ಸಾರಾಂಶ
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಆಯೋಜನೆ । ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪಕಟ್ಟಿ ಮಾಹಿತಿ ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2023-2024ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು 2022-2023ನೇ ಸಾಲಿನ ಪುಸ್ತಕ ಬಹುಮಾನ ವಿತರಣೆ ಸಮಾರಂಭವನ್ನು ಮಾರ್ಚ್ 8 ರ ಶನಿವಾರದಂದು ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ರಾಜಧಾನಿಯಾಚೆ ಇಂತಹದ್ದೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪಕಟ್ಟಿ ತಿಳಿಸಿದರು.ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕುರಿತು ಇಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನಿಧ್ಯವಹಿಸಲಿದ್ದು ಸಚಿವ ಶಿವರಾಜ ತಂಗಡಗಿ ಗೌರವಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಿಸುವರು. ಸಾಹಿತಕಿ ಡಾ.ಕೆ.ಮರುಳಸಿದ್ದಪ್ಪ ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆ ಮಾಡುವರು. ಶಾಸಕ ವಿರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು.
ಸಂಸದ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಎಂ.ಚಂದ್ರಪ್ಪ, ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ವಿಪ ಸದಸ್ಯರಾದ ಚಿದಾನಂದಗೌಡ, ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್ ಪಾಲ್ಗೊಳ್ಳುವರು.ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಸ್ಥಾಪಿತವಾಗಿದ್ದ ರಾಷ್ಟ್ರೀಯ ಸಾಹಿತ್ಯಕ-ಸಾಂಸ್ಕೃತಿಕ ಸಂಸ್ಥೆಯಾದ ಭಾಷಾ-ಭಾರತಿ ಯ ಅಂಗವಾಗಿ ಸೆಪ್ಟೆಂಬರ್ 2005ನೇ ತಿಂಗಳಿನಲ್ಲಿ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತು. ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಇಡೀ ದೇಶದಲ್ಲಿಯೇ ತನ್ನ ಬಗೆಯ ಮೊದಲ ಸಂಸ್ಥೆಯಾಗಿತ್ತು. ನಂತರದ ದಿನಗಳಲ್ಲಿ ಸರ್ಕಾರದ ಆದೇಶದಂತೆ 30.05.2009 ರ ಪ್ರಕಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಹಾಗು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ವಿಲೀನಗೊಂಡಿದೆ.2005 ರಿಂದ 2022 ರವರೆಗೆ ಪ್ರಶಸ್ತಿಗಳನ್ನು ನೀಡಲಾಗಿದೆ. ಚಿತ್ರದುರ್ಗದಲ್ಲಿ 2023 ಮತ್ತು 2024 ನೆ ಸಾಲಿಗೆ ಸೇರಿದಂತೆ ಭಾಷಾಂತರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಒಟ್ಟು 10 ಜನರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಜೊತೆಗೆ ಪುಸ್ತಕ ಬಹುಮಾನ ಪ್ರಶಸ್ತಿಯು 2005 ರಿಂದ 2021 ರವರೆಗೆ ಕೊಡಲಾಗುತ್ತಿದ್ದು ಈ ವರ್ಷ 2022 ಮತ್ತು 2023 ನೆ ಸಾಲಿನ ಒಟ್ಟು 10 ಜನ ಅನುವಾದಕರಿಗೆ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಡಾ.ಚನ್ನಪ್ಪ ಕಟ್ಟಿ ವಿವರಿಸಿದರು.
2023ನೇ ಸಾಲಿನ ಗೌರವ ಪ್ರಶಸ್ತಿಗೆ ಪ್ರೊ.ಎಚ್.ಎಸ್.ರಾಘವೇಂದ್ರರಾವ್. ವಿನಯಚೈತನ್ಯ ಡಾ. ಎಚ್.ಎಂ.ಕುಮಾರಸ್ವಾಮಿ, ಡಾ.ನಟರಾಜ್ ಹುಳಿಯಾರ್, ಡಾ.ದು.ಸರಸ್ವತಿ ಅವರನ್ನು ಆಯ್ಕೆ ಮಾಡಲಾಗಿದೆ. 2024ನೇ ಸಾಲಿನ ಗೌರವ ಪ್ರಶಸ್ತಿಗೆ ಡಾ,ಆರ್.ಕೆ.ಕುಲಕರ್ಣಿ, ಡಾ.ಕರೀಗೌಡ ಬೀಚನಹಳ್ಳಿ , ಡಾ.ರಾಜೇಂದ್ರಚೆನ್ನಿ,ಬೋಡೆರಿಯಾಜ್ಅಹ್ಮದ್, ಬಸು ಬೇವಿನಗಿಡದ ಅವರುಗಳ ಆಯ್ಕೆ ಮಾಡಲಾಗಿದೆ.2022ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಮೈತ್ರೇಯಿಕೆ.ಆರ್, ಜಯಶ್ರೀ ಭಟ್, ಬಿ.ಆರ್.ಜಯರಾಮರಾಜೇ ಅರಸ್, ಡಾ.ವಿಕ್ರಮ ವಿಸಾಜಿ, ಶುಭಮಂಗಳ ಎಂ.ಜಿ ಹಾಗೂ 2023ನೇ ಸಾಲಿಗೆ ಸುಕನ್ಯಾ ಕನಾರಳ್ಳಿ, ಶ್ರೀಧರ ಹೆಗ್ಗೋಡು, ಶ್ರೀ ವಿಕಾ ಸ್ಆರ್.ಮೌರ್ಯ, ಸುಬ್ಬಯ್ಯ ಜಿ.ಭಾಗ್ವತ್, ಹಾಗೂ ತೋಂಟದ ಸಿದ್ದರಾಮ ಸ್ವಾಮಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಡಾ.ಚನ್ನಪ್ಪ ಕಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ್ ಕು.ಮಿರ್ಜಿ, ಸದಸ್ಯ ಡಾ.ಜೆ.ಕರಿಯಪ್ಪ ಮಾಳಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಇದ್ದರು.