ನಿತ್ಯ ಹಲವಾರು ಕೆಲಸ ಕಾರ್ಯಗಳಿಗೆ ಪುರಸಭೆಗೆ ಆಗಮಿಸುವ ಸಾರ್ವಜನಿಕರಿಂದ ಅಧಿಕಾರಿಗಳು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಸಾಕಷ್ಟು ದೂರುಗಳು ಬರುತ್ತಿವೆ. ಕೂಡಲೇ ಅಂಥಹ ಅಧಿಕಾರಿಗಳು ತಮ್ಮ ಅಂಗಡಿ ಕ್ಲೋಸ್‌ ಮಾಡಿ ಬೇರೆ ಕಡೆ ವರ್ಗಾವಣೆ ತೆಗೆದುಕೊಳ್ಳಬಹುದು ಎಂದು ಶಾಸಕ ಯಾಸೀರಹ್ಮದಖಾನ ಪಠಾಣ ಜನಸ್ಪಂದನ ಕಾರ್ಯಕ್ರಮದಲ್ಲಿ ಖಡಕ್ಕಾಗಿ ಎಚ್ಚರಿಸಿದರು.

ಸವಣೂರು: ನಿತ್ಯ ಹಲವಾರು ಕೆಲಸ ಕಾರ್ಯಗಳಿಗೆ ಪುರಸಭೆಗೆ ಆಗಮಿಸುವ ಸಾರ್ವಜನಿಕರಿಂದ ಅಧಿಕಾರಿಗಳು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಸಾಕಷ್ಟು ದೂರುಗಳು ಬರುತ್ತಿವೆ. ಕೂಡಲೇ ಅಂಥಹ ಅಧಿಕಾರಿಗಳು ತಮ್ಮ ಅಂಗಡಿ ಕ್ಲೋಸ್‌ ಮಾಡಿ ಬೇರೆ ಕಡೆ ವರ್ಗಾವಣೆ ತೆಗೆದುಕೊಳ್ಳಬಹುದು ಎಂದು ಶಾಸಕ ಯಾಸೀರಹ್ಮದಖಾನ ಪಠಾಣ ಜನಸ್ಪಂದನ ಕಾರ್ಯಕ್ರಮದಲ್ಲಿ ಖಡಕ್ಕಾಗಿ ಎಚ್ಚರಿಸಿದರು.ಸವಣೂರ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿ ಪುರಸಭೆ ಆವರಣದಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಇದು ಭಾವೈಕತೆಗೆ ಹೆಸರಾದ ಪಟ್ಟಣ. ಇಲ್ಲಿ ಸುಲಿಗೆಕೋರರಿಗೆ ಜಾಗವಿಲ್ಲ, ಕೂಡಲೇ ನಿಮ್ಮ ನಿಮ್ಮ ಅಂಗಡಿಗಳನ್ನು ಬಂದ್ ಮಾಡಿ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದನೆ ನೀಡಿ ಅವರ ಕೆಲಸ ಕಾರ್ಯಗಳನ್ನು ತ್ವರಿತ ಗತ್ತಿಯಲ್ಲಿ ನಿರ್ವಹಿಸಬೇಕು ಇಲ್ಲದೆ ಹೋದ ಸಮಯದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಈಗಾಗಲೇ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 14 ನೂರು ಕೋಟಿ ರು. ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಇಂತಹ ಸಮಯದಲ್ಲಿ ಸವಣೂರ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲು ಹೋದ ಸಂದರ್ಭದಲ್ಲಿ ಅಂಬೇಡ್ಕರ್‌ ಕಾಲೋನಿ ಹಾಗೂ ಶಾಲೆಯ ಮುಂದೆ ಸಾಕಷ್ಟು ಕಲುಷಿತಗೊಂಡು ಗಬ್ಬು ನಾರುತ್ತಿದ್ದರೂ ಸಹಿತ ಪುರಸಭೆಯವರು ಏನು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಕೂಡ ನಡೆಯಿತು. ಪುರಸಭೆಯ ಆಡಳಿತಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಕೂಡಲೇ ಪಟ್ಟಣದ ಎಲ್ಲ ವಾರ್ಡಗಳಲ್ಲಿ ಸಂಚಾರ ಕೈಗೊಂಡು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಯಾವುದೇ ವಾರ್ಡನಲ್ಲಿ ಸ್ವಚ್ಛತೆ ಇಲ್ಲದೇ ಇರುವುದನ್ನು ಕಂಡುಬಂದಲ್ಲಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರ ಮೇಲೆ ಕ್ರಮಕ್ಕೆ ಮುಂದಾಗಬೇಕು ಎಂದು ತಾಕೀತು ಮಾಡಿದರು.ಪುರಸಭೆಗೆ ಆಗಮಿಸುವ ಸಾರ್ವಜನಿಕರಿಗೆ ಸ್ವಲ್ಪ ಕೂಡಾ ಸ್ಪಂದನೆ ನೀಡುತ್ತಿಲ್ಲ ಎಂಬ ದೂರುಗಳು ಕೂಡಾ ಬರುತ್ತಿವೆ. ನಾನು ಶಾಸಕನಾದ ಮೇಲೆ ಸಾರ್ವಜನಿಕರ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಸಾರ್ವಜನಿಕರ ಆಗು ಹೋಗುಗಳ ಬಗ್ಗೆ ಚಿಂತನೆ ಮಾಡಿದರೆ ನೀವು ಅಧಿಕಾರಿಗಳು ಜನರಿಗೆ ಸ್ಪಂದನೆ ನೀಡದಿರುವುದು ಖೇದಕರವಾಗಿದೆ. ಕೂಡಲೇ ಎಚ್ಚೆತ್ತುಕೊಂಡು ಆಡಳಿತ ಮಾಡಿದರೆ ಸರಿ, ಇಲ್ಲ ಅನಿವಾರ್ಯವಾಗಿ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಸಾಕಷ್ಟು ಸಾರ್ವಜನಿಕರ ದೂರಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಸ್ಥಳೀಯವಾಗಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿ ಜನರ ಕಷ್ಟಕಾರ್ಪಣೆಗಳನ್ನು ಆಲಿಸಿ ತ್ವರಿತ ಗತಿಯಲ್ಲಿ ಜನರ ಸಮಸ್ಯಗಳನ್ನು ಸ್ಥಳದಲ್ಲಿಯೆ ಇತ್ಯರ್ಥ ಪಡಿಸುವ ಸಲುವಾಗಿ ಪಟ್ಟಣದ ಪುರಸಭೆಯಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ತಹಸೀಲ್ದಾರ್ ರವಿಕುಮಾರ ಕೊರವರ, ತಾಪಂ ಇಓ ಬಿ.ಎಸ್. ಶಿಡೇನೂರ, ಎಸ್.ಎಫ್. ಮಣಕಟ್ಟಿ, ನಿಕಟಪೂರ್ವ ಬ್ಲಾಕ್ ಕಾಂಗೆಸ್‌ ಅಧ್ಯಕ್ಷ ಎಂ.ಜೆ. ಮುಲ್ಲಾ, ಮುಖಂಡರಾದ ಮಾಲತೇಶ ಸಾಲಿ, ಲಕ್ಷ್ಮಣ ಕನವಳ್ಳಿ, ರಾಘ ಬಾಲೇಹೊಸೂರ, ನವೀನ ಬೆಂಡಿಗೇರಿ, ನವೀನ ಬಂಡಿವಡ್ಡರ, ಸಚಿನ ಸಣ್ಣಪೂಜಾರ, ಮಹೇಶ ಅಪ್ಪಣ್ಣವರ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಪುರಸಭೆ ಮುಖ್ಯಾಧಿಕಾರಿ ಮಹೇಶ ನೀಡಶೇಶಿ ಸ್ವಾಗತಿಸಿ. ವಂದನಾರ್ಪಣೆ ಮಾಡಿದರು.