ಜಯಂತಿಗಳ ಆಚರಣೆಗೆ ಅಧಿಕಾರಿಗಳ ಹಾಜರಿ ಕಡ್ಡಾಯ: ಶಾಸಕ

| Published : Jun 28 2024, 12:47 AM IST

ಸಾರಾಂಶ

ತಾಲೂಕು ಆಡಳಿತದಿಂದ ನಗರದ ತಾಲೂಕು ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ದಿನಾಚರಣೆ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ಸರ್ಕಾರದ ವತಿಯಿಂದ ಆಚರಿಸುವ ಎಲ್ಲ ಮಹನೀಯರ ಜಯಂತಿಗಳಿಗೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗದಿದ್ದರೆ ತಪ್ಪಿಸಿಕೊಳ್ಳುವ ಅಧಿಕಾರಿಗಳಿಗೆ ಒಂದು ದಿನದ ವೇತನ ಕಡಿತ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ತಾಲೂಕು ಆಡಳಿತದಿಂದ ನಗರದ ತಾಲೂಕು ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕು ದಂಡಾಧಿಕಾರಿಗಳು ಈ ನಿಟ್ಟಿನಲ್ಲಿ ನಿಗಾ ವಹಿಸಿ ಅಧಿಕಾರಿಗಳು ಹಾಜರಿರುವಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು. ಸರ್ಕಾರ ಎಲ್ಲ ಮಹನೀಯರ ಸಾಧನೆಗಳು ಹಾಗೂ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಅವರ ಜಯಂತಿಗಳನ್ನು ಆಚರಿಸುತ್ತದೆ. ಅದೇ ರೀತಿ ಇಂದು ಕೆಂಪೇಗೌಡರ ಜಯಂತಿಯನ್ನು ಆಚರಿಸುತ್ತಿದೆ. ಕೆಂಪೇಗೌಡರು ಇನ್ನೂ ಹೆಚ್ಚು ಕಾಲ ಇದ್ದಿದ್ದರೆ ಬೆಂಗಳೂರು ಮತ್ತಷ್ಟು ಅಭಿವೃದ್ಧಿ ಕಾಣುತ್ತಿತ್ತು. ದುರದೃಷ್ಟವಷಾತ್ ಬಸವಣ್ಣ, ಕೆಂಪೇಗೌಡರಾದಿಯಾಗಿ ಬಹಳಷ್ಟು ಮಹನೀಯರ ಸೇವೆಗಳನ್ನು ನಾವು ಸಂಪೂರ್ಣವಾಗಿ ಪಡೆದುಕೊಳ್ಳಲು ಆಗಲಿಲ್ಲ ಎಂದರು.ಎಸಿ ಸಪ್ತಶ್ರೀ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಶಾಲಾ ಮಟ್ಟದಲ್ಲಿ ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮುಂತಾದವುಗಳನ್ನು ಏರ್ಪಡಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.ತಹಸೀಲ್ದಾರ್ ಪವನ್‌ಕುಮಾರ್ ಮಾತನಾಡಿ ಸಾವಿರಾರು ವರ್ಷಗಳಿಂದ ನಾಡಿನಲ್ಲಿ ಅನೇಕ ಮಹನೀಯರು ಪುಣ್ಯಕಾರ್ಯಗಳನ್ನು ಮಾಡಿಹೋಗಿದ್ದಾರೆ. ಅವರ ಉತ್ತಮ ಅಂಶಗಳನ್ನು ತಿಳಿದುಕೊಂಡು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು. ಅವರು ನಾಡು ಕಟ್ಟಿದ ರೀತಿ ಮುಂದಾಲೋಚನೆ ನಮ್ಮ ಈಗಿನ ಇಂಜಿನಿಯರುಗಳಿಗೆ ಸ್ಫೂರ್ತಿಯಾಗಬೇಕೆಂದರು. ಶಿಕ್ಷಕ ಚಂದ್ರಶೇಖರ್ ನಾಡಪ್ರಭು ಕೆಂಪೇಗೌಡರ ಬಗ್ಗೆ ಉಪನ್ಯಾಸ ನೀಡಿದರು. ಇಒ ಸುದರ್ಶನ್, ನಗರಸಭಾ ಆಯುಕ್ತ ವಿಶ್ವೇಶ್ವರ ಬದರಗಡೆ, ಬಿಇಒ ಚಂದ್ರಯ್ಯ ಸೇರಿ ಎಲ್ಲ ಇಲಾಖೆಗಳ ಅಧಿಕಾರಿಗಳು, ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.