ಕನ್ನಡಪ್ರಭ ವಾರ್ತೆ ಮೈಸೂರು

ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಹಿಂದೂ ಜಾಗರಣ ವೇದಿಕೆ ಮೈಸೂರು ಮಹಾನಗರ ವತಿಯಿಂದ ಹಳೆ ಆರ್‌ ಎಂಸಿ ಯಿಂದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಶುಕ್ರವಾರ ಸಂಜೆ ಪಂಜಿನ ಮೆರವಣಿಗೆ ಮಾಡಲಾಯಿತು.

ಬಳಿಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಯೋಜಕ ದೋ. ಕೇಶವಮೂರ್ತಿ ಮಾತನಾಡಿ, ಭಾರತದಲ್ಲಿ ಧ್ವಜ ಸಮಿತಿಯಲ್ಲಿ ಮಾಡಿದಾಗ, ಕೇಸರಿ ಧ್ವಜ ಬರಬೇಕಿತ್ತು ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದರು. ಮಹಾತ್ಮ ಗಾಂಧೀಜಿ ಅವರು ಇದಕ್ಕೆ ಒಪ್ಪದೆ, ತ್ರಿವರ್ಣ ಧ್ವಜ ಬರುವಂತೆ ಮಾಡಿದರು ಎಂದರು.

ಹಿಂದೂ ಸಂಘಟನೆಗಳು ಎಂದಿಗೂ ದೇಶಕ್ಕೆ ಬೇರೆ ದೇಶಗಳಿಂದ ಬರುವ ನುಸುಳುಕೋರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು. ಬೇರೆ ದೇಶದಿಂದ ಇಲ್ಲಿಗೆ ಬಂದು ಜೀವನ ಮಾಡಲು ಅವರಿಗೆ ಯಾವ ಹಕ್ಕು ಇದೆ. ನಮ್ಮ ದೇಶದಲ್ಲಿ ನಮ್ಮವರೇ ಬದುಕಬೇಕು ಎಂದು ಅವರು ಹೇಳಿದರು.

ಸತ್ಯ, ಅಹಿಂಸೆ, ಚರಕ ಸುತ್ತುವುದರಿಂದ ಸ್ವಾತಂತ್ರ್ಯ ಬಂತು ಎಂಬ ಸುಳ್ಳನ್ನು ನಮ್ಮ ತಲೆಗೆ ತುಂಬಲಾಗಿದೆ. ನಿಜಾರ್ಥದಲ್ಲಿ ಸಹಸ್ರಾರು ಜನರ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಬ್ರಿಟಿಷರು ಭಾರತ ಬಿಟ್ಟು ತೆರಳುವ ಮೊದಲು, ಅವರ ಅಧಿಕಾರಿಯು ಮೇಲಾಧಿಕಾರಿಗೆ ಪತ್ರ ಬರೆದು ನಾವು ಸ್ವಾತಂತ್ರ್ಯ ಕೊಟ್ಟು ಹೋದರೆ ಮರ್ಯಾದೆ ಉಳಿಯುತ್ತದೆ. ಇಲ್ಲದಿದ್ದರೆ ಇಲ್ಲಿನ ಯುವಕರು ನಮ್ಮನ್ನು ಒದ್ದು ಹೊರಗೆ ಹಾಕಿ ಹತ್ಯೆ ಮಾಡುತ್ತಾರೆ ಎಂದು ಪತ್ರ ಬರೆದಿದ್ದರು. ಈ ಮಾತು ಯುವಕರ ಬಲಿದಾನದಿಂದ ಸ್ವಾತಂತ್ರ್ಯ ಬಂದಿರುವುದನ್ನು ಪ್ರತಿಪಾದಿಸುತ್ತದೆ ಎಂದರು.


ಬ್ರಿಟಿಷರು ಯೋಚನೆ ಮಾಡಿ ಭಾರತ ಬೆಳೆಯುತ್ತದೆ ಎಂಬ ಕಾರಣಕ್ಕೆ ಮುಸ್ಲಿಂ ಲೀಗ್ ಹಾಗೂ ಹಿಂದೂಗಳನ್ನು ಪ್ರತಿನಿಧಿಸುವ ಕಾಂಗ್ರೆಸ್ ನಡುವೆ ವಿಷಬೀಜ ಬಿತ್ತಿದರು. ಇದರಿಂದ ವಿಭಜನೆ ಆಯಿತು. ಈ ಸಮಯದಲ್ಲಿ ಕಾಂಗ್ರೆಸ್ ನಾಯಕರು ತುಷ್ಟೀಕರಣ ಆರಂಭಿಸಿದರು. ಅದು ಇಂದಿಗೂ ನಿಂತಿಲ್ಲ ಎಂದು ಅವರು ದೂರಿದರು.

ದಕ್ಷಿಣ ಪ್ರಾಂತ್ಯದ ಸಂಯೋಜಕ ಮಹೇಶ್ ಕಡಗದಾಳ್, ನಗರ ಸಂಯೋಜಕ ವಸಂತಕುಮಾರ್, ಸಹ ಸಂಯೋಜಕ ಸಂದೇಶ್ ಪವಾರ್, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಸಿ.ಕೆ. ರುದ್ರಮೂರ್ತಿ, ಎಚ್.ಜಿ. ಗಿರಿಧರ್, ಹಿಂದೂ ಸಂಘಟನೆ ಸಂಚಾಲಕ ಸಂಜಯ್ ಮೊದಲಾದವರು ಇದ್ದರು.

-----

ಬಾಕ್ಸ್...

ಮೆರವಣಿಗೆಗೆ ಅನುಮತಿ

ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ಪೊಲೀಸ್‌ ಇಲಾಖೆಯು ಅನುಮತಿ ನಿರಾಕರಿಸಿತ್ತು. ಪೊಲೀಸರ ಕ್ರಮ ಪ್ರಶ್ನಿಸಿ ಹಿಂದೂ ಜಾಗರಣ ವೇದಿಕೆಯು ವಕೀಲ ಅರುಣ್‌ ಶ್ಯಾಮ್‌ ಮೂಲಕ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿತ್ತು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಅನುಮತಿ ನಿರಾಕರಿಸಿ, ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದ್ದು. ಶುಕ್ರವಾರ ಮೆರವಣಿಗೆ ಅನುಮತಿ ನೀಡಿತು. ಹೀಗಾಗಿ, ಪಂಜಿನ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮವು ಪೊಲೀಸರು ಬಿಗಿ ಭದ್ರತೆಯಲ್ಲಿ ನಡೆಯಿತು.