ಆಪರೇಷನ್ ಸಿಂದೂರ ಯಶಸ್ವಿ, ಬೃಹತ್ ತಿರಂಗಾ ಯಾತ್ರೆ

| Published : May 25 2025, 02:01 AM IST / Updated: May 25 2025, 02:02 AM IST

ಆಪರೇಷನ್ ಸಿಂದೂರ ಯಶಸ್ವಿ, ಬೃಹತ್ ತಿರಂಗಾ ಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ನೆರೆಯ ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡುವ ಮೂಲಕ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ದೇಶದ ಅಮಾಯಕ ಹಿಂದು ಪ್ರವಾಸಿಗರನ್ನು ಹತ್ಯೆಗೈದ ಉಗ್ರರಿಗೆ ಆಪರೇಷನ್ ಸಿಂದೂರ್ ಮೂಲಕ ಭಾರತದ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಆಪರೇಷನ್ ಸಿಂದೂರ ಮೂಲಕ ಭಾರತದ ಸೈನಿಕರು ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ, ರೈತಸಂಘ, ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಆಪರೇಷನ್ ಸಿಂದೂರ ಮೂಲಕ ದೇಶದ ಸೈನಿಕರು ಉಗ್ರರನ್ನು ಸದೆಬಡಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದ ಸೈನಿಕರ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ. ದೇಶದ ಗಡಿ ಹಾಗೂ ಭದ್ರತೆ ವಿಷಯದಲ್ಲಿ ರಾಜಕೀಯ ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಕೇವಲ ಬಾಯಿ ಚಪಲಕ್ಕೆ ಮಾತನಾಡುವ ಅವರು ದೇಶಕ್ಕೆ ಹಾಗೂ ದೇಶದ ಸೈನಿಕರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ನೆರೆಯ ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡುವ ಮೂಲಕ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ದೇಶದ ಅಮಾಯಕ ಹಿಂದು ಪ್ರವಾಸಿಗರನ್ನು ಹತ್ಯೆಗೈದ ಉಗ್ರರಿಗೆ ಆಪರೇಷನ್ ಸಿಂದೂರ್ ಮೂಲಕ ಭಾರತದ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಜೊತೆಗೆ ದೇಶದೊಳಗೇ ಇದ್ದು ದೇಶದ್ರೋಹಿ ಕೆಲಸಕ್ಕೆ ಮುಂದಾಗುತ್ತಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಉಗ್ರರ ಅಟ್ಟಹಾಸ ಮಿತಿ ಮೀರಿದೆ. ಅವರನ್ನು ಮಟ್ಟ ಹಾಕಬೇಕೆಂದರೆ ಭಾರತದ ಸೈನಿಕರಿಂದ ಮಾತ್ರ ಸಾಧ್ಯ. ಮುಂದೆ ನಮ್ಮ ಮಕ್ಕಳು ನೆಮ್ಮದಿಯಿಂದ ಇರಬೇಕು ಎಂದರೆ ನಾವೆಲ್ಲರೂ ದೇಶದ ಸೈನಿಕರ ಜೊತೆ ಇದ್ದೇವೆ ಎಂಬ ಬೆಂಬಲದೊಂದಿಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಗೌತಮ ಕ್ಷೇತ್ರದ ಶ್ರೀಗಜಾನನ ಸ್ವಾಮೀಜಿ ಮಾತನಾಡಿ, ಉಗ್ರ ಚಟುವಟಿಕೆಯನ್ನು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನದ ನಡೆಯನ್ನು ತೀವ್ರವಾಗಿ ಖಂಡಿಸಿದರು. ಜಾಗತಿಕ ಮಟ್ಟದಲ್ಲಿ ಅವರನ್ನು ಒಬ್ಬಂಟಿಯಾಗಿಸಿ ಉಗ್ರ ಚಟುವಟಿಕೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು ಎಂದರು.

ಇದಕ್ಕೂ ಮುನ್ನ ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಭಾರತದ ಬಾವುಟದೊಂದಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಬಿಜೆಪಿ, ರೈತ ಸಂಘ, ವಿವಿಧ ಕನ್ನಡಪ್ರಭ ಸಂಘಟನೆ ಸೇರಿದಂತೆ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ದೇಶದ ಸೈನಿಕರಿಗೆ ಜೈಕಾರ ಕೂಗಿದರು.

ತಿರಂಗಯಾತ್ರೆಯಲ್ಲಿ ಬಿಜೆಪಿ ರಾಜ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್, ತಾಲೂಕು ಅಧ್ಯಕ್ಷ ಪೀ.ಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ಬಿ.ಸಂತೋಷ್ ಕುಮಾರ್, ಹಿಂದೂ ಜಾಗರಣಾ ವೇಧಿಕೆ ಚಂದನ್, ಮಂಡ್ಯ ರಕ್ಷಣಾ ವೇದಿಕೆಯ ಶಂಕರ್ ಬಾಬು, ಕರ್ನಾಟಕ ರಕ್ಷಣಾ ವೇಧಿಕೆ ಚಂದಗಾಲು ಶಂಕರ್, ಪುರಸಭೆ ಸದಸ್ಯ ಎಸ್.ಪ್ರಕಾಶ್, ಕೆಂಪೇಗೌಡ ಯುವ ಶಕ್ತಿ ವೇದಿಕೆ ಮಹೇಶ್ ಸೇರಿದಂತೆ ಇತರರು ಭಾಗವಹಿಸಿ ದೇಶದ ಪರ ಘೋಷಣೆ ಕೂಗಿದರು.