177 ಹಳ್ಳಿಗೆ ಒಂದೇ ಅಗ್ನಿಶಾಮಕ ವಾಹನ

| Published : Mar 09 2025, 01:48 AM IST

ಸಾರಾಂಶ

ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು ಎರಡು ಜಲವಾಹನಗಳು ಇದ್ದು ಅದರಲ್ಲಿ ಒಂದು ಹದಿನೈದು ವರ್ಷಕ್ಕೂ ಮೀರಿದ್ದಾಗಿದೆ. ಒಂದು ವಾಹನದ ಸೇವೆಯನ್ನು ಸರ್ಕಾರದ ನಿರ್ದೇಶನದ ಪ್ರಕಾರ ಸ್ಥಗಿತಗೊಳಿಸಲಾಗಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಪಟ್ಟಣದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಏಕೈಕ ಅಗ್ನಿಶಾಮಕ ವಾಹನವಿದ್ದು ಬೆಂಕಿ ಅವಘಡಗಳು ನಡೆದಾಗ ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಕುಷ್ಟಗಿ, ಹನುಮಸಾಗರ, ಹನುಮನಾಳ, ತಾವರಗೇರಾ ಹೋಬಳಿ ಪೈಕಿ 177 ಹಳ್ಳಿಗಳು ಬರುತ್ತಿದ್ದು ಇದರ ಜತೆಗೆ ಯಲಬುರ್ಗಾ ತಾಲೂಕಿನ ನಾಲ್ಕೈದು ಹಳ್ಳಿಗಳು ಸಹಿತ ಈ ಠಾಣಾ ವ್ಯಾಪ್ತಿಯಲ್ಲಿ ಬರುತ್ತವೆ. ಈ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಬೆಂಕಿಯ ಅವಘಡಗಳು ಉಂಟಾದಲ್ಲಿ ಅವುಗಳ ಸಂರಕ್ಷಣೆಗೆ ಇರುವುದು ಒಂದೇ ವಾಹನ.

ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು ಎರಡು ಜಲವಾಹನಗಳು ಇದ್ದು ಅದರಲ್ಲಿ ಒಂದು ಹದಿನೈದು ವರ್ಷಕ್ಕೂ ಮೀರಿದ್ದಾಗಿದೆ. ಒಂದು ವಾಹನದ ಸೇವೆಯನ್ನು ಸರ್ಕಾರದ ನಿರ್ದೇಶನದ ಪ್ರಕಾರ ಸ್ಥಗಿತಗೊಳಿಸಲಾಗಿದೆ. ಒಟ್ಟು 27 ಸಿಬ್ಬಂದಿಗಳ ಪೈಕಿ ಒಂದು ಫೈರ್‌ಮನ್‌ ಹುದ್ದೆ ಮಾತ್ರ ಖಾಲಿ ಇದ್ದು 26 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ಬೆಂಕಿಯ ಅವಘಡಗಳ ಸುದ್ದಿ ಬಂದ ತಕ್ಷಣವೇ ಸಕಾಲಕ್ಕೆ ಹೋಗಿ ಬೆಂಕಿ ನಂದಿಸುತ್ತಿದ್ದಾರೆ. ಸದ್ಯ ಬೇಸಿಗೆ ಆರಂಭವಾಗಿದ್ದು ಈಗಾಗಲೆ ತಾಲೂಕಿನಲ್ಲಿ ಬೆಂಕಿ ಅವಘಡಗಳ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಫೆಬ್ರವರಿ ತಿಂಗಳಿನಲ್ಲಿ ಒಟ್ಟು 47 ಅಗ್ನಿ ಅವಘಡ ನಡೆದಿವೆ. ಹೀಗಾಗಿ ಮತ್ತೊಂದು ವಾಹನದ ಅವಶ್ಯಕತೆ ಇದೆ ಎನ್ನುತ್ತಾರೆ ಸಿಬ್ಬಂದಿ.

ಕಳೆದ ವರ್ಷ 89 ಅವಘಡ:

2024ನೇ ಸಾಲಿನಲ್ಲಿ ರೈತರ ಬಣವೆ, ಎಲೆಕ್ಟ್ರಿಕಲ್‌ ಅಂಗಡಿ, ಗ್ಯಾಸ್ ಸಿಲಿಂಡರ್ ಸೋರಿಕೆ, ಪ್ರಾಣ ರಕ್ಷಣೆ ಸೇರಿದಂತೆ ಒಟ್ಟು 89 ಪ್ರಕರಣ ನಡೆದಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಜೀವ ಹಾನಿ ಹಾಗೂ ಅಪಾರ ಪ್ರಮಾಣದ ಆಸ್ತಿಗಳನ್ನು ರಕ್ಷಿಸಿದ್ದಾರೆ. ಬೇಸಿಗೆ ಆರಂಭವಾಗಿದ್ದು ಬೆಂಕಿ ಅವಘಡ ಸಂಭವಿಸದಂತೆ ನೋಡಿಕೊಳ್ಳಲು ಈಗಾಗಲೇ ವಿದ್ಯಾರ್ಥಿಗಳಿಗೆ ಹಾಗೂ ಜಾತ್ರಾ ಸಮಾರಂಭಗಳಲ್ಲಿ ಅಗ್ನಿ ನಂದಿಸುವ ಪ್ರಾತ್ಯಕ್ಷಿಕೆ ತರಬೇತಿ ಹಾಗೂ ಜನಜಾಗೃತಿಯನ್ನು ಇಲಾಖೆ ವತಿಯಿಂದ ಮೂಡಿಸಲಾಗುತ್ತಿದೆ.

ಪರಿಸರ ಕಾಳಜಿ:

ಅಗ್ನಿಶಾಮಕ ಠಾಣೆ ಸುತ್ತಲು ಗಾರ್ಡನ್‌ ನಿರ್ಮಿಸಿರುವ ಠಾಣಾಧಿಕಾರಿ ರಾಜು, ವಿವಿಧ ಗಿಡಗಳನ್ನು ನೆಡುವ ಮೂಲಕ ಹಸಿರಿನಿಂದ ಕಂಗೋಳಿಸುವಂತೆ ಮಾಡಿದ್ದಾರೆ. ಜತೆಗೆ ಜಾಗೃತಿ ಕಾರ್ಯಕ್ರಮಗಳಲ್ಲೂ ಗಿಡಗಳನ್ನು ನೆಟ್ಟು ಬೆಳೆಸಬೇಕೆಂದು ಹೇಳಿದ್ದಾರೆ.ಬೆಂಕಿ ಅವಘಡ ತಪ್ಪಿಸಲು ಸಲಹೆ- ರೈತರು ವಿದ್ಯುತ್ ಪರಿವರ್ತಕ, ವಿದ್ಯುತ್ ತಂತಿಯ ಕೆಳಗೆ ಬಣವೆ ಹಾಕಬಾರದು

- ಹೊಲದಲ್ಲಿ ಕಳೆ ಸುಡುವ ರೈತರು ಬೆಂಕಿ ಆರುವ ತನಕ ಅಲ್ಲಿಯೇ ಇರಬೇಕು

- ಅಗ್ನಿ ಅವಘಡ ಕಂಡು ಬಂದ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ

- ಮನೆಯ ಸುತ್ತಮುತ್ತ ಕಸಕ್ಕೆ ಬೆಂಕಿ ಹಾಕಬೇಡಿಅಗ್ನಿಶಾಮಕ ಠಾಣೆಯಲ್ಲಿ ಎರಡು ವಾಹನಗಳಿದ್ದು ಅದರಲ್ಲಿ ಒಂದು ಹಳೆಯದಾಗಿದೆ. ಇನ್ನೊಂದನ್ನು ಮಾತ್ರ ಬಳಸುತ್ತಿದ್ದೇವೆ. ಸಲಕರಣೆ ಹಾಗೂ ಸಿಬ್ಬಂದಿಗೆ ಕೊರತೆಯಿಲ್ಲ. ಠಾಣಾ ವ್ಯಾಪ್ತಿಯಲ್ಲಿ ಫೆಬ್ರುವರಿ ತಿಂಗಳಲ್ಲಿ 47 ಅಗ್ನಿ ಅವಘಡಗಳು ಉಂಟಾಗಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕುಷ್ಟಗಿ ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಹೇಳಿದರು.

ಅಗ್ನಿಶಾಮಕ ಠಾಣೆಗೆ ಕೇವಲ ಒಂದೇ ಜಲವಾಹನ ಇದ್ದು ಇನ್ನೊಂದು ವಾಹನವನ್ನು ಸರ್ಕಾರ ಮಂಜೂರು ಮಾಡಿಕೊಡಬೇಕಿದೆ ಎಂದು ರೈತ ಸಂಘ ಯುವಘಟಕದ ಜಿಲ್ಲಾಧ್ಯಕ್ಷ ಬಸವರಾಜ ಕಡಿವಾಲ ಹೇಳಿದರು.