ಆನ್‌ಲೈನ್ ವಂಚನೆ: ₹1.47 ಕೋಟಿ ಹಣ ಜಪ್ತಿ

| Published : Jan 23 2025, 12:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಆನಲೈನ್ ವಂಚನೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವ ಪೊಲೀಸರು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ₹1,47,76,053 ಹಣ ಹಾಗೂ 20 ಮೊಬೈಲ್‌ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಆನಲೈನ್ ವಂಚನೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವ ಪೊಲೀಸರು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ₹1,47,76,053 ಹಣ ಹಾಗೂ 20 ಮೊಬೈಲ್‌ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ದಾಖಲಾಗಿದ್ದ ಆನ್‌ಲೈನ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಕೋಟ್ಯಂತರ ರು. ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ವಿಜಯಪುರ ನಗರ ಹಾಗೂ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿದ್ದ ಆನ್‌ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ₹೧.೪೭ ಕೋಟಿ ನಗದು ಹಾಗೂ ₹೩.೪೪ ಲಕ್ಷ ಮೌಲ್ಯದ ೨೦ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದರು.ವಿಜಯಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕಳೆದ 3 ತಿಂಗಳ ಅವಧಿಯಲ್ಲಿ ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಟ್ರೇಡಿಂಗ್, ಕ್ರಿಪ್ಟೋ ಟ್ರೇಡಿಂಗ್ ಹೆಸರಿನಲ್ಲಿ ಒಟ್ಟು ೧೨ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಬೇಧಿಸಲು ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು. ಈ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಸಿಇಎನ್ ಠಾಣೆಯಲ್ಲಿ ವಿಜಯಪುರದ ಸೃಷ್ಟಿ ಕಾಲೋನಿ ನಿವಾಸಿಯೊಬ್ಬರಿಗೆ ₹38 ಲಕ್ಷ ವಂಚನೆಯಾಗಿತ್ತು. ಡಿಜಿಟಲ್ ಅರೆಸ್ಟ್ ಮಾದರಿಯಲ್ಲಿ ಅವರಿಗೆ ವಂಚನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಆರೋಪಿಗಳ ಬ್ಯಾಂಕ್ ಖಾತೆ ಫ್ರೀಜ್‌ ಮಾಡಿ ₹೩೧.೫೨ ಲಕ್ಷಗಳನ್ನು ದೂರುದಾರರಿಗೆ ಮರಳಿ ನೀಡಲಾಗಿದೆ. ಆರೋಪಿಗಳ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ವಿವರಿಸಿದರು.

ಟ್ರೇಡಿಂಗ್ ಅಪ್ಲಿಕೇಷನ್‌ನಲ್ಲಿ ಪ್ರತಿ ತಿಂಗಳು ಶೇ.೩೦ರಷ್ಟು ಲಾಭಾಂಶ ನೀಡುವುದಾಗಿ ಹೇಳಿ ₹87 ಲಕ್ಷ ಹಣವನ್ನು ತಾಳಿಕೋಟೆಯ ವ್ಯಕ್ತಿಯೊಬ್ಬರಿಂದ ಆರೋಪಿಗಳು ಪಡೆದುಕೊಂಡಿದ್ದರು. ಈಗ ಆರೋಪಿಗಳ ಬ್ಯಾಂಕ್ ಖಾತೆ ಫ್ರೀಜ್ ಮಾಡಿ ಈಗಾಗಲೇ ₹68.25 ಲಕ್ಷಗಳನ್ನು ದೂರುದಾರರಿಗೆ ಮರಳಿಸಲಾಗಿದೆ ಎಂದರು.

ಇನ್ನೊಂದು ಪ್ರಕರಣದಲ್ಲಿ ಸಿಂದಗಿ ಸಾಫ್ಟ್‌ವೇರ್ ಇಂಜಿನಿಯರ್ ಅವರಿಗೂ ಮೋಸ ನಡೆದಿತ್ತು. ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಷೇರು ನೀಡುವುದಾಗಿ ನಂಬಿಸಿ ₹೧ ಕೋಟಿ ಹಣವನ್ನು ಆರೋಪಿಗಳು ತಮ್ಮ ಅಕೌಂಟ್‌ಗೆ ಹಾಕಿಸಿಕೊಂಡಿದ್ದರು. ಆರೋಪಿಗಳ ಬ್ಯಾಂಕ್ ಖಾತೆ ಸೀಜ್ ಮಾಡಲಾಗಿದ್ದು, ಈಗಾಗಲೇ ₹೯.೯೭ ಲಕ್ಷ ಹಣ ಮರಳಿ ನೀಡಲಾಗಿದೆ ಎಂದು ಹೇಳಿದರು.

ನಗರದ ನಿವಾಸಿಯೊಬ್ಬರಿಗೆ ಅಂತಾರಾಷ್ಟ್ರೀಯ ಡಾಲರ್‌ನಲ್ಲಿ ಹೂಡಿಕೆ ಮೊದಲಾದ ವಿಷಯಗಳನ್ನು ಹೇಳಿ ನಂಬಿಸಿ ₹೨ ಕೋಟಿ ಹಣ ಹಾಕಿಸಿಕೊಂಡಿದ್ದರು. ₹೩೮ ಲಕ್ಷಗಳನ್ನು ದೂರುದಾರರಿಗೆ ಮರಳಿ ನೀಡಲಾಗಿದೆ ಎಂದು ನಿಂಬರಗಿ ವಿವರಿಸಿದರು.

ದುರಾಸೆಯೇ ಮೋಸಕ್ಕೆ ಕಾರಣ:

ಆಸೆ ದುಃಖಕ್ಕೆ ಮೂಲ, ದುರಾಸೆಯೇ ಮೋಸಕ್ಕೆ ಕಾರಣ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಯಾರೂ ದುರಾಸೆಗೊಳಗಾಗಿ ಮೋಸ ಹೋಗಬೇಡಿ ಎಂದು ಸಲಹೆ ನೀಡಿದರು. ಈ ರೀತಿ ಆನ್‌ಲೈನ್ ವಂಚನೆಯಿಂದ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಆನ್‌ಲೈನ್ ವ್ಯವಹಾರಗಳ ಬಗ್ಗೆ ಸಂಪೂರ್ಣ ಜಾಗೃತಿ ಇರಲಿ. ವಿನಾಕಾರಣ ಯಾರೊಂದಿಗೂ ಎಟಿಎಂ ಪಿನ್, ಬ್ಯಾಂಕ್ ಖಾತೆಯ ವಿವರ ಹಂಚಿಕೊಳ್ಳಬೇಡಿ. ಅನಧಿಕೃತ ತಂತ್ರಾಂಶಗಳಿಂದ ಸಾಲ ಪಡೆಯುವ ಕೆಲಸ ಮಾಡಬೇಡಿ. ಅಪರಿಚಿತರಿಂದ ಬರುವ ವಿಡಿಯೋ ಕರೆಗಳನ್ನು ಸ್ವೀಕರಿಸಬೇಡಿ ಎಂದು ಕರೆ ನೀಡಿದರು.

ಈ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಶಂಕರ ಮಾರಿಹಾಳ, ಡಿವೈಎಸ್‌ಪಿ ಸುನೀಲ ಕಾಂಬಳೆ, ಸಿಪಿಐ ರಮೇಶ ಅವಜಿ ಮುಂತಾದವರು ಇದ್ದರು.