ಬೇಡ್ತಿ-ವರದಾ ನದಿ ಜೋಡಣೆಗೆ ತಪ್ಪು ಕಲ್ಪನೆಯಿಂದ ವಿರೋಧ ಮಾಡುವುದು ಬೇಡ, ನೀರಿನ ಸದ್ಬಳಕೆಗೆ ಮಾಡಿರುವ ಯೋಜನೆ ಪರಿಷ್ಕರಣೆ ಆಗಿದೆ. ಶೇ. 10ರಷ್ಟು ಮಾತ್ರ ನೀರನ್ನು ಬಳಸಿಕೊಳ್ಳಲು ಯೋಜಿಸಿದ್ದು, ಒಟ್ಟು ನೀರಿನ ಹರಿವಿಗೆ ಯಾವುದೇ ತೊಂದರೆಯಿಲ್ಲ, ದಯವಿಟ್ಟು ಯೋಜನೆಗೆ ಸಹಕಾರ ನೀಡಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಹಾವೇರಿ: ಬೇಡ್ತಿ-ವರದಾ ನದಿ ಜೋಡಣೆಗೆ ತಪ್ಪು ಕಲ್ಪನೆಯಿಂದ ವಿರೋಧ ಮಾಡುವುದು ಬೇಡ, ನೀರಿನ ಸದ್ಬಳಕೆಗೆ ಮಾಡಿರುವ ಯೋಜನೆ ಪರಿಷ್ಕರಣೆ ಆಗಿದೆ. ಶೇ. 10ರಷ್ಟು ಮಾತ್ರ ನೀರನ್ನು ಬಳಸಿಕೊಳ್ಳಲು ಯೋಜಿಸಿದ್ದು, ಒಟ್ಟು ನೀರಿನ ಹರಿವಿಗೆ ಯಾವುದೇ ತೊಂದರೆಯಿಲ್ಲ, ದಯವಿಟ್ಟು ಯೋಜನೆಗೆ ಸಹಕಾರ ನೀಡಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.ಇಲ್ಲಿನ ಹುಕ್ಕೇರಿಮಠದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಬೇಡ್ತಿ-ವರದಾ ಕುರಿತು ಚರ್ಚೆ ಮಾಡಿದ್ದಾರೆ. ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಆ ಭಾಗದ ಜನರ, ಗುರುಗಳ ಭಾವನೆ ಗೌರವಿಸುತ್ತೇವೆ. ತಪ್ಪು ಕಲ್ಪನೆ ಮೇಲೆ ವಿರೋಧ ಮಾಡುವುದು ಬೇಡ ಅನ್ನುವ ಮನವಿಯನ್ನು ಆದರ ಪೂರಕವಾಗಿ ಮಾಡುತ್ತೇನೆ. ಈ ಯೋಜನೆ ಸುಮಾರು 30 ವರ್ಷದಿಂದ ಇದೆ. ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಅಥಾರಿಟಿಯಿಂದ ಬಂದಿರುವ ಯೋಜನೆ. ದಕ್ಷಿಣ ಭಾರತದ ಪ್ರಮುಖ ಮೂರು ಯೋಜನೆಗಳಲ್ಲಿ ಇದು ಒಂದು. ಈಗಿರುವ ರಾಜಕಾರಣಿಗಳು ಆಗ ಯಾರೂ ರಾಜಕಾರಣದಲ್ಲಿ ಇರಲೇ ಇಲ್ಲ ಎಂದು ಹೇಳಿದರು. ಇದು ನೀರಿನ ಸದ್ಬಳಕೆಗೆ ಮಾಡಿರುವ ಯೋಜನೆ. ಈಗ ಯೋಜನೆ ಪರಿಷ್ಕರಣೆ ಆಗಿದೆ. ಸಣ್ಣ ಬ್ಯಾರೇಜ್ ಮಾಡಿ ಲಿಫ್ಟ್ ಮಾಡಲಾಗುತ್ತದೆ. ಯಾವುದೇ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುವುದಿಲ್ಲ. ನದಿಯ ಕೇವಲ ಶೇ. 10ರಷ್ಟು ನೀರು ಮಾತ್ರ ತೆಗೆದುಕೊಳ್ಳಬೇಕು ಅನ್ನುವ ಚಿಂತನೆ ಇದೆ. ಹೀಗಾಗಿ ನದಿ ಪಾತ್ರದ ನೀರಿನ ಹರಿವಿಗೆ ಯಾವುದೇ ತೊಂದರೆ ಇಲ್ಲ. ಈ ಯೋಜನೆಗೆ ಡಿಪಿಆರ್ ಆಗಬೇಕು. ಪರಿಸರದ ಪರಿಣಾಮಗಳ ಅಧ್ಯಯನ ಆಗಬೇಕು. ಅದರ ಸಾಧಕ-ಬಾಧಕ ನೋಡುತ್ತಾರೆ. ಇದೆಲ್ಲ ಪ್ರಕ್ರಿಯೆ ಇದೆ. ದಯವಿಟ್ಟು ಸಹಕಾರ ಮಾಡಬೇಕು. ಯೋಜನೆ ಸಂಪೂರ್ಣ ವಿವರ ಬಂದಾಗ ಪರಿಣತರು ತೀರ್ಮಾನ ಮಾಡುತ್ತಾರೆ ಎಂದರು.ನೀರೇ ಇಲ್ಲದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೂಡ ಇದೆ. ನಾವು ಮಳೆಗಾಲದಲ್ಲಿ ನೀರು ಹಿಡಿದಿಟ್ಟು ಬೇಸಿಗೆಯಲ್ಲಿ ನೀರು ಉಪಯೋಗಿಸ್ತೇವೆ. ಬರ ಪ್ರದೇಶಕ್ಕೆ ಈ ನೀರು ಅನುಕೂಲ ಅಗುತ್ತದೆ. ಒಬ್ಬರಿಗೊಬ್ಬರು ಸಹಕಾರ ಕೊಡಬೇಕು. ಯೋಜನೆಯಿಂದ ಯಾವುದೇ ತೊಂದರೆ ಇಲ್ಲ. ಇದರಿಂದ ಬರ ಪೀಡಿತ ಹಾವೇರಿ ಮತ್ತು ಇತರ ಜಿಲ್ಲೆಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.