ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ರಂಗಾಯಣವು ನವರಾತ್ರಿ ಅಂಗವಾಗಿ ಜನಪದ ರಂಗಉತ್ಸವವನ್ನು ಅ.3 ರಿಂದ 11ರವರೆಗೆ ರಂಗಾಯಣ ಆವರಣದಲ್ಲಿ ಆಯೋಜಿಸಿದ್ದು, ಒಂಬತ್ತು ನಾಟಕಗಳ ಪ್ರದರ್ಶನದ ಜತೆಗೆ ಹತ್ತು ಮಂದಿ ಕಲಾವಿದರನ್ನು ಸನ್ಮಾನಿಸುವುದಾಗಿ ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.ರಂಗಾಯಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 3 ರಂದು ಸಂಜೆ 5.30ಕ್ಕೆ ವನರಂಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ರಂಗೋತ್ಸವ ಉದ್ಘಾಟಿಸುವರು. ಇಲಾಖೆಯ ಕಾರ್ಯದರ್ಶಿ ಡಾ.ಎಂ.ಎನ್. ಅಜಯ್ ನಾಗಭೂಷಣ್ ತೊಗಲು ಗೊಂಬೆಗಳ ಪ್ರದರ್ಶನ ಉದ್ಘಾಟಿಸುವುದಾಗಿ ಹೇಳಿದರು.ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ. ಧರಣಿದೇವಿ ಮಾಲಗತ್ತಿ, ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್, ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ರಂಗ ಸಮಾಜದ ಸದಸ್ಯರಾದ ಡಾ. ರಾಜಪ್ಪ ದಳವಾಯಿ, ಶಶಿಧರ್ ಭಾರೀಘಾಟ್, ಎಚ್.ಎಸ್. ಸುರೇಶ್ ಬಾಬು, ಲಕ್ಷ್ಮೀ ಚಂದ್ರಶೇಖರ್, ಕೆ. ರಾಮಕೃಷ್ಣಯ್ಯ, ಮಹಾಂತೇಶ ಎಂ. ಗಜೇಂದ್ರಗಡ, ಡಿಂಗ್ರಿ ನರೇಶ ಪಾಲ್ಗೊಳ್ಳಲಿದ್ದು, ಶಾಸಕ ಕೆ. ಹರೀಶ್ ಗೌಡ ಅಧ್ಯಕ್ಷತೆ ವಹಿಸುವರು.ಜನಪದ ರಂಗೋತ್ಸವ ಭಾಗವಾಗಿ ಅ. 3ರಂದು ಸಂಜೆ 6.30ಕ್ಕೆ ರಂಗಾಯಣ ಆವರಣದಲ್ಲಿ ಮೈಸೂರು ಗುರುರಾಜ್ ಮತ್ತು ತಂಡದಿಂದ ಮಂಟೇಸ್ವಾಮಿ ಕಾವ್ಯ, 4 ರಂದು ಸಂಗಮೇಶ್ವರ ನಾಟಕ ಮಂಡಳಿಯಿಂದ ರೇಣುಕಾ ಮಹಾತ್ಮೆ, 5 ರಂದು ಶ್ರೀರಾಜಾರಾಮ ತೊಗಲುಗೊಂಬೆ ಮೇಳದಿಂದ ಮಾಯಾವಿ ಇಂದ್ರಜಿತ್, 6 ರಂದು ಸವದಿಯ ಶ್ರೀ ವೀರಭದ್ರೇಶ್ವರ ಕಲಾ ಸಂಘ ಮತ್ತು ಶ್ರೀಕೃಷ್ಣ ಪಾರಿಜಾತ ಕಂಪನಿಯಿಂದ ಶ್ರೀಕೃಷ್ಣ ಪಾರಿಜಾತ ನಾಟಕ ಪ್ರದರ್ಶನ ಇರಲಿದೆ.ಅ. 7ರಂದು ಅಶ್ವಿನಿ ಕೊಂಡದಕುಳಿ ಮತ್ತು ತಂಡದಿಂದ ನರಕಾಸುರ ವಧೆ ಯಕ್ಷಗಾನ ಪ್ರದರ್ಶನ, 8ರಂದು ಅಮ್ಮಣಗಿಯ ಶ್ರೀ ಅಂಬಿಕಾ ದೇವಿ ಸಂಗ್ಯಾಬಾಳ್ಯ ಬಯಲಾಟ ಕಲಾಸಂಘದಿಂದ ಸಂಗ್ಯಾಬಾಳ್ಯ ನಾಟಕ, 9ರಂದು ಕೊನೆಹಳ್ಳಿಯ ಮೂಡಲಪಾಯ ಯಕ್ಷಗಾನ ಟ್ರಸ್ಟ್ ನಿಂದ ಕರಿಭಂಟನ ಕಾಳಗ, 10 ರಂದು ಡಾ. ಲಕ್ಷ್ಮಣದಾಸ್ ಮಿತ್ರ ಮಂಡಳಿಯ ರಂಗಕೀರ್ತನ ಸಂಪದದಿಂದ ಪಾದುಕಾ ಪಟ್ಟಾಭಿಷೇಕ ಮತ್ತು 11ರಂದು ನಂಜನಗೂಡು ತಾಲೂಕು ಹಲ್ಲರೆಯ ಶ್ರೀರಾಮೇಶ್ವರ ಕೃಪಾಪೋಷಿತ ಯಕ್ಷಗಾನ ಸೂತ್ರದ ಬೊಂಬೆ ಮೇಳದಿಂದ ಸತ್ಯಹರಿಶ್ಚಂದ್ರ ಪ್ರದರ್ಶನ ಇರುತ್ತದೆ ಎಂದು ಅವರು ವಿವರಿಸಿದರು.ಅಂತೆಯೇ ಅ. 3 ರಂದು ನೀಲಗಾರ ಜನದ ಗಾಯಕ ಡಾ. ಮೈಸೂರು ಗುರುರಾಜ್, 4ರಂದು ಹಿರಿಯ ಬಯಲಾಟ ಕಲಾವಿದ ವೀರನಗೌಡ ಮುದ್ದಟನೂರು, 5 ರಂದು ತೊಗಲುಗೊಂಬೆಯಾಟದ ದಾಕ್ಷಾಯಿಣಿ ಮತ್ತು ಪ್ರಭಾವತಿ, 6 ರಂದು ಶ್ರೀಕೃಷ್ಣ ಪಾರಿಜಾತ ಹಿರಿಯ ಕಲಾವಿದ ವಿಠಲ ಗೋವಿಂದಗುರುವ, 7 ರಂದು ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಗಣೇಶ ಹೆಗಡೆ, 8 ರಂದು ಹುಕ್ಕೇರಿಯ ಸಣ್ಣಾಟದ ಕಲಾವಿದೆ ಡಾ. ಲಕ್ಷ್ಮೀಬಾಯಿ ಮಾದಾರ, 9 ರಂದು ಮೂಡಲಪಾಯ ಯಕ್ಷಗಾನದ ಹಿರಿಯ ಕಲಾವಿದ ಎ.ಬಿ. ಶಂಕರಪ್ಪ, 10 ರಂದು ವೃತ್ತಿರಂಗಭೂಮಿಯ ಹಿರಿಯ ಕಲಾವಿದೆ ಸರಸ್ವತಿ ಉರುಫ್ಜುಲೇಖಾ ಬೇಗಂ ಮತ್ತು 11 ರಂದು ಹಿರಿಯ ಕಲಾವಿದೆ ಇಂದಿರಮ್ಮ ಅವರನ್ನು ಸನ್ಮಾನಿಸಲಾಗುವುದು.ರಂಗಾಯಣದ ವನರಂಗದಲ್ಲಿ ಪ್ರತಿದಿನ ಸಂಜೆ 5.30ಕ್ಕೆ ಉತ್ತರಪ್ರದೇಶದ ಹೋಲಿನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ತ್ರಿಪುರದ ಮಮಿತ ನೃತ್ಯ, ಮಧ್ಯಪ್ರದೇಶದ ಬದಾಯಿ ನೃತ್ಯ, ಒಡಿಸ್ಸಾದ ಬದಾನ್ನೃತ್ಯ, ಕೇರಳದ ಸಿಂಗಾರಿ ಮೇಳಂ, ತಮಿಳುನಾಡಿನ ಕರಗಂ ನೃತ್ಯ, ರಾಜಸ್ಥಾನದ ಚಕ್ರಿ ನೃತ್ಯ, ಉತ್ತರಕಾಂಡದ ಥಡಿಯಾ ಚಾಫ್ಲಾ ಮತ್ತು ಹರಿಯಾಣದ ಫೋಮರ್ ನೃತ್ಯ ಪ್ರದರ್ಶನ ಇರುತ್ತದೆ.ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಂಗಾಯಣ ಉಪ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ನವರಾತ್ರಿ ಜನಪದ ರಂಗ ಉತ್ಸವದ ಸಂಚಾಲಕ ಬಿ.ಎನ್. ಶಶಿಕಲಾ ಇದ್ದರು.