ದೇವನಹಳ್ಳಿ: ತಾಲೂಕು ಅಣ್ಣೇಶ್ವರ ಗ್ರಾಪಂ ವ್ಯಾಪ್ತಿಯ ಅಕ್ಲೆಮಲ್ಲೇನಹಳ್ಳಿ ಗ್ರಾಮದ ೫೦ ಮೂಲ ಕುಟುಂಬಗಳನ್ನು ಪ್ರಭಾವಿ ರಾಜಕಾರಣಿಗಳು ಅಧಿಕಾರ ಬಳಸಿ ಹಳ್ಳಿಯಿಂದ ಹೊರಹಾಕಿರುವುದು ಸರಿಯಲ್ಲ, ಅವರಿಗೆ ಮೂಲ ಗ್ರಾಮ ಉಳಿಸಿಕೊಡಲು ಹೋರಾಡುತ್ತೇವೆ ಎಂದು ಕೆಆರ್‌ಎಸ್‌ ಮುಖಂಡ ನಿಖಿಲ್ ತಿಳಿಸಿದರು

ದೇವನಹಳ್ಳಿ: ತಾಲೂಕು ಅಣ್ಣೇಶ್ವರ ಗ್ರಾಪಂ ವ್ಯಾಪ್ತಿಯ ಅಕ್ಲೆಮಲ್ಲೇನಹಳ್ಳಿ ಗ್ರಾಮದ ೫೦ ಮೂಲ ಕುಟುಂಬಗಳನ್ನು ಪ್ರಭಾವಿ ರಾಜಕಾರಣಿಗಳು ಅಧಿಕಾರ ಬಳಸಿ ಹಳ್ಳಿಯಿಂದ ಹೊರಹಾಕಿರುವುದು ಸರಿಯಲ್ಲ, ಅವರಿಗೆ ಮೂಲ ಗ್ರಾಮ ಉಳಿಸಿಕೊಡಲು ಹೋರಾಡುತ್ತೇವೆ ಎಂದು ಕೆಆರ್‌ಎಸ್‌ ಮುಖಂಡ ನಿಖಿಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಾಕಷ್ಟು ಸಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಮಾರ್ಚ್ ೩೧ರ ತನಕ ಗಡುವು ನೀಡಿದ್ದೆವು. ಪ್ರಭಾವಿಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಆದ್ದರಿಂದ ಕೆಆರ್‌ಎಸ್‌ ಪಕ್ಷದಿಂದ ಸರ್ವೆ ಮಾಡಿಸಿ ಮೂಲ ಗ್ರಾಮಸ್ಥರಿಗೆ ನ್ಯಾಯ ನೀಡುತ್ತೇವೆ ಎಂದು ತಿಳಿಸಿದರು.

ಎಸ್ಸಿ/ಎಸ್ಟಿ ನಿರಾಶ್ರಿತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ನಾಗರಾಜು ಮಾತನಾಡಿ, ಅಕ್ಲೇನಹಳ್ಳಿ ಮಲ್ಲೇನಹಳ್ಳಿ ಗ್ರಾಮದ ಹಳೇ ಗ್ರಾಮಠಾಣಾ ೬.18 ಎಕರೆ ಜಮೀನಿನಲ್ಲಿ ನಮ್ಮ ಪೂರ್ವಜರು ಸುಮಾರು ವರ್ಷಗಳಿಂದ ವಾಸವಿದ್ದ ಜಾಗವನ್ನು ಕಬಳಿಸುವ ಹುನ್ನಾರ ನಡೆಸಿ ಸುತ್ತಲೂ ಇದ್ದ ಖರಾಬು ಜಾಗ ನುಂಗಲು ನಮ್ಮ ಗ್ರಾಮಕ್ಕೆ ನೀರು ಹರಿಸಿ ರಸ್ತೆ, ದೇವಾಲಯ ಸೇರಿದಂತೆ ಗ್ರಾಮದ ಕುರುಹುಗಳನ್ನು ನಾಶ ಮಾಡಿ ನಮ್ಮನ್ನು ಬಂಡೆಯ ಬಳಿ ಕಳಿಸಿ ಕೋಟಿ-ಕೋಟಿ ಬೆಲೆ ಬಾಳುವ ನಮ್ಮ ಗ್ರಾಮವನ್ನು ಕಬಳಿಸಿದ್ದು ನಮಗೆ ನ್ಯಾಯ ನೀಡಬೇಕು ಎಂದು ತಿಳಿಸಿದರು.

ಕೆಲವು ವರ್ಷಗಳ ಹಿಂದೆ ಇದ್ದ ತಹಸೀಲ್ದಾರ್ ಎಲ್.ಸಿ.ನಾಗರಾಜ್ ಸ್ಥಳ ಪರಿಶೀಲಿಸಿ ಮೂಲನಿವಾಸಿಗಳ ಜಾಗ ಎಂದು ತಿಳಿಸಿ ನಾಮಪಲಕ ಕೂಡ ಹಾಕಿದ್ದರು. ಅವರ ನಂತರ ಬಂದ ಅಧಿಕಾರಿಗಳು ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ಪ್ರಭಾವಿಗಳ ಪರವಾಗಿ ದಾಖಲೆಗಳನ್ನು ಮಾಡಿದ್ದಾರೆ. ೨೦೨೪ರಲ್ಲಿ ಜಿಲ್ಲಾಧಿಕಾರಿ ಶಿವಶಂಕರ್ ಈ ಜಾಗವನ್ನು ಪರಿಶೀಲಿಸಿ ನ್ಯಾಯ ಒದಗಿಸುವುದಾಗಿ ತಿಳಿಸಿದ್ದರು ಎಂದು ಹೇಳಿದರು.

ವಕೀಲ ಸಿದ್ದಾರ್ಥ ಮಾತನಾಡಿ, ಅಕ್ಲೆ ಮಲ್ಲೇನಹಳ್ಳಿಯ ಮೂಲನಿವಾಸಿಗಳಿಗೆ ಅಧಿಕಾರಿಗಳು ನ್ಯಾಯ ಒದಗಿಸದಿದ್ದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಾವೆ ಖುದ್ದು ಗ್ರಾಮಕ್ಕೆ ತೆರಳಿ ಮೂಲ ಗ್ರಾಮವನ್ನು ಗ್ರಾಮಸ್ಥರಿಗೆ ನೀಡುತ್ತೇವೆ. ಮೂಲ ನಿವಾಸಿಗಳಿಗೆ ತೊಂದರೆಯಾದಲ್ಲಿ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದೇವನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಕೆಆರ್‌ಎಸ್ ಪಕ್ಷದ ವೆಂಕಟೇಶ್‌ಮೂರ್ತಿ, ಸುಬ್ರಹ್ಮಣಿ, ಹೋರಾಟಗಾರ ರಾಯಸಂದ್ರ ಸೋಮಶೇಖರ್, ಮುನಿರಾಜು, ಆನಂದ್, ಹನುಮಂತಪ್ಪ, ಚಂದ್ರಶೇಖರ್‌ ಇತರರಿದ್ದರು.

೦೨ ದೇವನಹಳ್ಳಿ ಚಿತ್ರಸುದ್ದಿ ೦೧ :

ದೇವನಹಳ್ಳಿಯಲ್ಲಿ ಕೆಆರ್‌ಎಸ್ ಮುಖಂಡರ ನಿಖಿಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.