ಕನ್ನಡಪ್ರಭ ವಾರ್ತೆ ಮೂಡಿಗೆರೆ

ಆನೆಗಳು ಮತ್ತು ಮಾನವನ ಸಂಘರ್ಷ ಕಳೆದ 1.5 ದಶಕಗಳಿಂದ ನಿರಾತಂಕವಾಗಿ ನಡೆಯುತ್ತಿದ್ದರೂ ಶಾಶ್ವತ ಪರಿಹಾರ ಮಾತ್ರ ಇನ್ನು ಮರೀಚಿಕೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೇ ಸಾರ್ವಜನಿಕರನ್ನು ಕಾಪಾಡುವ ದೇವರೆಂದರೇ ತಪ್ಪಾಗಲಾರದು ಎಂದು ಸಕಲೇಶಪುರದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ತಿಳಿಸಿದರು.

ಪಟ್ಟಣದ ಬೆಳೆಗಾರರ ಸಂಘದಲ್ಲಿ ಮೂಡಿಗೆರೆ ಬೆಳೆಗಾರರ ಸಂಘ , ಕೆಜಿಎಫ್ ಮತ್ತು ಅಧಿಕಾರಿಗಳ ನಡುವಿನ ಸಮಾಲೋಚನ ಸಭೆಯಲ್ಲಿ ಮಾತನಾಡಿ ಹಲವು ದಶಕಗಳಿಂದ ಕಾಡುತ್ತಿರುವ ಮಾನವ ವನ್ಯ ಜೀವಿಗಳ ಸಂಘರ್ಷಕ್ಕೆ ಪರಿಹಾರ ನೀಡಲು ಶ್ರೀಲಂಕಾ ಮಾದರಿ ಆನೆಧಾಮ ಮತ್ತು ಅಸ್ಸಾಂ ಮಾದರಿ ಯೋಜನೆ ಕಾರ್ಯಗತ ಮಾಡಿದಲ್ಲಿ ಮಲೆನಾಡಿಗರ ಆನೆ ಸಮಸ್ಯೆಯಿಂದ ಪರಿಹಾರ ಸಾಧ್ಯ ಎಂದರು.

ರಾಜ್ಯದಲ್ಲಿ 6400ಕ್ಕೂ ಅಧಿಕ ಆನೆಗಳಿದ್ದು. ಚಿಕ್ಕಮಗಳೂರು- ಹಾಸನ-ಕೊಡಗು ಈ ಮೂರು ಜಿಲ್ಲೆಗಳಲ್ಲಿ 200 ಆನೆಗಳು ಕಾಡಂಚಿನ ಹಳ್ಳಿಗಳಿಗೆ ನುಗ್ಗಿ ಬೆಳೆ ಧ್ವಂಸಗೊಳಿಸಿ ಪ್ರಾಣ ಹಾನಿ ಮಾಡುತ್ತಿವೆ. ಆನೆಗಳನ್ನು ಒಂದು ಸ್ಥಳದಿಂದ ಕಾಡಿಗೆ ಅಟ್ಟುತ್ತಾರೆ ಮತ್ತೆ ಅಲ್ಲಿರುವ ಗ್ರಾಮಸ್ಥರು ಮತ್ತು ಅಧಿಕಾರಿಗಳು ಅಲ್ಲಿಂದ ಈ ಕಡೆ ಅಟ್ಟುತ್ತಿರುವ ಕಾರಣ ಆನೆಗಳಿಗೆ ಶಾಶ್ವತ ನೆಲೆ ಇಲ್ಲದಂತಾಗಿ ಮಾನವರ ಕಂಡರೆ ಮೇಲೆರಗಿ ಬೀಳುವಂತಾಗಿದೆ ಎಂದರು.

ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ 3 ಅನೆ ಧಾಮ ನಿರ್ಮಾಣಕ್ಕೆ ಕನಿಷ್ಠ ಒಂದು ಆನೆಧಾಮಕ್ಕೆ 100 ಎಕರೆ ಅರಣ್ಯ ಬಳಕೆ ಮಾಡುವುದು ಆನೆಗಳನ್ನು ಪಳಗಿಸಿ ಅವುಗಳಿಗೆ ಸರ್ಕಾರದಿಂದಲೇ ಆಹಾರ ನೀಡಿ ಮತ್ತು ಅದನ್ನು ಪ್ರವಾಸೋ ದ್ಯಮಕ್ಕೆ ಸೇರಿಸುವ ಜತೆಗೆ ಶಾಶ್ವತವಾಗಿ ಕಾಡಾನೆಗಳ ಪುನರ್ವಸತಿ ಪ್ರಾಧಿಕಾರ ರಚಿಸಬೇಕು ಎಂದು ಒತ್ತಾಯಿಸಿದರು.


ಕಾಫಿ ಮಂಡಲಿ ಅಧ್ಯಕ್ಷ ಎಂ.ಜೆ.ದಿನೇಶ್ ಮಾತನಾಡಿ, ಕಾಡು ಪ್ರಾಣಿಗಳ ಸಂಘರ್ಷದಿಂದ ಬೆಳೆಗಾರರು ಸಾಕಷ್ಟು ಸಾವು ನೋವು ಅನುಭವಿಸುವುದರೊಂದಿಗೆ ಬೆಳೆ ನಷ್ಟದಿಂದ ಕೈಸುಟ್ಟುಕೊಂಡಿದ್ದಾರೆ. ಕಾಡು ಪ್ರಾಣಿಗಳ ಸಂಘರ್ಷದಿಂದ ಬೆಳೆಗಾರ ರನ್ನು ರಕ್ಷಿಸಿ ಶಾಶ್ವತ ಪರಿಹಾರ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದು ಬೆಳೆಗಾರರೊಂದಿಗೆ ಅಧಿಕಾರಿಗಳನ್ನೊಳಗೊಂಡ ತಂಡ ಸರ್ಕಾರದ ಜತೆ ಮಾತುಕತೆ ನಡೆಸಿ ಶಾಶ್ವತ ಪರಿಹಾರಕ್ಕೆ ಒತ್ತಡ ಹಾಕಿದ್ದು ಕಾಫಿ ಬೆಳೆಗಾರರ ಹಿತದೃಷ್ಠಿಯಿಂದ ಅರಣ್ಯ ಇಲಾಖೆ ಜತೆ ಕಾಫಿ ಮಂಡಲಿ ಕೈಜೋಡಿಸಲು ಸದಾ ಸಿದ್ದ ಎಂದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ. ಮಲೆನಾಡು ಪ್ರದೇಶಗಳಲ್ಲಿ ಕಾಡಾನೆ, ಕೋಣ, ಹುಲಿ, ಸಿಂಹ, ಕರಡಿ ಮತ್ತು ಮಂಗಗಳ ಕಾಟ ಅಧಿಕವಾಗಿದೆ. ಅವುಗಳಿಗೆ ಸಂತಾನಾಭಿವೃದ್ಧಿ ತಡೆ ಚಿಕಿತ್ಸೆ ಮಾಡಿ ಸಂಖ್ಯೆ ಕಡಿತ ಗೊಳಿಸಲು ಸಾಧ್ಯ ಮತ್ತು ಅವುಗಳು ಕಾಡಿನಲ್ಲೆ ಜೀವಿಸುತ್ತವೆ ಎಂದು ಹೇಳಿದರು.

ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜೈರಾಂ, ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಹುರುಡಿ ವಿಕ್ರಂ, ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಟಿ.ಪಿ.ಸುರೇಂದ್ರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ್‌ ಕ್ಷೀರ್‌ಸಾಗರ್, ಉಪ ಅರಣ ಸಂರಕ್ಷಣಾಧಿ ಕಾರಿ ರಮೇಶ್ ಬಾಬು, ಕೊಪ್ಪದ ಶಿವ ಶಂಕರ್, ಭದ್ರ ಅರಣ್ಯಾ ಸಂರಕ್ಷಣಾ ಪ್ರದೇಶದ ಪುಲ್ಕಿತ್ ಮೀನಾ ಮೊದಲಾದವರಿದ್ದರು.