ನಂಜದೇವನಪುರ ಗ್ರಾಮದ ಸಿಸಿ ಕ್ಯಾಮೆರಾದಲ್ಲಿ 5 ಹುಲಿಗಳ ಓಡಾಟ ಪತ್ತೆಯಾದ ಹಿನ್ನೆಲೆಯಲ್ಲಿ ಡ್ರೋನ್, ಆನೆಯಿಂದ ಕೂಬಿಂಗ್ ಆರಂಭ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ನಂಜದೇವನಪುರ ಗ್ರಾಮದ ಸಿಸಿ ಕ್ಯಾಮೆರಾದಲ್ಲಿ 5 ಹುಲಿಗಳ ಓಡಾಟ ಪತ್ತೆಯಾದ ಹಿನ್ನೆಲೆಯಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳು ಡ್ರೋನ್ ಮೂಲಕ ಹಾಗೂ ಆನೆಗಳ ಕೂಬಿಂಗ್ ಮೂಲಕ ಕಾರ್ಯಾಚರಣೆ ಆರಂಭಿಸಿದ್ದಾರೆ.

ಗ್ರಾಮದ ಬಳಿಯ ಗುಂದಿ ತೋಟ ಪ್ರದೇಶದ ಎನ್. ಜಿ. ಪ್ರಶಾಂತ್ ಎಂಬ ರೈತರ ಜಮೀನಿನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಕಳೆದ ಮೂರು ದಿನಗಳ ಹಿಂದೆ ಐದು ಹುಲಿಗಳು ಒಂದರ ಹಿಂದೆ ಒಂದರಂತೆ ಹಾದು ಹೋಗುವ ದೃಶ್ಯ ಸೆರೆಯಾಗಿತ್ತು. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿ ಹುಲಿಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಬೇಕೆಂದು ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದರು.

ಈ ಹಿಂದೆ ಇದೇ ನಂಜದೇವನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಆರ್‌ಟಿ ಚಾಮರಾಜನಗರ ಬಫರ್ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗಳ ಸೆರೆಗಾಗಿ ವಾಕ್ ಗ್ರೂ ಕೇಜ್ ಅಳವಡಿಸಿ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಆದರೂ ಯಾವುದೇ ಹುಲಿ ಸೆರೆಯಾಗಿರಲಿಲ್ಲ. ಈಗ ಮತ್ತೆ ಹುಲಿಗಳು ಓಡಾಡಿರುವ ಹಿನ್ನೆಲೆಯಲ್ಲಿ ಡೋನ್ ಮೂಲಕ ಕಾರ್ಯಾಚರಣೆ ಆರಂಭಿಸಿದೆ.


ಕೆಲವು ಕಡೆಯಲ್ಲಿ ಹುಲಿಗಳು ಓಡಾಡಿದ ಗುರುತುಗಳು ಪತ್ತೆಯಾಗಿದೆ. ಡ್ರೋನ್ ಕ್ಯಾಮೆರಾದಲ್ಲಿ ವೀರನಪುರ ಬಳಿಯ ಕರಿಕಲ್ಲು ಕ್ವಾರೆಯ ಬಂಡೆಯ ಬಲಿ ಹುಲಿಯೊಂದ ಕಾಣಿಸಿಕೊಂಡಿದ್ದು, ಇನ್ನೂ ನಾಲ್ಕು ಹುಲಿಗಳು ಅಲ್ಲೆ ಇರಬಹುದೆಂದು ಶಂಕಿಸಲಾಗಿದೆ.

ಹುಲಿಗಳ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಸೋಮವಾರದಿಂದ ಅನೆಗಳ ಕೂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಸಿಎಫ್ ಶ್ರೀಪತಿ ತಿಳಿಸಿದ್ದಾರೆ.

ಕಾರ್ಯಾಚರಣೆ ನಡೆಸುತ್ತಿದ್ದು, ನಂಜದೇವನಪುರ, ವೀರನಪುರ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರನ್ನು ಜಮೀನುಗಳಿಗೆ ಹೋಗದಂತೆ ಸೂಚನೆ ನೀಡಲಾಗಿದೆ. ಕೂಂಬಿಂಗ್ ವೇಳೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ, ತಾಲೂಕು ಆಡಳಿತ ಸೂಚನೆ ನೀಡಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಆದಷ್ಟು ಬೇಗ ಹುಲಿಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಾಸಕರ ಭೇಟಿ:

ಶಾಸಕ ಸಿ.ಪುಟ್ಟರಂಗಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಖ್ಯಮಂತ್ರಿಗಳ ಜೊತೆ ದೂರವಾಣಿಯ ಮೂಲಕ ಮಾತನಾಡಿದ್ದಾರೆ, ಹುಲಿಗಳ ಸೆರೆಗೆ ಅಗತ್ಯ ಕ್ರಮ ತೆಗೆದುಕೊಳ್ಳದಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಇಲ್ಲಿಗೆ ಡ್ರೋನ್ ಕ್ಯಾಮೆರಾ ಕೊಡಿಸುವುದಾಗಿ ತಿಳಿಸಿದರು.

ಹುಲಿಗಳ ಸೆರೆಗೆ ಕೂಬಿಂಗ್ ಕಾರ್ಯಾಚರಣೆಗೆ ಬಂದ ಈಶ್ವರ್ ಮತ್ತು ಲಕ್ಷ್ಮಣ್ ಎಂಬ ಆನೆಗಳನ್ನು ಗ್ರಾಮಸ್ಥರು ಪೂಜೆ ಮಾಡಿ ಬರಮಾಡಿಕೊಂಡರು.

22ಸಿಎಚ್‌ಎನ್4

ಚಾಮರಾಜನಗರ ತಾಲೂಕಿನ ನಂಜದೇವನಪುರದಲ್ಲಿ ಹುಲಿಗಳ ಸೆರೆಗೆ ಕೂಬಿಂಗ್ ಕಾರ್ಯಾಚರಣೆಗೆ ಬಂದ ಆನೆಗಳನ್ನು ಗ್ರಾಮಸ್ಥರು ಪೂಜೆ ಮಾಡಿ ಬರಮಾಡಿಕೊಂಡರು.