ಆರೋಗ್ಯ ರಕ್ಷಣೆಯ ಜಗತ್ತಿನಲ್ಲಿ ಆಳವಾದ ಅರ್ಥವನ್ನು ದೀಪ ಬೆಳಗಿಸುವುದು ಹೊಂದಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ದೇಹದ ರೋಗ ಗುಣಪಡಿಸುವ ಜತೆಗೆ ಭರವಸೆ ಮೂಡಿಸಿ, ದುಃಖ ನಿವಾರಿಸುವುದೇ ನೈಜ ಆರೋಗ್ಯ ಸೇವೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌ಹೇಳಿದರು.

ನಗರದ ಮುಕ್ತ ಗಂಗೋತ್ರಿಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಸುಯೋಗ್‌ಗ್ರೂಪ್‌ಆಫ್‌ಮೆಡಿಕಲ್‌ಇನ್‌ಸ್ಟಿಟ್ಯೂಟ್‌ವತಿಯಿಂದ ಆಯೋಜಿಸಿದ್ದ ಸುಯೋಗ್‌ನರ್ಸಿಂಗ್‌ಕಾಲೇಜು ಮತ್ತು ಸುಯೋಗ್‌ಇನ್‌ಸ್ಟಿಟ್ಯೂಟ್‌ಆಫ್‌ಅಲೈಡ್‌ಹೆಲ್ತ್‌ಸೈನ್ಸ್‌‌ನ 2020-24ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮತ್ತು ಇದೇ ಕೋರ್ಸ್‌ಗಳ ಮೊದಲ ವರ್ಷದ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಆರೋಗ್ಯ ರಕ್ಷಣೆಯ ಜಗತ್ತಿನಲ್ಲಿ ಆಳವಾದ ಅರ್ಥವನ್ನು ದೀಪ ಬೆಳಗಿಸುವುದು ಹೊಂದಿದೆ. ಕೈಯಲ್ಲಿ ದೀಪ ಹಿಡಿದು ಪ್ಲಾರೆನ್ಸ್‌ನೈಟಿಂಗೇಲ್‌ಅವರು ರೋಗಿಗಳನ್ನು ಉಪಚರಿಸುತ್ತಿದ್ದರು. ಅವರ ಪರಿಶ್ರಮ ಮತ್ತು ಕೊಡುಗೆಯು ಆಧುನಿಕ ನರ್ಸಿಂಗ್‌ಸೇವೆಗೆ ಅಡಿಪಾಯ ಹಾಕಿತು ಎಂದರು.

ಆರೋಗ್ಯ ಸೇವೆಯ ಜಗತ್ತು ನಿರಂತರವಾಗಿ ಬೆಳವಣಿಗೆ ಹೊಂದುತ್ತಿದ್ದು, ಇದರೊಂದಿಗೆ ಸವಾಲುಗಳು ಎದುರಾಗುತ್ತಿವೆ. ನೀವು ಇಂದು ಪದವಿ ಸ್ವೀಕರಿಸುತ್ತಿದ್ದಂತೆ ನಿಮ್ಮ ಪ್ರಯಾಣದಲ್ಲಿ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಲಿದೆ. ಜೊತೆಗೆ ಪದವೀದರರಾದ ನಿಮ್ಮ ಮೇಲೆ ಮತ್ತಷ್ಟು ಜವಾಬ್ದಾರಿ ಹೆಗಲೇರಲಿದೆ. ವೃತ್ತಿ ಜೀವನದ ಹೊಸ್ತಿಲಲ್ಲಿ ಇರುವ ನೀವು ಆರೋಗ್ಯ ಸೇವೆಯಲ್ಲಿ ಎಂದೂ ಜವಾಬ್ದಾರಿ ಮರೆಯಬಾರದು ಎಂದು ಅವರು ಕಿವಿಮಾತು ಹೇಳಿದರು.

ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಸಮಾಜಕ್ಕೆ ನಿಮ್ಮ ಮಾನವೀಯ ಸ್ಪರ್ಶ ಅತ್ಯಂತ ಅಗತ್ಯ. ನಿಮ್ಮ ಸೇವೆಯಲ್ಲಿ ಭಾರತದ ಭವಿಷ್ಯ ಅಡಗಿದೆ. ಮಾನವೀಯ ಗುಣಗಳೊಂದಿಗೆ ವೃತ್ತಿ ಜೀವನ ಆರಂಭಿಸುವ ಮೂಲಕ ಸಂಸ್ಥೆ, ಪೋಷಕರು, ಗುರುಗಳಿಗೆ ಹೆಸರು ತರಬೇಕು ಎಂದು ಅವರು ತಿಳಿ ಹೇಳಿದರು.

ಇದಕ್ಕೂ ಮುನ್ನ ಸುಯೋಗ್‌ನರ್ಸಿಂಗ್‌ಕಾಲೇಜಿನ ಬಿಎಸ್ಸಿ ನರ್ಸಿಂಗ್‌ನ 43 ವಿದ್ಯಾರ್ಥಿಗಳು ಹಾಗೂ ಸುಯೋಗ್‌ಎಂಜಿನಿಯರಿಂಗ್‌ಆಫ್‌ಅಲೈಡ್‌ಹೆಲ್ತ್‌ಸೈನ್ಸ್‌ನ ಬಿಎಸ್ಸಿಯ 19 ವಿದ್ಯಾರ್ಥಿಗಳಿಗೆ (2020-24ನೇ ಸಾಲಿನ ಬ್ಯಾಟ್‌ಗಳು) ಪದವಿ ಪ್ರದಾನ ಮಾಡಲಾಯಿತು.

ನಿಮ್ಹಾನ್ಸ್‌ಆಸ್ಪತ್ರೆಯ ನರ್ಸಿಂಗ್‌ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ನಾಗರಾಜಯ್ಯ, ಬೆಂಗಳೂರಿನ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಸೆನೆಟ್‌ಸದಸ್ಯೆ ಡಾ.ಡಿ. ಯಶೋಧ, ಮುಕ್ತ ವಿವಿಯ ವಿಶ್ರಾಂತ ಕುಲಪತಿ ಡಾ.ಎನ್‌.ಎಸ್‌. ರಾಮೇಗೌಡ, ಸುಯೋಗ್‌ಆಸ್ಪತ್ರೆ ಮತ್ತು ಎಸ್‌.ಜಿ.ಒಎಂಐ ಅಧ್ಯಕ್ಷ ಡಾ.ಎಸ್‌.ಪಿ. ಯೋಗಣ್ಣ, ಟ್ರಸ್ಟಿ ಸುಧಾ ಯೋಗಣ್ಣ, ಎಂಡಿ ಡಾ. ಸುಯೋಗ್‌ಯೋಗಣ್ಣ, ನಿರ್ದೇಶಕರಾದ ಡಾ.ಆರ್‌. ರಾಜೇಂದ್ರಪ್ರಸಾದ್‌, ಡಾ. ಸೀಮಾ ಯೋಗಣ್ಣ, ಸುಯೋಗ್‌ನರ್ಸಿಂಗ್‌ಕಾಲೇಜು ಪ್ರಾಂಶುಪಾಲೆ ಪ್ರೊ.ಟಿ. ನಾಗಮಣಿ ಇದ್ದರು.