ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಬೆಣ್ಣಿಹಳ್ಳಕ್ಕೆ ₹200 ಕೋಟಿ.. ವಾಲ್ಮಿಗೆ ಅಲ್ಪಸ್ವಲ್ಪ ಅನುದಾನ.. ಪಾಲಿಕೆ ₹127 ಕೋಟಿ..!ಕಳೆದ ವರ್ಷ ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳ ಪೈಕಿ ಈ ಎರಡಕ್ಕೆ ಸರ್ಕಾರ ಅನುದಾನ ನೀಡಿರುವುದು. ಉಳಿದ ಎಲ್ಲ ಯೋಜನೆಗಳು ಬರೀ ಘೋಷಣೆಗಳಾಗಿಯೇ ಉಳಿದಿವೆ.
ಏನೇನು ಘೋಷಿಸಿತ್ತು?: ಬೆಣ್ಣಿಹಳ್ಳ ಪ್ರವಾಹ ತಡೆಗೆ ಗೋಡೆ ನಿರ್ಮಿಸುವ ಯೋಜನೆ, ಬಯೋ ಸಿಎನ್ಜಿ ಘಟಕ ಸ್ಥಾಪನೆ, ಇಂಟಿಗ್ರೆಟೆಡ್ ಟೌನ್ಶಿಪ್, ಕ್ರಿಟಿಕಲ್ ಕೇರ್ ಬ್ಲಾಕ್, ಕೈಗಾರಿಕಾ ಕಾರಿಡಾರ್ನಡಿ ಧಾರವಾಡದಲ್ಲಿ 6 ಸಾವಿರ ಎಕರೆ ಪ್ರದೇಶಾಭಿವೃದ್ಧಿ (ನೋಡ್), ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ₹200 ಕೋಟಿ, ಕೌಶಲ್ಯ ಅಭಿವೃದ್ಧಿ ಕೇಂದ್ರ, ವಾಲ್ಮಿ ಉನ್ನತೀಕರಣ.. ತಡರಾತ್ರಿ ವರೆಗೂ ನಗರ ಜೀವನ.. ಇವೆಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್ನಲ್ಲಿ ಹುಬ್ಬಳ್ಳಿ-ಧಾರವಾಡ ಜಿಲ್ಲೆಗೆ ಘೋಷಿಸಿರುವ ಯೋಜನೆಗಳು.ಈಡೇರಿದ್ದು ಏನೇನು?: ಬೆಣ್ಣಿಹಳ್ಳ ಪ್ರವಾಹ ಬ್ರೇಕ್ ಹಾಕಬೇಕೆಂಬ ಉದ್ದೇಶದಿಂದ ತಡೆಗೋಡೆ ನಿರ್ಮಿಸಲು ಕರ್ನಾಟಕ ನೀರಾವರಿ ನಿಗಮ ₹1652 ಕೋಟಿ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿತ್ತು. ಆದರೆ ಸರ್ಕಾರ ಇದನ್ನು ಪಕ್ಕಕ್ಕೆ ಸರಿಸಿ ಬರೀ ₹200 ಕೋಟಿ ಬಿಡುಗಡೆ ಮಾಡಿದೆ. ಆ ಕೆಲಸವಿನ್ನೂ ಶುರುವಾಗಿಲ್ಲ. ಟೆಂಡರ್ ಪ್ರಕ್ರಿಯೆ ನಡೆದಿದೆ.
ವಾಲ್ಮಿ ಉನ್ನತೀಕರಣ: ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ) ಯನ್ನು ಉನ್ನತೀಕರಿಸುವುದಾಗಿ ಸರ್ಕಾರ ಹೇಳಿಕೊಂಡಿತ್ತು. ಹಾಗೆ ನೋಡಿದರೆ ಈ ಯೋಜನೆಯನ್ನು ಹಿಂದೆಯೇ ಘೋಷಿಸಿತ್ತು. ಬಜೆಟ್ನಲ್ಲಿ ಮತ್ತೊಮ್ಮೆ ಘೋಷಿಸಿತ್ತು ಅಷ್ಟೇ. ಅದಕ್ಕೆ ತಕ್ಕಂತೆ ಸ್ವಲ್ಪ ಅನುದಾನ ಬಿಡುಗಡೆ ಮಾಡಿ ವಾಲ್ಮಿ ಉನ್ನತೀಕರಣಕ್ಕೆ ಮೊದಲ ಹೆಜ್ಜೆಯಂತೂ ಇಟ್ಟಿದೆ. ಆದರೆ ಇದು ಎಷ್ಟರ ಮಟ್ಟಿಗೆ ಎಂಬುದಕ್ಕೆ ಇನ್ನು ಕೆಲ ದಿನ ಬೇಕಾಗುತ್ತದೆ ಎಂಬುದು ಮಾತ್ರ ಸ್ಪಷ್ಟ.ಈಡೇರದ ಯೋಜನೆಗಳಿವು: ಜನರ ಆರೋಗ್ಯದ ದೃಷ್ಟಿಯಿಂದ ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಮಾಡುವುದಾಗಿ ಘೋಷಿಸಿತ್ತು. ಆದರೆ ಈ ಬಗ್ಗೆ ಈ ವರೆಗೂ ಚಕಾರ ಕೂಡ ಎತ್ತುವ ಗೋಜಿಗೆ ಸರ್ಕಾರ ಹೋಗಿಲ್ಲ.
ಕೈಗಾರಿಕೆ ಬೆಳೆದಂತೆ ಟೌನ್ಶಿಪ್ ಮಾಡುವುದು ಕೂಡ ಅಷ್ಟೇ ಅತ್ಯಗತ್ಯ. ಕಳೆದ ವರ್ಷ ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಎಂಟು ಪ್ರಮುಖ ನಗರಗಳಲ್ಲಿ ಟೌನ್ಶಿಪ್ ಮಾಡುವುದಾಗಿ ಘೋಷಿಸಿತ್ತು. ಆದರೆ ಇದು ಬರೀ ಘೋಷಣೆಯಾಗಿಯೇ ಉಳಿದಿದೆ.ಇನ್ನು ಬೆಂಗಳೂರು- ಮುಂಬೈ ಕೈಗಾರಿಕಾ ಕಾರಿಡಾರ್ನಿಂದ ಅನುಕೂಲವಾಗಲೆಂಬ ಉದ್ದೇಶದಿಂದ 6 ಸಾವಿರ ಎಕರೆ ಪ್ರದೇಶವನ್ನು ಗುರುತಿಸಿ ಕೈಗಾರಿಕೆಗಾಗಿ ಅಭಿವೃದ್ಧಿಪಡಿಸುವುದಾಗಿ ಹೇಳಿಕೊಂಡಿತ್ತು. ಆ ಕೆಲಸವೂ ಶುರುವಾಗಿಲ್ಲ.
ಬಯೋ ಸಿಎನ್ಜಿ: ಪರ್ಯಾಯ ಇಂಧನಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರವಾಡದಲ್ಲಿ ಬಯೋ ಸಿಎನ್ಜಿ ಘಟಕ ಪ್ರಾರಂಭಿಸುವುದಾಗಿ ಹೇಳಿದ್ದು ಕೂಡ ಈ ವರೆಗೂ ಚಕಾರ ಕೂಡ ಎತ್ತಿಲ್ಲ. ಬರೀ ಘೋಷಣೆಯಾಗಿಯೇ ಉಳಿದಿದೆ.ಹೀಗೆ ಸರ್ಕಾರ ಘೊಷಿಸಿದ್ದಷ್ಟು ಕೊಟ್ಟಿಲ್ಲ. ಆದರೆ ಅಲ್ಪಸ್ವಲ್ಪ ಕೊಟ್ಟಿರುವುದಂತೂ ಸತ್ಯ.
ಪಾಲಿಕೆಗೆ ಕೊಡ್ತು ₹127 ಕೋಟಿ: ಇನ್ನು ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 2.0 ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ₹2 ಸಾವಿರ ಕೋಟಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅದರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ₹ 200 ಕೋಟಿ ಕೊಡಲಾಗುವುದು ಎಂದು ಹೇಳಿತ್ತು. ಅದರಂತೆ ₹127 ಕೋಟಿ ಪಾಲಿಕೆಗೆ ಬಂದಿದೆ. ಆದರೆ ಇದರ ಅನುಷ್ಠಾನದ ಜವಾಬ್ದಾರಿ ಪಾಲಿಕೆಗೆ ಸಿಕ್ಕಿಲ್ಲ. ಶಾಸಕರ ವ್ಯಾಪ್ತಿಗೆ ಬಂದಂತಾಗಿದೆ. ನಗರಾಭಿವೃದ್ಧಿ ಇಲಾಖೆಯೇ ಟೆಂಡರ್ ಕರೆದು ಕೆಲಸ ಅಂತಿಮಗೊಳಿಸಲಿದೆ. ಇನ್ನೂ ಟೆಂಡರ್ ಶುರುವಾಗಿಲ್ಲ. ಆದರೆ ಇದಕ್ಕೆ ಪಾಲಿಕೆಯಲ್ಲಿ ತೀವ್ರ ವಿರೋಧವೂ ವ್ಯಕ್ತವಾಗಿತ್ತು.ತಡರಾತ್ರಿವರೆಗೂ ನಗರ ಜೀವನ: ಕಳೆದ ಬಜೆಟ್ನಲ್ಲಿ ಬೆಂಗಳೂರಿನಂತೆ ಹುಬ್ಬಳ್ಳಿಯಲ್ಲೂ ತಡರಾತ್ರಿ 1ರ ವರೆಗೆ ಜನಜೀವನ ನಡೆಯಲಿದೆ ಎಂದು ತಿಳಿಸಿತ್ತು. ಅಂದರೆ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳೆಲ್ಲ 1ರ ವರೆಗೆ ತೆರೆಯಲಿವೆ ಎಂದು ಹೇಳಿಕೊಂಡಿತ್ತು. ಹಾಗೆ ನೋಡಿದರೆ ಅನಧಿಕೃತವಾಗಿ ಅದಕ್ಕಿಂತ ಮುಂಚೆನಿಂದಲೂ ರಾತ್ರಿ 2 ವರೆಗೂ ನಡೆಯುತ್ತಿದ್ದವು. ಬಜೆಟ್ ಘೋಷಣೆ ಬಳಿಕವೂ ಅದು ಮುಂದುವರಿದಿದೆ ಅಷ್ಟೇ.