ಸಾರಾಂಶ
ಶಿವಮೊಗ್ಗ: ಬಿ.ಆರ್. ಪ್ರಾಜೆಕ್ಟ್ನ ಪತ್ರ ಸಂಸ್ಕೃತಿ ಸಂಘಟನೆ ತನ್ನ 25ನೇ ವರ್ಷದ ನೆನಪಿಗಾಗಿ ಬಿ.ಆರ್. ಪ್ರಾಜೆಕ್ಟ್ ಕೆಪಿಸಿ ರಂಗಮಂದಿರದಲ್ಲಿ ನ.23 ಮತ್ತು 24ರಂದು ಬೆಳ್ಳಿಹಬ್ಬ ಸಮಾರಂಭ ಆಚರಿಸಲಾಗುವುದು ಎಂದು ಸಂಘಟನೆ ಸಂಚಾಲಕ ಹೊಸಹಳ್ಳಿ ದಾಳೇಗೌಡ ಹೇಳಿದರು.
ಶಿವಮೊಗ್ಗ: ಬಿ.ಆರ್. ಪ್ರಾಜೆಕ್ಟ್ನ ಪತ್ರ ಸಂಸ್ಕೃತಿ ಸಂಘಟನೆ ತನ್ನ 25ನೇ ವರ್ಷದ ನೆನಪಿಗಾಗಿ ಬಿ.ಆರ್. ಪ್ರಾಜೆಕ್ಟ್ ಕೆಪಿಸಿ ರಂಗಮಂದಿರದಲ್ಲಿ ನ.23 ಮತ್ತು 24ರಂದು ಬೆಳ್ಳಿಹಬ್ಬ ಸಮಾರಂಭ ಆಚರಿಸಲಾಗುವುದು ಎಂದು ಸಂಘಟನೆ ಸಂಚಾಲಕ ಹೊಸಹಳ್ಳಿ ದಾಳೇಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಸ್ಥೆಯು 25 ವರ್ಷಗಳಿಂದ ಪತ್ರ ಸಂಸ್ಕೃತಿ ಬೆಳೆಸುತ್ತಿದೆ. ಸಾಮಾಜಿಕ ಜಾಲತಾಣ, ದೂರವಾಣಿ, ಮೊಬೈಲ್, ಇತ್ಯಾದಿಗಳ ಆವಿಷ್ಕಾರದಿಂದಾಗಿ ಭಾವನಾತ್ಮಕ ಸಂಬಂಧಗಳನ್ನೇ ಕಳೆದುಕೊಳ್ಳುತ್ತಿದ್ದೇವೆ. ಅದರಲ್ಲೂ ಪತ್ರ ಬರೆಯುವ ಉತ್ತಮ ಅಭ್ಯಾಸವೇ ದೂರವಾಗಿದೆ. ಗ್ರಾಮಾಂತರ ಪ್ರದೇಶದ ಅಂಚೆ ಕಚೇರಿಗಳಲ್ಲಿ ಪತ್ರಗಳೇ ಸಿಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ನಮ್ಮ ಸಂಘಟನೆ ಪತ್ರ ಸಂಸ್ಕೃತಿಯನ್ನು ಸಂಘಟಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಸೆಯುವ ಕೆಲಸ ಮಾಡಲಾಗುತ್ತಿದೆ ಎಂದರು. 24 ವರ್ಷಗಳಿಂದ ರಾಜ್ಯದ ಎಲ್ಲ ಕಡೆಗಳಿಂದ ಪತ್ರಮಿತ್ರರನ್ನು ಕಲೆಹಾಕಿ, ಪತ್ರಮೈತ್ರಿ ಸಮ್ಮಿಲನ ನಡೆಸಿ, ಕನ್ನಡದ ಬಗ್ಗೆ ಮತ್ತು ಸಾಹಿತ್ಯ, ಸಂಸ್ಕೃತಿ ಬಗ್ಗೆ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ಈ ಬಾರಿಯೂ ಇಂತಹ ಕಾರ್ಯಕ್ರಮ ಬಿ.ಆರ್.ಪ್ರಾಜೆಕ್ಟ್ನಲ್ಲಿ ನಡೆಯಲಿದೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಉಪನ್ಯಾಸ, ಕವಿಗೋಷ್ಠಿ, ಹರಟೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ನಾಡಿನ ವಿವಿಧ ಭಾಗಗಳಿಂದ ಬಂದ ಪತ್ರಪ್ರೇಮಿ ಗೆಳೆಯರು ಪರಸ್ಪರ ತಮ್ಮ ಸಂಸ್ಕೃತಿ ಸಾಹಿತ್ಯ, ಕಲೆ ಮುಂತಾದವುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂದು ವಿವರಿಸಿದರು.ಬೆಳ್ಳಿಹಬ್ಬ ಅಂಗವಾಗಿ ಜಿಲ್ಲಾಮಟ್ಟದ ಅಂಚೆ ಕಾರ್ಡ್ ಲೇಖನ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಅಂಚೆ ಕಾರ್ಡ್ನಲ್ಲಿ ಬಾಂಧವ್ಯಕ್ಕೆ ಸಂಬಂಧಿಸಿದಂತೆ ತಮ್ಮ ಅನಿಸಿಕೆಗಳನ್ನು ಬರೆಯಬಹುದು. ಇದಕ್ಕೆ ಯಾವುದೇ ವಯೋಮಿತಿ ಇಲ್ಲ. ಆದರೆ, ಬರಹ ಅಂಚೆ ಕಾರ್ಡ್ನಲ್ಲಿಯೇ ಇರಬೇಕು. ಮತ್ತು ನ.16ರೊಳಗೆ ಅದು ತಲುಪಬೇಕು. ಅತ್ಯುತ್ತಮವಾಗಿ ಬರೆದ 10 ಜನರಿಗೆ ₹250 ಬಹುಮಾನ ನೀಡಲಾಗುವುದು. ಪತ್ರಗಳನ್ನು ಕಳಿಸುವ ವಿಳಾಸ: ಹೊಸಹಳ್ಳಿ ದಾಳೇಗೌಡ, ನಂ.4, ಚೌಡಮ್ಮ ಕ್ಯಾಂಪ್, ಸಿಂಗನಮನೆ, ಬಿ.ಆರ್. ಪ್ರಾಜೆಕ್ಟ್, ಶಿವಮೊಗ್ಗ ಜಿಲ್ಲೆ. ಪಿನ್ ಕೋಟ್- 577 115 ಆಗಿರುತ್ತದೆ ಎಂದರು.
ಪತ್ರ ಸಂಸ್ಕೃತಿ ಸಂಘಟನೆಯು ಪಿಸುಮಾತು ಎಂಬ ಪತ್ರ ಸಂಸ್ಕೃತಿ ಮಿತ್ರರ ತ್ರೈಮಾಸಿಕ ಪತ್ರಿಕೆಯನ್ನೂ 15 ವರ್ಷಗಳಿಂದ ಹೊರತರುತ್ತಿದೆ. ದೇಶ ಮತ್ತು ವಿದೇಶಗಳು ಸೇರಿ ಸುಮಾರು 1500ಕ್ಕೂ ಹೆಚ್ಚು ಪತ್ರಮಿತ್ರ ಗೆಳೆಯರು ಸಂಘಟನೆಯಲ್ಲಿ ಇದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಾಂತೇಶ್ ಕದರಮಂಡಲಗಿ, ಮಹೇಶ್, ಉಮಾ ದಾಳೇಗೌಡ ಇದ್ದರು.