ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಅಶೋಕಕುಮಾರ ಜಾಧವ ಅವರನ್ನು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಗುರುತಿಸಿ ಗೌರವಿಸಿರುವ ಕೆಲಸ ಅತ್ಯುತ್ತಮವಾದ್ದು ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಅಶೋಕ ಹೆಗಡೆ ಶ್ಲಾಘಿಸಿದರು.ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ನ ಪ್ರತಿಷ್ಠಿತ ಸುವರ್ಣ ಕನ್ನಡಿಗ-2024 ಪ್ರಶಸ್ತಿ ಪುರಸ್ಕೃತರಾದ ದೇವರಹಿಪ್ಪರಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಡಾ.ಅಶೋಕಕುಮಾರ ಜಾಧವ ಹಾಗೂ ಅವರ ಧರ್ಮಪತ್ನಿ ಭುವನೇಶ್ವರಿ ಅವರನ್ನು ವಿಜಯಪುರದ ಸ್ವಗೃಹದಲ್ಲಿ ಶುಕ್ರವಾರ ಕಾಲೇಜಿನ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜನ ಮೆಚ್ಚುಗೆ ಆಗುವಂತ ಸಾಧನೆ ಮಾಡಬೇಕು. ಸಮಾಜದಲ್ಲಿ ಅವರ ಹೆಸರನ್ನು ಎಲ್ಲ ವರ್ಗದವರು ಕೊಂಡಾಡುವಂತಾಗಬೇಕು. ಸಮಾಜದ ವಿವಿಧ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದವರನ್ನು ಗೌರವಿಸಿದರೇ ಅದನ್ನು ನೋಡಿ ಮತ್ತಷ್ಟು ಜನ ಉತ್ತಮ ಕೆಲಸ ಮಾಡಲು ಮುಂದಾಗುತ್ತಾರೆ. ಹೆಚ್ಚೆಚ್ಚು ಜನ ಒಳ್ಳೆಯ ಕೆಲಸ ಮಾಡುವುದರಿಂದ ಸಮಾಜದಲ್ಲಿ ಒಳಿತು ಮತ್ತು ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂ ಎಸಿ ಸಂಚಾಲಕರಾದ ಪ್ರೊ.ಶಿವಪುತ್ರ ಜಾಲವಾದಿ ಮಾತನಾಡಿ ಅಭಿನಂದಿಸಿ, ಸನ್ಮಾನಿಸಿದರು.ಇದೇ ಸಂದರ್ಭದಲ್ಲಿ ಕಾಲೇಜಿನ ಅಧಿಕ್ಷಕ ಜಗನ್ನಾಥ ಸಜ್ಜನ, ರಾಜೇಶ್ವರಿ ಸುಗಂಧಿ, ಮಂಜುನಾಥ ಮಾನೆ, ಶಾರದಾ ಸೋಮಾಪುರ, ಅಬ್ದುಲ್ ಸತ್ತಾರ ಮಳಖೇಡ, ಯುಸುಫ್ ಅಥಣಿ ಸೇರಿದಂತೆ ಹಲವಾರು ಜನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಯಾವುದೇ ವೃತ್ತಿಯಲ್ಲಿ ಮಾನಸಿಕವಾಗಿ ಸದೃಢರಾಗಿದ್ದರೇ ಹೊಸತನ ಸೃಷ್ಟಿಸಲು ಸಾಧ್ಯ. ಸ್ವಾರ್ಥವನ್ನು ಬಿಟ್ಟು ಸಮಾಜ ಸೇವೆ, ದೇಶದ ಬೆಳವಣಿಗೆ ದೃಷ್ಟಿಯಿಂದ ಕೆಲಸ ಮಾಡಬೇಕು. ನಾನು, ನನ್ನದು ಎಂಬುವುದು ಕೆಲ ವರ್ಷಗಳು ಮಾತ್ರ. ಆದರೆ, ನಮ್ಮ ದೇಶ ಎನ್ನುವುದು ನಿರಂತರ. ಹೀಗಾಗಿ, ದೇಶಕ್ಕಾಗಿ, ಭವಿಷ್ಯಕ್ಕಾಗಿ ಎಲ್ಲರ ದುಡಿಯಬೇಕು. ಸಾಧನೆ ಎನ್ನುವುದು ಒಂದೆರಡು ದಿನಗಳಲ್ಲಿ ಸಾಧಿಸುವುದಲ್ಲ. ಅದಕ್ಕೆ ಸತತ ಪರಿಶ್ರಮ ಬೇಕು.-ಪ್ರೊ.ಅಶೋಕ ಹೆಗಡೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು.