ಸಾರಾಂಶ
ಹೊಸನಗರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಗೊಂಡ ಬಳಿಕ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಸಂಪೂರ್ಣ ವೈಫಲ್ಯ ಕಂಡುಬಂದಿದೆ. ಅದು ಅಲ್ಲದೇ ಹೊಸನಗರ ತಾಲೂಕಿನ ಅಧಿಕಾರಿಗಳು ಶಾಸಕರ ಮತ್ತು ಅವರ ಹಿಂಬಾಲಕರ ಕೈಗೊಂಬೆಯಾಗಿ ಕ್ಷೇತ್ರದಾದ್ಯಂತ ಲೂಟಿಗಿಳಿದ್ದಿದ್ದಾರೆ. ಬಡವರಿಗೆ, ರೈತರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಹಿಂಸೆ ನೀಡುತ್ತಿದ್ದಾರೆ. ಇನ್ಮುಂದೆ ಶಾಸಕರ ಹಾಗೂ ಅವರ ಹಿಂಬಾಲಕರ ಆಟ ನಡೆಯುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿ ಆವರಣದಲ್ಲಿ ಬಿಜೆಪಿ ಮಂಡಲ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಅಭಿವೃದ್ಧಿಯ ವಿಷಯದಲ್ಲಿ ಎಡವಿದ್ದಾರೆ. ಬಡವರು, ರೈತರ ಪರ ಕಾಳಜಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ರೈತರ ಬಗರ್ಹುಕುಂ ಸಾಗುವಳಿ ಜಮೀನು ತೆರವುಗೊಳಿಸಿದ್ದಷ್ಟೇ ಈವರೆಗಿನ ಇವರ ಸಾಧನೆಯಾಗಿದೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ ಎಂದು ಆಪಾದಿಸಿದರು.
ಸ್ಥಳೀಯ ಶಾಸಕರು ಅಧಿಕಾರಿ ವರ್ಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೆಲ ಅಧಿಕಾರಿಗಳು ಸಹಾ ಶಾಸಕರ ಹಿಂಬಾಲಕರಂತೆ ವರ್ತಿಸುತ್ತಿದ್ದಾರೆ. ಇದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಶಾಸಕರ ಹಿಂಬಾಲಕರು ಸರ್ಕಾರಿ ಕಚೇರಿಗಳಲ್ಲಿಯೇ ಠಿಕಾಣಿ ಹೂಡಿಕೊಂಡಿದ್ದು, ಜನಸಾಮಾನ್ಯರು ಅಸಹ್ಯ ಪಡುವಂತಾಗಿದೆ ಎಂದು ಕಿಡಿಕಾರಿದರು.ಆರ್ಎಸ್ಎಸ್ ವಿರುದ್ಧ ಬೇಳೂರು ಗೋಪಾಲಕೃಷ್ಣ ಮಾತನಾಡಿದ್ದು, ಇವರು 10 ವರ್ಷದ ಹಿಂದೆ ಆರ್ಎಸ್ಎಸ್ ಚಡ್ಡಿ ಹಾಕಿಕೊಂಡು ಬಿಜೆಪಿಯಿಂದ ಶಾಸಕರಾದವರು ಅದನ್ನು ಮರೆತಂತೆ ಕಾಣುತ್ತಿದ್ದೆ. ಆರ್ಎಸ್ಎಸ್ನ್ನು ಭಾರತ ದೇಶದಿಂದ ಓಡಿಸಲು ಇವರಿಂದ ಸಾಧ್ಯವಿಲ್ಲ ಎಂದರು.
ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆ ಎಂಜಿನಿಯರ್, ಶಿಕ್ಷಣ ಇಲಾಖೆಯ ಅಧಿಕಾರಿಗಳ ಹುದ್ದೆಗಳು ಖಾಲಿ ಉಳಿದಿವೆ. ಜನಸಾಮಾನ್ಯರು ಅಹವಾಲು ಸಲ್ಲಿಸಲು ಕಚೇರಿಗೆ ಬಂದರೆ ಕೇಳುವವರಿಲ್ಲದಂತಾಗಿದೆ. ತಾಲೂಕಿನ ಬಹುತೇಕ ರಸ್ತೆಗಳು ಹೊಂಡ ಬಿದ್ದರೂ ಮುಚ್ಚುವವರಿಲ್ಲದಂತಹ ಸ್ಥಿತಿ ತಲುಪಿವೆ. ಮೊದಲು ಅಭಿವೃದ್ಧಿಯ ಕಡೆ ಗಮನ ಹರಿಸಲಿ ಎಂದು ಆಗ್ರಹಿಸಿದರು.ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ ಮಾತನಾಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಎನ್.ಆರ್.ದೇವಾನಂದ, ಉಮೇಶ ಕಂಚುಗಾರ್, ಹಾಲಗದ್ದೆ ಉಮೇಶ, ಎನ್ ಶ್ರೀಧರ ಉಡುಪ, ವೀರೇಶ್ ಆಲವಳ್ಳಿ, ಆರ್ಟಿ.ಗೋಪಾಲ, ಸುರೇಶ್ ಸ್ವಾಮಿರಾವ್, ನಾಗಾರ್ಜುನ ಸ್ವಾಮಿ, ಸತ್ಯನಾರಾಯಣ, ಚಾಲುಕ್ಯ ಬಸವರಾಜ್, ಶ್ರೀಪತಿರಾವ್, ಮಂಡಾನಿ ಮೋಹನ್, ಅಭಿಲಾಷ್, ಮಂಜುನಾಥ್ ಸಂಜೀವ, ನಾಗರತ್ನ ದೇವರಾಜ್, ಶಶಿಕಲಾ, ಸುಮಾ ಸುರೇಶ್, ಎನ್.ವೈ.ಸುರೇಶ್, ಬಂಕ್ರಿಬೀಡು ಮಂಜುನಾಥ್, ಪುರುಷೋತ್ತಮ ಶಾನುಭೋಗ್, ನರಲೆ ರಮೇಶ, ಸವಿತಾ, ನಿರ್ಮಾಲ ರಾಘವೇಂದ್ರ, ಗಾಯಿತ್ರಿ ನಾಗರಾಜ್, ಕೃಷ್ಣವೇಣಿ, ಮನೋಧರ, ನಗರ ನಿತಿನ್, ಕಾರಣಗಿರಿ ಕಾವ್ಯ, ಕಾವೇರಿ ವಿಜಯ, ಮಾವಿನಕೊಪ್ಪ ಗೌತಮ್, ಮಹೇಂದ್ರ ಮತ್ತಿತರರು ಇದ್ದರು.