ಕನ್ನಡಪ್ರಭವಾರ್ತೆ, ಸೋಮವಾರಪೇಟೆ
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ದಿ. ಶ್ರೀಮತಿ ಕೊಡಗಿನ ಗೌರಮ್ಮ ಮುಖ್ಯ ವೇದಿಕೆಯಲ್ಲಿ ನಡೆದ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸೋಮವಾರಪೇಟೆ ವಿರಕ್ತ ಮಠದ ಶ್ರೀ ನಿಶ್ಚಲನಿರಂಜನ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಕನ್ನಡ ಸ್ವಂತ ಲಿಪಿಯನ್ನು ಹೊಂದಿದ್ದು, ಎಲ್ಲ ಭಾಷೆಗಳಿಗಿಂತಲೂ ಭಿನ್ನವಾಗಿದೆ. ಆದರೂ ನಾವು ಹಿಂದಿ ಮತ್ತು ಇಂಗ್ಲಿಷ್ ಭಾಷಾ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದೇವೆ. ಅನ್ಯಭಾಷಿಕರೊಂದಿಗೆ ನಾವು ವ್ಯವಹರಿಸುತ್ತಿದ್ದು, ಅವರಿಗೂ ನಮ್ಮ ಭಾಷೆಯನ್ನು ಕಲಿಸಬೇಕಿದೆ. ಕನ್ನಡ ನಾಡು ನುಡಿಯೊಂದಿಗೆ ನಾವು ಬದುಕನ್ನು ಕಟ್ಟಿಕೊಂಡಿದ್ದೇವೆ. ಕನ್ನಡ ಜೀವನದೊಂದಿಗೆ ಸಂಸ್ಕಾರ ನೀಡುತ್ತಿದೆ. ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲರೂ ಒಗ್ಗಟ್ಟಿನಿಂದ ಮಾಡಬೇಕು ಎಂದರು. ಮಾದಾಪುರದ ನಿರ್ಮಲ ಮಾತೆ ದೇವಾಲಯದ ಫಾದರ್ ಸೂಸೈ ಮಾತನಾಡಿ, ಮನೆಯಲ್ಲಿಯೇ ನಾವು ಕನ್ನಡ ಬಳಸುವುದರೊಂದಿಗೆ ಮಕ್ಕಳಲ್ಲೂ ಭಾಷಾಭಿಮಾನ ಮೂಡಿಸುವ ಕೆಲಸ ಮಾಡಬೇಕು. ಬದುಕಿಗೆ ಅನ್ಯ ಭಾಷೆಯತ್ತ ಸಾಗಿದರೂ, ನಮ್ಮ ಮಾತೃ ಭಾಷೆ ಉಳಿಸುವ ಕೆಲಸ ನಾವು ಮಾಡಬೇಕು. ಸಾಧಕ ಕನ್ನಡಿಗರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದರು. ಕೊಡಗು ಜಿಲ್ಲಾ ಎಸ್ವೈಎಸ್ ಸಾಂತ್ವನ ವಿಭಾಗದ ಉಪಾಧ್ಯಕ್ಷ ಶಾಫಿ ಸಹಧಿ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ ಎಲ್ಲ ಧರ್ಮದವರ ಮಾತೃ ಭಾಷೆಯಾಗಿದೆ. ವಿಶಾಲ ಮತ್ತು ಸಾವಿರಾರು ವರ್ಷ ಇತಿಹಾಸ ಇರುವ ಕನ್ನಡ ಭಾಷೆ ಉಳಿಸಿ ಬೆಳೆಸಲು ರಾಜ್ಯದ ಎಲ್ಲ ಜನರೂ ಮುಂದಾಗಬೇಕೆಂದರು.ಸಾಹಿತ್ಯ ಸಮ್ಮೆಳನಾಧ್ಯಕ್ಷೆ ಜಲಜಾ ಶೇಖರ್. ಸಾಹಿತ್ಯಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಸಮಾರೋಪ ಭಾಷಣ ಮಾಡಿದರು.ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕುಂಬೂರು ವಿಶ್ವ, ಕೊಡಗು ಜಿಲ್ಲಾ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಎನ್. ದೀಪಕ್, ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್, ಸೃಷ್ಟಿಯ ಚಿಗುರು ಕವಿ ಬಳಗದ ಅಧ್ಯಕ್ಷ ಕೆ.ಪಿ. ಸುದರ್ಶನ್, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶೀಲಾ ಡಿಸೋಜ ಸೇರಿದಂತೆ ವಿವಿದ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕೊನೆಯಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.