ಚಿಕ್ಕಮಗಳೂರುಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನಮಾನಸದಲ್ಲಿ ನಾಯಕತ್ವ ವಹಿಸಿದಾಗ ಮಾತ್ರ ನಾಯಕರಾಗಲು ಸಾಧ್ಯ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ. ರವಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ. ರವಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನಮಾನಸದಲ್ಲಿ ನಾಯಕತ್ವ ವಹಿಸಿದಾಗ ಮಾತ್ರ ನಾಯಕರಾಗಲು ಸಾಧ್ಯ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ. ರವಿ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಶನಿವಾರ ನಡೆದ ನಗರ ಬಿಜೆಪಿ ಮಂಡಲ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿ ಜನಪರ ಕಾರ್ಯ ಕೈಗೆತ್ತಿಕೊಂಡು ಸಂಘಟನೆಯನ್ನು ಜನರ ಮಧ್ಯಕ್ಕೆ ಕೊಂಡೊ ಯ್ದಾಗ ಮಾತ್ರ ಸಂಘಟನೆ ಸದೃಢವಾಗಲು ಸಾಧ್ಯ ಎಂದರು.ಎಸ್‌ಐಆರ್ ಮತದಾರರ ಕರಡು ಪಟ್ಟಿಯಲ್ಲಿ ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರುಗಳಿವೆಯೇ ಎಂಬು ದನ್ನು ಪ್ರತಿಯೊಬ್ಬರೂ ಪರಿಶೀಲಿಸಬೇಕು. ಜಗತ್ತಿನ ಎಲ್ಲ ವಿಚಾರಗಳ ಬಗ್ಗೆ ಗಮನಹರಿಸುವ ನಾವು, ನಮ್ಮ ಬಗ್ಗೆ ಗಮನ ಹರಿಸುವುದರಲ್ಲಿ ನಿರ್ಲಕ್ಷ್ಯ ವಹಿಸುತ್ತೇವೆ. ಈ ಕುರಿತು ಜನರು ಜಾಗೃತರಾಗಬೇಕು ಎಂದು ಹೇಳಿದರು.ಜನವರಿಯಲ್ಲಿ ನಗರಸಭೆ ಹಾಲಿ ಅವಧಿ ಮುಕ್ತಾಯಗೊಳ್ಳಲಿದೆ. ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಈಗಿನಿಂದಲೇ ಸಂಘಟನಾತ್ಮಕವಾಗಿ ಸಿದ್ಧರಾಗಬೇಕು ಎಂದರು.ನಗರದ ಹಲವು ಭಾಗಗಳಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಸ್ವಚ್ಛತೆ ವಿಚಾರದಲ್ಲಿ ನಗರಸಭೆ ಆಡಳಿತ ವಿಫಲ ವಾಗಿದೆ ಎಂದು ಟೀಕಿಸಿದ ಅವರು, ಜನರ ಸಮಸ್ಯೆ ಗುರುತಿಸಿ ಅವುಗಳಿಗೆ ಸ್ಪಂದಿಸುವ ಕೆಲಸ ವಾಗಬೇಕು ಎಂದರು.

ಆಶ್ರಯ ಯೋಜನೆಯಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದ ಜಿ+2 ವಸತಿ ಯೋಜನೆಗೆ ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನೇ ಈಗಿನವರು ಮಾಡಿಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವಾಸ್ತವಾಂಶ ಗಳನ್ನು ಜನರಿಗೆ ತಿಳಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಕಿವಿಮಾತು ಹೇಳಿದರು.ನಗರ ಮಂಡಲ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಐಆರ್‌ ಬಿಎಲ್‌ಎ-1 ಸೀತಾರಾಮಭರಣ್ಯ ಹಾಗೂ ಉಸ್ತುವಾರಿ ಚಿಕ್ಕದೇವನೂರು ರವಿ ಮಾತನಾಡಿದರು.