ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿ: ಶಾಸಕ

| Published : Jan 09 2024, 02:00 AM IST

ಸಾರಾಂಶ

ನೀವು ಸರಿಯಾಗಿ ಕೆಲಸ ಮಾಡದೇ ಹೋದರೆ ಜಿಲ್ಲಾಧಿಕಾರಿಗಳಿಗೆ ರಿಪೋರ್ಟ್‌ ಮಾಡಬೇಕಾಗುತ್ತದೆ. ಇಷ್ಟವಿಲ್ಲದೇ ಹೋದರೆ ನಿಮಗಿಷ್ಟ ಬಂದ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿ. ಇಲ್ಲಿದ್ದ ಮೇಲೆ ಕೆಲಸ ಮಾಡದೇ ನಿಮಗೆ ಬೇರೆ ದಾರಿ ಇಲ್ಲ

ಶಾಸಕ ಬಾಲಕೃಷ್ಣ ಖಡಕ್ ಸೂಚನೆ । ಕುದೂರು ಗ್ರಾಪಂನಲ್ಲಿ ಜನಸ್ಪಂದನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುದೂರು

ನೀವು ಸರಿಯಾಗಿ ಕೆಲಸ ಮಾಡದೇ ಹೋದರೆ ಜಿಲ್ಲಾಧಿಕಾರಿಗಳಿಗೆ ರಿಪೋರ್ಟ್‌ ಮಾಡಬೇಕಾಗುತ್ತದೆ. ಇಷ್ಟವಿಲ್ಲದೇ ಹೋದರೆ ನಿಮಗಿಷ್ಟ ಬಂದ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿ. ಇಲ್ಲಿದ್ದ ಮೇಲೆ ಕೆಲಸ ಮಾಡದೇ ನಿಮಗೆ ಬೇರೆ ದಾರಿ ಇಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ಕುದೂರು ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಶಾಸಕರ ಜನಸ್ಪಂದನ ಕಾರ್ಯಕ್ರಮದಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದ ಶಾಸಕ ಬಾಲಕೃಷ್ಣ , ಅಧಿಕಾರಿಗಳು ಯಾವುದೇ ಮಾಹಿತಿ ತೆಗೆದುಕೊಂಡು ಬಾರದೆ ನೆಂಟರ ಮನೆಗೆ ಬಂದಂತೆ ಬರುತ್ತೀರಾ? ಗ್ರಾಮಾಂತರ ಪ್ರದೇಶದಲ್ಲಿ ಶಾಸಕರ ಸಭೆ ನಡೆಯುವಾಗ ರೈತಾಪಿ ಜನರು, ಮಹಿಳೆಯರು ಇಲ್ಲಿರುತ್ತಾರೆ. ಆಗ ನೀವು ಮೀಟಿಂಗ್ ಮತ್ತಿತರೆ ಸಬೂಬು ಹೇಳುವಂತಿಲ್ಲ. ಜನಸ್ಪಂದನೆ ಸಭೆಯ ದಿನ ಮುಖ್ಯಮಂತ್ರಿಯವರೇ ನಿಮ್ಮನ್ನು ಸಭೆ ಕರೆದರೂ ಹೋಗುವಂತಿಲ್ಲ. ನನ್ನ ತಾಲೂಕಿನ ಕಡೆಗೆ ಗಮನ ಕೊಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಳೆದ ತಿಂಗಳ ಅರ್ಜಿಗಳಿಗೆ ನ್ಯಾಯ ದೊರೆತಿದೆಯಾ?

ಸಭೆ ಆರಂಭವಾಗುತ್ತಿದ್ದಂತೆ ಜನರ ನೂತನ ಸವಸ್ಯೆಗಳ ಕುರಿತು ಸಭೆ ಮಾಡಲಿಲ್ಲ. ಅದರ ಬದಲಾಗಿ ಕಳೆದ ತಿಂಗಳು ಜನರು ಕೊಟ್ಟಿದ್ದ ಅರ್ಜಿಗಳಿಗೆ ಪರಿಹಾರ ಸಿಕ್ಕಿದೆಯಾ? ಎಂದು ಒಂದೊಂದೇ ಅರ್ಜಿ ಪರಿಶೀಲಿಸಿ, ಅದಕ್ಕೆ ಸಂಬಂಧಿಸಿದ ಅರ್ಜಿದಾರರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ಮಾಡುತ್ತಿರುವಾಗ ಅಧಿಕಾರಿಗಳ ಬೇಜಾವಾಬ್ದಾರಿತನ ಪ್ರಕಟವಾಯಿತು. ಕಳೆದ ತಿಂಗಳ ಸಾಕಷ್ಟು ಅರ್ಜಿಗಳ ಕುರಿತಾಗಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಜನರು ಆಡಳಿತದ ಮೇಲೆ ಭರವಸೆ ಕಳೆದುಕೊಳ್ಳುತ್ತಿರುವುದು ಈ ಕಾರಣಕ್ಕಾಗಿಯೇ? ನಿಮ್ಮ ಜವಾಬ್ಧಾರಿಗಳನ್ನು ಸರಿಯಾಗಿ ನಿರ್ವಹಿಸಿದರೆ ಇಂತಹ ಜನಸ್ಪಂದನ ಕಾರ್ಯಕ್ರಮದ ಅವಶ್ಯಕತೆಯೇ ಇರುತ್ತಿರಲಿಲ್ಲ. ಇನ್ನು ನಾನು ಸುಮ್ಮನೆ ಕೂಡುವ ಮನುಷ್ಯ ಅಲ್ಲ. ಆಯಾಯ ದಿನ ಅರ್ಜಿಗಳು ಅಂದಂದೇ ಪರಿಹಾರ ಕಾಣಬೇಕು. ಇಲ್ಲದೇ ಹೋದರೆ ಖಂಡಿತವಾಗಿಯೂ ನಾನು ನಿಮ್ಮನ್ನು ಮನೆಗೆ ಕಳಿಸುವುದು ನಿಶ್ಚಿತ ಎಂದು ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನನ್ನ ತಾಲೂಕಿನಲ್ಲಿಯೇ ಸಮಸ್ಯೆಗಳು ತಾಂಡವಾಡುತ್ತಿರುವಾಗ ಇಲ್ಲಿನ ಎಡಿಎಲ್‌ಆರ್ ಅಧಿಕಾರಿಯನ್ನು ಇನ್ನೊಂದು ತಾಲೂಕಿಗೆ ನಿಯೋಜನೆ ಮಾಡಿರುವುದನ್ನು ಖಂಡಿಸಿ. ನನಗೆ ನನ್ನ ತಾಲೂಕು ಮುಖ್ಯವಾದದ್ದು. ಇನ್ನು ಮುಂದೆ ಇಲ್ಲಿಯ ಕೆಲಸಗಳನ್ನು ಕೈಬಿಟ್ಟು ಇನ್ನೊಂದು ತಾಲೂಕನ್ನು ಉದ್ದಾರ ಮಾಡುವ ಅವಶ್ಯಕತೆಯಿಲ್ಲ. ನಿಯೋಜನೆ ಮಾಡುವಾಗ ನನ್ನ ಗಮನಕ್ಕೆ ತರಬೇಕು ಎಂದು ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಮೊಬೈಲ್‌ನಲ್ಲಿಯೇ ತಿಳಿಸಿದರು.

ಜನರು ಗೊಂದಲಕ್ಕೊಳಗಾಗದೇ ಸಮಸ್ಯೆ ಪರಿಹಾರ ಕಂಡುಕೊಂಡು ಹೋಗುವ ಇಲ್ಲಿನ ಆಡಳಿತ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷೆ ಕುಸುಮಾ ಹೊನ್ನರಾಜ್, ಉಪಾಧ್ಯಕ್ಷೆ ರಮ್ಯಜ್ಯೋತಿ, ಸದಸ್ಯೆ ನಿರ್ಮಲಾ, ಸಂಧ್ಯ, ಬಾಲರಾಜ್, ಹನುಮಂತಪ್ಪ, ಜಯರಾಂ, ಪಿಡಿಒ ಪುರುಷೋತ್ತಮ್, ಕಾರ್ಯದರ್ಶಿ ವೆಂಕಟೇಶ್, ತಾಪಂ ಮಾಜಿ ಸದಸ್ಯ ಸತ್ಯನಾರಾಯಣ್ ಮತ್ತಿತರರು ಹಾಜರಿದ್ದರು.

-------------

8ಕೆಆರ್ ಎಂಎನ್ 5.ಜೆಪಿಜಿ

ಕುದೂರು ಗ್ರಾಪಂ ಅವರಣದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಜನರ ಅಹವಾಲು ಆಲಿಸಿದರು.

---------------------------------