ಸಾರಾಂಶ
ಸಿರುಗುಪ್ಪ: ಸಿಇಟಿ ಪರೀಕ್ಷೆ ವೇಳೆ ಜನಿವಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣ ಖಂಡಿಸಿ ಹಾಗೂ ಕಾಂತರಾಜ ಆಯೋಗ ವರದಿ ತಿರಸ್ಕರಿಸಲು ಒತ್ತಾಯಿಸಿ ತಾಲೂಕು ಬ್ರಾಹ್ಮಣ ಸಂಘದಿಂದ ನಗರದಲ್ಲಿ ಪ್ರತಿಭಟನ ನಡೆಸಿ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ, ಬೀದರ್ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಜನಿವಾರ ಆಕ್ಷೇಪ ಪ್ರಕರಣಗಳು ನಡೆದಿರುವುದು ಅತ್ಯಂತ ಖಂಡನೀಯ. ಅಷ್ಟೇ ಅಲ್ಲ;ಇಡೀ ಬ್ರಾಹ್ಮಣ ಸಮುದಾಯಕ್ಕೆ ಅಪಮಾನವಾಗಿದೆ. ಬ್ರಾಹ್ಮಣ ಸಮುದಾಯವನ್ನು ಅಪಮಾನ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ಇದೇ ವೇಳೆ ಮಾತನಾಡಿದ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ ರಾಜ್ಯಾಧ್ಯಕ್ಷ ಜೋಯಿಸ್ ಶ್ರೀನಿವಾಸ ಮೂರ್ತಿ, ರಾಜ್ಯದ ವಿವಿಧೆಡೆ ಜರುಗಿದ ಜನಿವಾರ ಅಕ್ಷೇಪ ಪ್ರಕರಣದಿಂದ ತೀವ್ರ ಆಘಾತವಾಗಿದೆ. ನಿರ್ದಿಷ್ಟ ಸಮುದಾಯ ಗುರಿಯಾಗಿಸಿಕೊಂಡು ಅಪಮಾನ ಮಾಡಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರಲ್ಲದೆ, ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ನಡೆಯದಂತೆ ಸರ್ಕಾರ ಸೂಕ್ತ ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.
ಜಾತಿ ಗಣತಿ ಅವೈಜ್ಞಾನಿಕ: ಕಾಂತರಾಜ ಆಯೋಗ ವರದಿ ನೀಡಿರುವ ಜಾತಿ ಜನಗಣತಿ ಅತ್ಯಂತ ಅವೈಜ್ಞಾನಿಕವಾಗಿದೆ. ಯಾರ ಮನೆಗಳಿಗೂ ಭೇಟಿ ನೀಡದೆ ತಮಗೆ ತಿಳಿದಂತೆ ವರದಿ ನೀಡಲಾಗಿದೆ. ಬ್ರಾಹ್ಮಣ ಸಮುದಾಯ ಬರೀ ಶೇ. 2.98ರಷ್ಟು ಮಾತ್ರ ಇದ್ದಾರೆ ಎಂದು ತೋರಿಸಲಾಗಿದೆ. ಈ ರೀತಿಯ ಜನಗಣತಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಜಾತಿ ಗಣತಿ ಇಡೀ ಬ್ರಾಹ್ಮಣ ಸಮುದಾಯ ವಿರೋಧಿಸಿದ್ದು, ಯಾವುದೇ ಕಾರಣಕ್ಕೂ ವರದಿ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬಾರದು ಎಂದು ಒತ್ತಾಯಿಸಿದರು.ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ ಮೂರ್ರ್ತಿ, ಪ್ರಧಾನ ಕಾರ್ಯದರ್ಶಿ ಕುಲಕರ್ಣಿ ರಾಘವೇಂದ್ರ, ಗೌರವ ಅಧ್ಯಕ್ಷ ನಾರಾಯಣರಾವ್, ಸಹ ಕಾರ್ಯದರ್ಶಿ ಜೆ.ನರಸಿಂಹಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ದೀಪಾ ಜೋಯಿಸ್, ಚಂದ್ರಿಕಾ, ಸಮುದಾಯದ ಮುಖಂಡರಾದ ಪೋಸ್ಟ್ ವೆಂಕಣ್ಣ ಆಚಾರ್, ವೆಂಕಟೇಶ್ ಆಚಾರ್, ಎಚ್.ಜೆ. ಮುರಳೀಧರ, ಹೊಳಗುಂದಿ ರಾಘವೇಂದ್ರ ಆಚಾರ್, ಪವನ್ ಕುಮಾರ್ ದೇಸಾಯಿ, ಮಾಧವ ಆಚಾರ್, ವೇಣುಗೋಪಾಲ್, ದೀಪಾ, ವಾಸುಕಿ, ವಿದ್ಯಾನಾಡಿಗೇರ್, ಲಲಿತಾ ಶಾಸ್ತ್ರಿ ಸೇರಿದಂತೆ ಸಂಘದ ತಾಲೂಕು ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಬ್ರಾಹ್ಮಣ ಸಮಾಜದ ಪ್ರಮುಖರು ಭಾಗವಹಿಸಿದ್ದರು. ರಾಜ್ಯ ಸರ್ಕಾರಕ್ಕೆ ಬರೆದ ಮನವಿಪತ್ರವನ್ನು ತಾಲೂಕು ಉಪ ತಹಸೀಲ್ದಾರ್ ಅವರಿಗೆ ಸಲ್ಲಿಸಲಾಯಿತು.