೇಪಾರಿ 22 ದಿನಗಳ ಬಳಿಕ ಪತ್ತೆಯಾಗಿದ್ದಾರೆ. ತನ್ನ ಪುತ್ರಿ ಅಪಹರಣವಾಗಿರುವ ಶಂಕೆ ವ್ಯಕ್ತಪಡಿಸಿದ್ದ ಯುವತಿ ತಾಯಿ ದೀಪಾ ಮುಚ್ಚಂಡಿ, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ಯುವತಿ ಕುಟುಂಬಸ್ಥರು, ಸಂಬಂಧಿಕರು ಯುವಕರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಯುವಕ-ಯುವತಿಯನ್ನು ಕರೆ ತಂದಿರುವ ಪೊಲೀಸರು ವಿಚಾರಣೆಗೊಳಪಡಿಸಿದರು. ನಾನು ಸ್ವ ಇಚ್ಛೆಯಿಂದ ಹೋಗಿರುವೆ, ನನ್ನನ್ನು ಯಾರೂ ಅಪಹರಿಸಲಿಲ್ಲ. ಸದ್ರುದ್ದಿನ್ ಬೇಪಾರಿ ಮತ್ತು ನಾನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ನನ್ನ ತಾಯಿ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ನಾನು ಸದ್ರುದ್ದಿನ್ ಜೊತೆಗೆ ಹೋಗಿದ್ದೆ ಎಂದು ರಾಧಿಕಾ ಬೆಳಗಾವಿ ಗ್ರಾಮಾಂತರ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಇಬ್ಬರ ಹೇಳಿಕೆ ಪಡೆದು ಪೊಲೀಸರು ವಾಪಸ್ ಕಳುಹಿಸಿದ್ದಾರೆ.
ಠಾಣೆ ಎದುರು ಕುಸಿದು ಬಿದ್ದ ತಾಯಿ:ಬೆಳಗಾವಿ ಮಹಿಳಾ ಪೊಲೀಸ್ ಠಾಣೆ ಎದುರು ಯುವತಿ ರಾಧಿಕಾ ಮುಚ್ಚಂಡಿ ತಾಯಿ ದೀಪಾ ಕುಸಿದುಬಿದ್ದಿರುವ ಪ್ರಸಂಗವೂ ನಡೆಯಿತು. ಹೆತ್ತ ತಾಯಿ ಕಣ್ಣೀರು ಹಾಕಿ, ಗೋಗರೆದರೂ ಮಗಳ ಮನಸು ಮಾತ್ರ ಕರಗಲಿಲ್ಲ. ಯುವಕ-ಯುವತಿಯನ್ನು ಕರೆ ತಂದಿರುವ ವಿಷಯವನ್ನು ಪೊಲೀಸರು ದೀಪಾಗೆ ತಿಳಿಸಿದ್ದರು.
ಠಾಣೆಗೆ ಬಂದ ದೀಪಾ ಸೇರಿ ಕುಟುಂಬಸ್ಥರು ಮನೆಗೆ ಬರುವಂತೆ ರಾಧಿಕಾಗೆ ಮನವಿ ಮಾಡಿದರು. ಮದುವೆ ಮಾಡಿ ಕೊಡುತ್ತೇವೆ ಬಾ ಎಂದು ಕಣ್ಣೀರು ಹಾಕಿದರು. ಆದರೆ, ರಾಧಿಕಾ ಮಾತ್ರ ಒಪ್ಪಲಿಲ್ಲ. ಈಗಾಗಲೇ ನಾನು ಪ್ರೀತಿಸಿದ ಸದ್ರುದ್ದಿನ್ ಜೊತೆಗೆ ಮದುವೆ ಆಗಿಯೇ ಬಂದಿದ್ದೇನೆ. ನಾನು ಪ್ರೀತಿಸಿ ಮದುವೆ ಆದವನ ಜೊತೆಗೆ ಇರುತ್ತೇನೆ. ಮನೆಗೆ ಬರುವುದಿಲ್ಲ. ನನ್ನನ್ನು ಕರೆಯಬೇಡಿ ಎಂದು ರಾಧಿಕಾ ಹೇಳಿದರು. ಮಗಳ ವರ್ತನೆಗೆ ಬೇಸತ್ತು ಠಾಣೆಯಲ್ಲೇ ತಾಯಿ ದೀಪಾ ಕುಸಿದು ಬಿದ್ದರು. ತಕ್ಷಣವೇ ಸಂಬಂಧಿಕರು ದೀಪಾ ಮುಚ್ಚಂಡಿ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.