ಶಿರಾ ತಾಲೂಕಿನಲ್ಲಿ ಪ್ರತಿದಿನ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಬೇಕು. ಇದರಿಂದ ಹೈನುಗಾರರು ಆರ್ಥಿಕವಾಗಿ ಸದೃಢರಾಗಬೇಕೆಂಬ ಸಂಕಲ್ಪದಿಂದ ಹಾಲು ಶೇಖರಣ ಉಪ ಕೇಂದ್ರಗಳನ್ನು ಹೆಚ್ಚಾಗಿ ತೆರೆಯುತ್ತಿದ್ದೇವೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕಿನಲ್ಲಿ ಪ್ರತಿದಿನ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಬೇಕು. ಇದರಿಂದ ಹೈನುಗಾರರು ಆರ್ಥಿಕವಾಗಿ ಸದೃಢರಾಗಬೇಕೆಂಬ ಸಂಕಲ್ಪದಿಂದ ಹಾಲು ಶೇಖರಣ ಉಪ ಕೇಂದ್ರಗಳನ್ನು ಹೆಚ್ಚಾಗಿ ತೆರೆಯುತ್ತಿದ್ದೇವೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು. ತಾಲೂಕಿನ ನಿಜ್ಜಯನಪಾಳ್ಯ ಗ್ರಾಮದಲ್ಲಿ ನೂತನ ಹಾಲು ಶೇಖರಣಾ ಉಪ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಹೈನುಗಾರಿಕೆ ಸಣ್ಣ ಸಣ್ಣ ರೈತ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಬೇಕು ಎಂಬ ದೃಷ್ಟಿಯಿಂದ ಉಪಕೇಂದ್ರಗಳನ್ನು ಸ್ಥಾಪನೆ ಮಾಡಿದ್ದೇವೆ. ಹಾಲು ಉತ್ಪಾದಕರು ಹೆಚ್ಚು ಶ್ರಮಜೀವಿಗಳು ಸದಾ ತಮ್ಮ ಹಸುಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇದರ ನಡುವೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದ್ದರಿಂದ ಸರಕಾರ ಯಶಸ್ವಿ ಯೋಜನೆ ಜಾರಿಗೊಳಿಸಿದ್ದು. ೫ ಲಕ್ಷ ರುಪಾಯಿ ವರೆಗೂ ಉಚಿತ ಆರೋಗ್ಯ ಸೇವೆ ದೊರೆಯಲಿದೆ. ಎಲ್ಲರೂ ಯಶಸ್ವಿನಿ ಕಾರ್ಡ್ ಪಡೆದುಕೊಳ್ಳುವ ಮೂಲಕ ಯೋಜನೆ ಸಕಾರಗೊಳಿಸಬೇಕು ಎಂದರು.ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಬಿ.ಗಿರೀಶ್ ಮಾತನಾಡಿ ಹೈನುಗಾರಿಕೆ ಲಾಭದಾಯಕವಾಗಿದ್ದು, ಹಸುಗಳನ್ನು ತಮ್ಮ ತಮ್ಮ ಮನೆ ಮಕ್ಕಳಂತೆ ಪೋಷಣೆ ಮಾಡಿ ಉತ್ತಮ ಆಹಾರ ನೀಡಿದರೆ ಹಾಲಿನ ಉತ್ಪಾದನೆ ದ್ವಿಗುಣವಾಗಲಿದೆ. ಸಣ್ಣ ಸಣ್ಣ ರೈತರಿಗೆ ಹೈನುಗಾರಿಕೆ ವರದಾನ ಎಂದರು. ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ರಂಗನಾಥಗೌಡ, ಸಮಾಲೋಚಕರಾದ ಪ್ರವೀಣ್, ಹನುಮಂತರಾಯ ಮುಖಂಡರಾದ ಜಗದೀಶ್, ಪ್ರಶಾಂತ್ ಸೇರಿದಂತೆ ಹಾಲು ಉತ್ಪಾದಕರು ರೈತರು ಹಾಜರಿದ್ದರು.