ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ, ರಾಷ್ಟ್ರೀಯ ಅನ್ನದಾನ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಶಬರಿಮಲೈ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಬರುವ ಮಾಲಾಧಾರಿಗಳಿಗೆ ಅನ್ನಸಂತರ್ಪಣೆಯ ಉದ್ದೇಶದಿಂದ ಡಿ.8ರಂದು ಸೀಗೆಹಟ್ಟಿಯ ಅಂತರಘಟ್ಟಮ್ಮ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಒಂದು ಮುಷ್ಠಿ ಅಕ್ಕಿ ಹಾಗೂ ಇತರೆ ಸಾಮಾಗ್ರಿಗಳ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ರಾಷ್ಟ್ರೀಯ ಅನ್ನದಾನ ಸಮಿತಿಯ ಉಪಾಧ್ಯಕ್ಷ ಕೆ.ಈ. ಕಾಂತೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ, ರಾಷ್ಟ್ರೀಯ ಅನ್ನದಾನ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಶಬರಿಮಲೈ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಬರುವ ಮಾಲಾಧಾರಿಗಳಿಗೆ ಅನ್ನಸಂತರ್ಪಣೆಯ ಉದ್ದೇಶದಿಂದ ಡಿ.8ರಂದು ಸೀಗೆಹಟ್ಟಿಯ ಅಂತರಘಟ್ಟಮ್ಮ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಒಂದು ಮುಷ್ಠಿ ಅಕ್ಕಿ ಹಾಗೂ ಇತರೆ ಸಾಮಾಗ್ರಿಗಳ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ರಾಷ್ಟ್ರೀಯ ಅನ್ನದಾನ ಸಮಿತಿಯ ಉಪಾಧ್ಯಕ್ಷ ಕೆ.ಈ. ಕಾಂತೇಶ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಉದ್ಘಾಟಿಸಲಿದ್ದಾರೆ. ಸಾನ್ನಿಧ್ಯವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮಿಗಳು ಹಾಗೂ ಅದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು ವಹಿಸುವರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ನದಾನ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಈ. ಕಾಂತೇಶ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ಬಿ.ಪ್ರಸನ್ನಕುಮಾರ್, ಪಾಲಾಕ್ಷಿ ಹೆಚ್., ಡಾ. ಅರವಿಂದ್, ಜಿ.ರಾಜು, ಕೆ.ಎನ್. ಜಗದೀಶ್, ಎಸ್.ಪಿ. ಶೇಷಾದ್ರಿ, ಶಂಕರ್‌ಗನ್ನಿ, ಶರತ್ ಎಸ್.ಎಂ., ಮಲ್ಲಿಕಾರ್ಜುನ ಆರ್. ಉಪಸ್ಥಿತರಿರುವರು ಎಂದರು.

ಮುಷ್ಠಿಅಕ್ಕಿ ಅಭಿಯಾನದ ಅಡಿಯಲ್ಲಿ ನಗರದ ಪ್ರತಿಯೊಂದು ಮನೆಯಿಂದ ಅಕ್ಕಿ, ಬೇಳೆ ಹಾಗೂ ಇತರೆ ದವಸ-ಧಾನ್ಯಗಳನ್ನು ಪಡೆದು, ಅವುಗಳನ್ನು ಶಬರಿಮಲೈ ಸನ್ನಿಧಾನಕ್ಕೆ ಡಿ.೧೬ರಂದು ಸಂಜೆ ೬ಗಂಟೆಗೆ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಪಡಿಪೂಜೆ ಹಾಗೂ ಶಕ್ತಿಪೂಜೆಯನ್ನು ನೆರವೇರಿಸಿ, ನಂತರ ಶಬರಿಮಲೈ ಅಯ್ಯಪ್ಪಸ್ವಾಮಿ ಸನ್ನಿಧಾನಕ್ಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಮುಷ್ಟಿಅಕ್ಕಿ ಅಭಿಯಾನ ಸಂಗ್ರಹಣ ವಾಹನವು ನಗರದ ಪ್ರತಿಯೊಂದು ಬಡಾವಣೆಯಲ್ಲೂ ಸಂಚರಿಸುತ್ತದೆ. ಶಿವಮೊಗ್ಗದ ಜನತೆ ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು ತಮ್ಮಿಂದಾಗುವ ದವಸ-ಧಾನ್ಯಗಳನ್ನು ನೀಡಬೇಕು ಎಂದರು.

ರಾಷ್ಟ್ರೀಯ ಅನ್ನದಾನ ಸಮಿತಿ ಸದಸ್ಯ ಎನ್.ಡಿ. ಸತೀಶ್ ಮಾತನಾಡಿ, ನಮ್ಮ ಅನ್ನದಾನ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಈ. ಕಾಂತೇಶ್ ಅವರ ನೇತೃತ್ವದಲ್ಲಿ ಕಳೆದ 5 ವರ್ಷಗಳಿಂದ ಮುಷ್ಠಿಅಕ್ಕಿ ಅಭಿಯಾನವನ್ನು ನಡೆಸುತ್ತಾ ಬಂದಿದೆ. ಅಯ್ಯಪ್ಪಸ್ವಾಮಿ ಭಕ್ತರು ಶ್ರದ್ಧಯಿಂದ ಈ ಕಾರ್ಯ ಮಾಡುತ್ತಿದ್ದಾರೆ. ಡಿ.16 ರಂದು ಸಂಜೆ 6 ಗಂಟೆಗೆ ನಡೆಯುವ ಸಾರ್ವಜನಿಕ ಪಡಿಪೂಜೆ ಹಾಗೂ ಶಕ್ತಿಪೂಜೆ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಆಗಮಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಸಂತೋಷ್, ಶಿವಕುಮಾರ್, ಮಂಜುನಾಥ್, ಸುರೇಶ್ ಬಾಳೆಗುಂಡಿ, ಶಬರೀಶ್, ಜಾದವ್, ಕುಬೇರಪ್ಪ, ಶಂಕರ್, ಪುರುಷೋತ್ತಮ್ ಸೇರಿದಂತೆ ಹಲವರಿದ್ದರು.