7ರಂದು ಬೈಕ್ ರ್‍ಯಾಲಿ ಮೂಲಕ ಡೀಸಿ ಕಚೇರಿಗೆ ಮುತ್ತಿಗೆ

| Published : Nov 05 2024, 12:49 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದ ಅಧ್ಯಕ್ಷ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್‌ ಪತ್ರಿಕಾಗೋಷ್ಠಿ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನ.7ರಂದು ಜಿಲ್ಲೆಯ ಐದು ತಾಲೂಕುಗಳಿಂದ ಬೈಕ್ ರ್‍ಯಾಲಿ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದ ಅಧ್ಯಕ್ಷ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್‌ ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಣ ಮತ್ತು ಹಸಿ ಬರಗಳಿಂದ ತತ್ತರಿಸುವ ರೈತರಿಗೆ ಸೂಕ್ತ ಪರಿಹಾರ ಕೊಡದೆ ಇರುವುದು. ಹಾಗೂ ಬೆಳೆ ವಿಮೆ ಸರಿಯಾದ ವೇಳೆಗೆ ಸಿಗುತ್ತಿಲ್ಲವಾದ್ದರಿಂದ ರೈತರು ಕಂಗಲಾಗಿದ್ದಾರೆ. ಜೊತೆಗೆ ಅತಿ ಹೆಚ್ಚು ಮಳೆ ಬೀಳುತ್ತಿದ್ದರೂ ಕೆಲವೊಂದು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಕೈ ಬಿಟ್ಟಿರುವುದರಿಂದ ಹಾಗೂ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಬೈಕ್ ರ್‍ಯಾಲಿಯನ್ನು ಹಮ್ಮಿಕೊಂಡಿದ್ದೇವೆ ಎಂದರು.

ಜಿಎಂ ಮುಕ್ತ ಭಾರತ ಹಾಗೂ ಜಿಎಂ ಮುಕ್ತ ಕರ್ನಾಟಕ ಎಂದು ಘೋಷಿಸಬೇಕು, ಐಸಿಆರ್ ಮತ್ತು ಬಾಯರ್ ಕಂಪನಿಗಳಿಗೆ ಒಪ್ಪಂದ ಮಾಡಿರುವ ಕೃಷಿ ಒಪ್ಪಂದವನ್ನು ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ರದ್ದುಗೊಳಿಸಬೇಕು ಎಂದರು. ಜಿಲ್ಲೆಯಲ್ಲಿ ಕರಾ ನಿರಾಕರಣ ಚಳವಳಿ ಸಂದರ್ಭದಲ್ಲಿ ಕಟ್ಟಲಾಗದ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಬೇಕು. ಹಾಗೂ ಅಕ್ರಮ ಸಕ್ರಮ ಮುಂದುವರೆಯಬೇಕು. ಚೆಸ್ಕಾಂ ನೌಕರರ ಬೇಜವಾಬ್ದಾರಿತನದಿಂದ ಜನಜಾನುವಾರುಗಳಿಗೆ ಪ್ರಾಣಾಯಪಾಯವಾಗುತ್ತಿದ್ದು ಇದು ನಿಲ್ಲಬೇಕು. ಇಂಥ ಘಟನೆಗಳು ನಡೆದರೆ ತಕ್ಷಣ ಉನ್ನತ ಮಟ್ಟದ ಅಧಿಕಾರಿಗಳನ್ನು ಮನೆಗೆ ಕಳಿಸಬೇಕು. ಅವರ ಮೇಲೆ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು.ಭತ್ತಕ್ಕೆ ಕೇಂದ್ರ ಸರ್ಕಾರದ ಎಂಎಸ್ಪಿ ಮೇಲೆ ಹೆಚ್ಚುವರಿ 500 ರು.ಗಳನ್ನು ರಾಜ್ಯ ಸರ್ಕಾರ ಕೊಡಬೇಕು. ಹಾಗೂ ಖರೀದಿ ಕೇಂದ್ರ ತೆಗೆಯಬೇಕು. ಪ್ರತಿ ಟನ್ ಕಬ್ಬಿಗೆ 4500 ರು. ನಿಗದಿ ಮಾಡಬೇಕು ಹಾಗೂ ರೈತ ಮತ್ತು ಕಾರ್ಖಾನೆ ನಡುವೆ ವಿಪಕ್ಷೀಯ ಒಪ್ಪಂದವಾಗಬೇಕು ಎಂದರು.ಬೇಗೂರು ಸಂತೆಯಲ್ಲಿ ರೈತರಿಂದ ಸುಂಕ ವಸೂಲು ಮಾಡುತ್ತಿರುವ ಹಗಲು ದರೋಡೆ ನಿಲ್ಲಬೇಕು, ಹನೂರು ಭಾಗದ ಕೆಲವು ಹಳ್ಳಿಗಳಿಗೆ ಕಿರು ಸೇತುವೆ ಸಂಪರ್ಕ ಕಲ್ಪಿಸಬೇಕು. ಹನೂರು ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಇದ್ದು ತಕ್ಷಣ ಸರಿಪಡಿಸಬೇಕು ಎಂದರು. ಮಲೆ ಮಾದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಹಾಗೂ ಇಂಡಿಗನತ್ತ ಗ್ರಾಮದ ರೈತರ ಮೇಲೆ ಹಾಕಿರುವ ಕೇಸ್ ಅನ್ನು ಸರ್ಕಾರ ವಾಪಸ್‌ ಪಡೆಯಬೇಕು, ಚಂಗಡಿ ಗ್ರಾಮವನ್ನು ಶೀಘ್ರವಾಗಿ ಸ್ಥಳಾಂತರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಜಿಲ್ಲೆಯಲ್ಲಿ ಅವಶ್ಯಕತೆ ಇರುವ ಕಡೆ ಹಾಗೂ ಹೆಚ್ಚು ಕಾರ್ಡ್ ಇರುವ ಕಡೆ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪಿಸಬೇಕು. ಗುಂಡ್ಲುಪೇಟೆ ಮತ್ತು ಹನೂರು ಭಾಗದ ಕೆಲವು ಗ್ರಾಮಗಳಲ್ಲಿ ಸರ್ಕಾರಿ ಮತ್ತು ಗೋಮಾಳದಲ್ಲಿ ಪಟ್ಟಬದ್ಧ ಹಿತಾಸಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ಬಿಡಿಸಿ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮಕ್ಕಳಿಗೆ ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ನೀಡಬೇಕು, ಬ್ಯಾಂಕುಗಳು ರೈತರನ್ನು ಸಾಲ ಕಟ್ಟುವಂತೆ ಒತ್ತಾಯಿಸುವುದು ನಿಲ್ಲಬೇಕು, ಹೊಸ ಸಾಲಗಳನ್ನು ತಕ್ಷಣ ಕಾನೂನು ಬದ್ಧವಾಗಿ ಕೊಡಬೇಕು, ಜಿಲ್ಲೆಯಲ್ಲಿ ಹಸಿ ಮತ್ತು ಒಣ ಬರ ಪರಿಹಾರವನ್ನು ಕೊಡಬೇಕು. ಬೆಳೆ ವಿಮೆ ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕು, ಚಾಮರಾಜನಗರ ವಯಾ ತೆರಕಣಾಂಬಿ ಗುಂಡ್ಲುಪೇಟೆ ರಸ್ತೆ ದುರಸ್ತಿಗೊಳಿಸಬೇಕು ಎಂಬ ಬೇಡಿಕೆಗಳ ಮನವಿ ಸಲ್ಲಿಸಲಾಗುವುದು. ಬೈಕ್‌ ರಾಲಿಯಲ್ಲಿ ಎಲ್ಲರೂ ಕಡ್ಡಾಯವಾಗಿ ಹೆಲ್ಮಟ್ ಧರಿಸಬೇಕು ಹಾಗೂ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಪಾಪಣ್ಣ, ಕರಿಯಪ್ಪ, ನಟರಾಜು, ಈಶ್ವರ ಪ್ರಭು, ಮಾದೇಶ್, ನಿರಂಜನ್‌ಮೂರ್ತಿ ಇದ್ದರು.