ಕನ್ನಡಪ್ರಭ ವಾರ್ತೆ ಶಿರಾ
ದೇಶದಲ್ಲಿ ಯಾವುದೇ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಮಹತ್ವಾಕಾಂಕ್ಷೆಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಹಾಗೂ ಸುಸಜ್ಜಿತವಾದ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ಅವರು ರಂಗನಾಥ ನಗರದಲ್ಲಿ ನೂತನ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಗರದಲ್ಲಿ ಸುಮಾರು ₹೨೦ ಲಕ್ಷ ವೆಚ್ಚದಲ್ಲಿ ೩ ಅಂಗನವಾಡಿ ಕೇಂದ್ರ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಟೆಂಡರ್ ಕಾರ್ಯವೂ ಮುಗಿದಿದ್ದು, ಆದಷ್ಟು ಬೇಗ ಕಟ್ಟಡವನ್ನು ಗುಣಮಟ್ಟದಿಂದ ನಿರ್ಮಿಸಿಕೊಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಬೇಕು ಹಾಗೂ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಬೇಕು ಕಾರ್ಯಕರ್ತೆಯರಿಗೆ ಹೇಳಿದರು.
ಮನೆ ಮನೆ ಗಂಗೆ ಕಾಮಗಾರಿ ಕುಂಠಿತ:ಶಿರಾ ನಗರದಲ್ಲಿ ಅಮೃತ್-೨ ಯೋಜನೆಯಡಿ ಮನೆ ಮನೆ ಗಂಗೆ ಯೋಜನೆಯಡಿ ಪ್ರತಿ ಮನೆಗೂ ನೀರಿನ ಸಂಪರ್ಕ ನೀಡುವ ಯೋಜನೆಯ ಕಾಮಗಾರಿ ಕುಂಠಿತಗೊಂಡಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ಟಿ.ಬಿ.ಜಯಚಂದ್ರ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅಮೃತ್-೨ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಕಳೆದ ೧ ವರ್ಷದಿಂದ ಹಣ ಬಿಡುಗಡೆ ಮಾಡಿಲ್ಲ. ಆದರೂ ಸಹ ₹೧೩,೦೦೦ ಕೋಟಿಯನ್ನು ರಾಜ್ಯ ಸರ್ಕಾರವೇ ಭರಿಸಿ ಕೆಲಸ ಮಾಡಿಸುತ್ತಿದೆ. ಇತ್ತೀಚೆಗೆ ಈ ಯೋಜನೆ ಮುಗಿದಿತ್ತು. ಮತ್ತೆ ಕೇಂದ್ರ ಸರ್ಕಾರ ೨೦೨೮ರವರೆಗೆ ಯೋಜನೆ ಮುಂದುವರಿಸಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇನೆ ಎಂದರು.
ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮ್ಮದ್ ಮಾತನಾಡಿ, ಮನೆ ಮನೆ ಗಂಗೆ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನ ಮಾಡಿರುವ ಅಣ್ಣಾವರ ಗ್ರಾಮಕ್ಕೆ ಶಾಸಕ ಟಿ.ಬಿ.ಜಯಚಂದ್ರ ಅವರ ಸೂಚನೆ ಮೇರೆಗೆ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ತೆರಳಿ ವೀಕ್ಷಣೆ ಮಾಡಲಾಗಿದೆ. ಅಣ್ಣಾವರ ಗ್ರಾಮದಲ್ಲಿ ಕಳೆದ ೩ ವರ್ಷದಲ್ಲಿ ಪ್ರತಿ ಮನೆಗೂ ನೀರೊದಗಿಸುವ ಕಾರ್ಯ ನಡೆಯುತ್ತಿದೆ. ಅದೇ ರೀತಿ ಶಿರಾದಲ್ಲೂ ಕಾಮಗಾರಿ ಮಾಡುತ್ತೇವೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಸಿದ್ದರಾಮಪ್ಪ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರಿಪ್ರಸಾದ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚೌಡಪ್ಪ, ಮೇಲ್ವಿಚಾರಕರಾದ ಶಾಂತವ್ವ, ರತ್ನಮ್ಮ, ನಗರಸಭಾ ಸದಸ್ಯರಾದ ಗಿರಿಜಾ ವಿಜಯ್ ಕುಮಾರ್, ಮಾಜಿ ಸದಸ್ಯ ಬಸವರಾಜು, ಅಂಗನವಾಡಿ ಕಾರ್ಯಕರ್ತೆ ಮಮತ, ಮುಖಂಡರಾದ ವಿಜಯಕುಮಾರ್, ಟೈರ್ ರಂಗನಾಥ್, ಅಪ್ಪಿ ರಂಗನಾಥ್ ಸೇರಿ ಹಲವರು ಹಾಜರಿದ್ದರು.