ಸಾರಾಂಶ
ಶಿವಮೊಗ್ಗ: ಉಗ್ರರ ದಾಳಿಗೆ ಬಲಿಯಾದ ಮಂಜುನಾಥ ರಾವ್ ಅವರ ಪಾರ್ಥೀವ ಶರೀರ ಗುರುವಾರ ಬೆಳಿಗ್ಗೆ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಹಿನ್ನೆಲೆ ವರ್ತಕರು, ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ನಿರ್ಧರಿಸಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ವರ್ತಕರು, ಹೋಟೆಲ್ ಮಾಲೀಕರು, ಚಿನ್ನಬೆಳ್ಳಿ ವರ್ತರಕರು ಎಲ್ಲರೂ ಗುರುವಾರ ಅರ್ಧ ದಿನ ಬಂದ್ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಈ ಮೂಲಕ ಮಂಜುನಾಥ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಗುವುದು ಎಂದರು.ಮಂಜುನಾಥ್ ಅವರ ನಿವಾಸ ಎದುರು ಶ್ರದ್ಧಾಂಜಲಿ ಸಭೆ ನಡೆಯಲಿದ್ದು, ಮಧ್ಯಾಹ್ಮ 12.30 ಕ್ಕೆ ಧಾರ್ಮಿಕ ವಿಧಿವಿಧಾನ ನಡೆದು ಪಾರ್ಥಿವ ಶರೀರದ ಪಾದಯಾತ್ರೆ ಆರಂಭವಾಗಲಿದೆ. ಐಬಿ ವೃತ್ತ, ಕುವೆಂಪು ರಸ್ತೆ, ಜೈಲ್ ವೃತ್ತ, ಸೀನಪ್ಪ ಶೆಟ್ಟಿ ವೃತ್ತ, ನೆಹರೂ ರಸ್ತೆ, ಶಿವಪ್ಪ ನಾಯಕ ವೃತ್ತ ಮೂಲಕ ಬಿಎಚ್ ರಸ್ತೆ, ಹೊಳೆ ಬಸ್ ಸ್ಟಾಪ್ ಮಾರ್ಗವಾಗಿ ರೋಟರಿ ಚಿತಾಗಾರ ತಲುಪಲಿದೆ ಎಂದರು.
ಸೂರ್ಯಭಟ್ಟರ ಮಗ ಗುಂಡಾಭಟ್ ಧಾರ್ಮಿಕ ವಿಧಿವಿಧಾನ ನಡೆಸಿಕೊಡಲಿದ್ದಾರೆ. ನಾರಾಯಣ ಬಲಿಯೂ ರೋಟರಿ ಚಿತಾಗಾರದಲ್ಲಿ ನಡೆಯಲಿದೆ. ಪೊಲೀಸ್ ಬಂದೋಬಸ್ತ್ನಲ್ಲಿ ಪಾದಯಾತ್ರೆ ನಡೆಯಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭಾಗಿಯಾಗುವ ನಿರೀಕ್ಷೆ ಇದೆ ಎಂದರು.ಗುರುವಾರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿನಿಂದ ಪಾರ್ಥೀವ ಶರೀರ ಹೊರಡಲಿದ್ದು, ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗಕ್ಕೆ ತಲುಪುವ ನಿರೀಕ್ಷೆ ಇದೆ. ಈಗಾಗಲೇ ಮೃತ ಮಂಜುನಾಥ ಅವರ ಪತ್ನಿ ಪಲ್ಲವಿಯವರ ಸಂಬಂಧಿ ವಿನೂತ ಮತ್ತು ಪ್ರದೀಪ್ ಅವರು ಬೆಂಗಳೂರಿಗೆ ತಲುಪಲಿದ್ದು, ಗುರುವಾರ ಪಾರ್ಥಿವ ಶರೀರದ ಜೊತೆ ಆಗಮಿಸಲಿದ್ದಾರೆ ಎಂದರು.