ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ತಾಲೂಕು ಕಾರ್ಯನಿರತ ಪತ್ರಕರ್ತರ ಭವನದ ಕಾಮಗಾರಿಯನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪರಿಶೀಲನೆ ನಡೆಸಿದರು.ಈ ವೇಳೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣ ಮಾಡುತ್ತಿರುವಂತೆ ತಾಲೂಕು ಕೇಂದ್ರದಲ್ಲಿಯೂ ಪತ್ರಕರ್ತರ ಭವನ ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ ಎಂದರು. ಇನ್ನು ರಾಜ್ಯಸಭಾ ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರ ಜೊತೆ ಚರ್ಚೆ ನಡೆಸಿ ಹನೂರು ಪತ್ರಕರ್ತರ ಭವನ ನಿರ್ಮಾಣಕ್ಕೆ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಾದೇಶ್ ಮಾತನಾಡಿ, ಶಾಸಕರಾಗಿದ್ದ ಆರ್. ನರೇಂದ್ರ ಅವರ ಅವಧಿಯಲ್ಲಿ ಹನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಭವನಕ್ಕೆ ನಿವೇಶನ ಕೊಡಿಸುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಶಾಸಕರು ಕೇವಲ ಆರು ತಿಂಗಳಲ್ಲಿಯೇ 10 ಸೆಂಟ್ ನಿವೇಶನ ಮಂಜೂರು ಮಾಡಿಸಿಕೊಟ್ಟಿದ್ದರು. ತದನಂತರ ಆರ್. ನರೇಂದ್ರ ಅವರು 5 ಲಕ್ಷ ರು., ವಿ.ಶ್ರೀನಿವಾಸ್ ಪ್ರಸಾದ್ 5 ಲಕ್ಷ ರು. ಹಾಗೂ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ 2.5 ಲಕ್ಷ ರು. ಅನುದಾನ ನೀಡಿದ್ದಾರೆ. ಹೆಚ್ಚಿನ ಅನುದಾನಕ್ಕಾಗಿ ನೂತನ ಸಂಸದ ಸುನೀಲ್ ಬೋಸ್, ಶಾಸಕ ಎಂ.ಆರ್. ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಗಿದೆ ಅವರು ಅನುದಾನ ನೀಡಿದ ನಂತರ ಕಾಮಗಾರಿ ಮುಂದುವರಿಸಲಾಗುವುದೆಂದು ತಿಳಿಸಿದರು.ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಜಿ. ದೇವರಾಜ್ ನಾಯ್ಡು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಸೋಮಶೇಖರ್ ಇದ್ದರು.ಮೃತ ಪತ್ರಕರ್ತನ ಕುಟುಂಬದ
ನೆರವಿಗೆ ಧಾವಿಸಿದ ರಾಜ್ಯಾಧ್ಯಕ್ಷಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಳೆದ ವರ್ಷ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳಿದ್ದ ವೇಳೆ ಮೃತಪಟ್ಟಿದ್ದ ವಿಜಯವಾಣಿ ಪತ್ರಿಕೆ ವರದಿಗಾರ ನಾಗರಾಜ್ ಅವರ ಪತ್ನಿ ನಾಗರತ್ನ ಅವರನ್ನು ಭೇಟಿ ಮಾಡಿ ಅವರ ಕುಟುಂಬದ ಕುಶಲೋಪರಿ ವಿಚಾರಿಸಿ ಮಾತನಾಡಿದರು. ನಾಗರಾಜ್ ಪತ್ನಿ ನಾಗರತ್ನ ಪ್ರತಿಕ್ರಿಯಿಸಿ, ಕಳೆದ ವರ್ಷ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಕೊಡಿಸುವುದಾಗಿ ತಿಳಿಸಿದ್ದರು. ಆದರೆ, ಇದುವರೆಗೂ ನನಗೆ ಕೆಲಸ ಕೊಟ್ಟಿಲ್ಲ. ಇದರಿಂದ ಜೀವನ ನಿರ್ವಹಣೆ ತೊಂದರೆ ಆಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಬಳಿಕ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ದೂರವಾಣಿ ಕರೆ ಮಾಡಿ ವಿಷಯವನ್ನು ತಿಳಿಸಿದರು. ತಕ್ಷಣ ಜಿಲ್ಲಾಧಿಕಾರಿ ಅತಿ ಶೀಘ್ರದಲ್ಲಿ ನಾಗರತ್ನ ಅವರಿಗೆ ಪ್ರಾಧಿಕಾರದ ವತಿಯಿಂದ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದರು. ಕೆಲಸ ನೀಡಲು ಭರವಸೆ ನೀಡಿರುವ ಜಿಲ್ಲಾಧಿಕಾರಿಗೆ ಮತ್ತು ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಅವರಿಗೆ ನಾಗರತ್ನ ಧನ್ಯವಾದ ಸಲ್ಲಿಸಿದರು.