ಸಾರಾಂಶ
ಈ ಹಿಂದಿನ ಅಧಿವೇಶನಗಳಿಗಿಂತ ಈ ಬಾರಿ ವಿಧಾನಸಭೆಯ ಕಾರ್ಯಕಲಾಪಗಳನ್ನು ಒಂದು ಗಂಟೆ ಬೇಗ ಆರಂಭಿಸುತ್ತಿರುವುದಕ್ಕೆ ಮಂಗಳವಾರ ಸದನದಲ್ಲೇ ಪಕ್ಷಾತೀತವಾಗಿ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕನ್ನಡಪ್ರಭ ವಾರ್ತೆ, ವಿಧಾನಸಭೆ
ಈ ಹಿಂದಿನ ಅಧಿವೇಶನಗಳಿಗಿಂತ ಈ ಬಾರಿ ವಿಧಾನಸಭೆಯ ಕಾರ್ಯಕಲಾಪಗಳನ್ನು ಒಂದು ಗಂಟೆ ಬೇಗ ಆರಂಭಿಸುತ್ತಿರುವುದಕ್ಕೆ ಮಂಗಳವಾರ ಸದನದಲ್ಲೇ ಪಕ್ಷಾತೀತವಾಗಿ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.ಆದರೆ, ಸದಸ್ಯರ ಆಕ್ಷೇಪಕ್ಕೆ ಮಣೆ ಹಾಕದ ಸ್ಪೀಕರ್ ಯು.ಟಿ.ಖಾದರ್, 10 ದಿನದ ಅಧಿವೇಶನದಲ್ಲಿ 8 ದಿನ ಒಂದು ಗಂಟೆ ಬೇಗ ಬಂದರೆ ಏನು ನಷ್ಠ?. ಎದ್ದು ನೇರ ವಿಧಾನಸೌಧಕ್ಕೇ ಬನ್ನಿ. ತಿಂಡಿ ವ್ಯವಸ್ಥೆಯನ್ನೂ ಮಾಡಿದ್ದೇವಲ್ಲ ಎಂದು ಸಲಹೆ ನೀಡಿದರು. ಬಳಿಕ, ಸದನವನ್ನು ಬುಧವಾರ ಬೆಳಗ್ಗೆ 9.45ಕ್ಕೆ ಮುಂದೂಡಿದರು. ಮಂಗಳವಾರ ಭೋಜನ ವಿರಾಮದ ಬಳಿಕ 3 ಗಂಟೆಗೆ ಕಲಾಪ ಆರಂಭಗೊಂಡಾಗ ಪ್ರತಿಪಕ್ಷ ನಾಯಕ ಆರ್.ಅಶೋಕ್, ಅರವಿಂದ ಬೆಲ್ಲದ್ ಸೇರಿದಂತೆ ಬಿಜೆಪಿಯ ಇತರ ಕೆಲ ಸದಸ್ಯರು ಬೆಳಗ್ಗೆ ಬೇಗ ಸದನಕ್ಕೆ ಬರಲು ಸದಸ್ಯರ ಆಕ್ಷೇಪವಿದೆ ಎಂದರು. ಕಾಂಗ್ರೆಸ್ನ ಸದಸ್ಯರೂ ಇದಕ್ಕೆ ದನಿಗೂಡಿಸಿದರು. ಗೃಹ ಸಚಿವ ಡಾ.ಪರಮೇಶ್ವರ್ ಕೂಡ ಬೆಳಗ್ಗೆ 10.30ಕ್ಕೆ ಸದನ ಆರಂಭಿಸಬೇಕೆಂದು ನಿರ್ಧಾರ ಆಗಿದೆ ಅಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಸ್ಪೀಕರ್ ಪ್ರತಿಕ್ರಿಯೆ ನೀಡಿ, ಆ ರೀತಿ ನಿರ್ಧಾರ ಆಗಿಲ್ಲ. ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಲು 20 ಜನ ಹೆಸರು ಕೊಟ್ಟಿದ್ದಾರೆ. ಕೊನೆಯಲ್ಲಿ ಸದನ ಮುಗಿಯುವಾಗ ನಮಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ ಎಂದು ಹೇಳುತ್ತೀರಿ. ಹಾಗಾಗಿ ಒಂದು ಗಂಟೆಗೆ ಬೇಗ ಸದನ ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.