ಸರ್ಕಾರಿ ಕಿರಿಯ ಶಾಲೆಗಳನ್ನು ಮುಚ್ಚಿ ಕೆಪಿಎಸ್ ಶಾಲೆ ಹೆಸರಿನಲ್ಲಿ ಮ್ಯಾಗ್ನೆಟ್ ಮಾಡುವುದನ್ನು ವಿರೋಧಿಸಿ ಸೊಡರನಾಳು ಮತ್ತು ಸಿದ್ದಪ್ಪನಹಟ್ಟಿ ಗ್ರಾಮಗಳ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಗ್ರಾಮಸ್ಥರು ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಹಳ್ಳಿಗಳಲ್ಲಿನ ಸರ್ಕಾರಿ ಕಿರಿಯ ಶಾಲೆಗಳನ್ನು ಮುಚ್ಚಿ ಕೆಪಿಎಸ್ ಶಾಲೆ ಹೆಸರಿನಲ್ಲಿ ಮ್ಯಾಗ್ನೆಟ್ ಮಾಡುವುದನ್ನು ವಿರೋಧಿಸಿ ಸೊಡರನಾಳು ಮತ್ತು ಸಿದ್ದಪ್ಪನಹಟ್ಟಿ ಗ್ರಾಮಗಳ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಗ್ರಾಮಸ್ಥರು ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಸೊಡರನಾಳು ಮತ್ತು ಸಿದ್ದಪ್ಪನಹಟ್ಟಿ ಗ್ರಾಮಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚಿ ಕಪ್ಪಗೆರೆಯಲ್ಲಿ ಮಂಜೂರಾಗಿರುವ ಕೆಪಿಎಸ್ ಶಾಲೆಗೆ ಸೇರಿಸುವುದನ್ನು ಖಂಡಿಸಿ ಸೊಡರನಾಳು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಬಡವರ ಬೆವರ ಹಣದಲ್ಲಿ ಕಟ್ಟಿದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಡಿಎಸ್ಒ ಜಿಲ್ಲಾ ಸಂಚಾಲಕ ಕೆ ಈರಣ್ಣ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ರಾಜ್ಯ ಸರ್ಕಾರ 40ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಇಂತಹ ನೀತಿ ವಿರುದ್ಧ ಜನರು ಬಲಿಷ್ಠ ಹೊರಟದ ಅವಶ್ಯಕತೆ ಇದೆ ಎಂದರು.ಸೊಡರನಾಳು ಶಾಲೆಯನ್ನು ಕಟ್ಟಲು ಈ ಊರಿನ ಜನ ಕಲ್ಲು, ಸಿಮೆಂಟ್, ಇಟ್ಟಿಗೆ ಹೊತ್ತಿದ್ದಾರೆ. ಇಂತಹ ಶಾಲೆ ಮುಚ್ಚಿದರೆ ಅತ್ಯಂತ ಕಡು ಬಡ ಮಕ್ಕಳಗೆ ಅನ್ಯಾಯ ಮಾಡಿದಂತಾಗುತ್ತದೆ. ಸಿದ್ದಪ್ಪಹಟ್ಟಿ ಸರ್ಕಾರಿ ಶಾಲೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆ ಮುಚ್ಚಿದರೆ ರೈತರ ಮಕ್ಕಳಿಗೆ ಮರಣ ಶಾಸನ ವಾಗುತ್ತದೆ. ಸಾವಿತ್ರಿಬಾಯಿ- ಜ್ಯೋತಿಬಾ ಫುಲೆಯವರ ಹೋರಾಟ ಮತ್ತು ಪರಿಶ್ರಮದ ಫಲವಾಗಿ ಇಂದು ಹಳ್ಳಿಗಳಿಗೆ ಸರ್ಕಾರಿ ಶಾಲೆಗಳು ಆರಂಭವಾಗಿವೆ. ಈ ಎಲ್ಲರ ಮಹಾತ್ಮರ ಆಶಯಗಳನ್ನು ಗಾಳಿಗೆ ತೂರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಾದ್ಯಂತ ಈ ಯೋಜನೆ ವಿರುದ್ದ ಜನ ಆಕ್ರೋಶ ಇದ್ದರೂ, ಕಿಂಚಿತ್ತು ಬೆಲೆ ಇಲ್ಲದೆ ಈ ಭಾಗದ ಜನಗಳ ಅನುಕೂಲಕ್ಕೆ ಇರುವಂತ ಗಣಿಭಾದಿತ ಪ್ರದೇಶದ KMERC ನಿಧಿಯನ್ನು ಶಾಲೆಗಳನ್ನು ಮುಚ್ಚಲು ಬಳಸಿಕೊಳ್ಳುತ್ತಿರುವುದು ಅತ್ಯಂತ ಜನ ವಿರೋಧಿ ನೀತಿಯಾಗಿದೆ ಎಂದು ಕಟುವಾಗಿ ಟೀಕಿಸಿದರು.6ನೇ ತರಗತಿಯಿಂದಲೇ ಕೆಪಿಎಸ್ ಶಾಲೆಯಲ್ಲಿ ಟೈಲರಿಂಗ್ ಮಾಡುವುದು, ಅಡಕೆ ಸುಲಿಯುವುದು ಸೇರಿದಂತೆ ಇತರೆ ಕಸುಬುಗಳನ್ನು ಕಲಿಸುವುದಾಗಿ ಸರ್ಕಾರ ಹೇಳಿದೆ. ತಳಸಮುದಾಯದ ಮಕ್ಕಳ ವಿದ್ಯೆ ಕಸಿದು ಕೂಲಿಗೆ ಕಳಿಸುವ ಸರ್ಕಾರದ ಹುನ್ನಾರವನ್ನು ನಾವು ಒಪ್ಪುವುದಿಲ್ಲ. ಈ ಯೋಜನೆ ರದ್ದಾಗವವರೆಗೂ ನಿರಂತರವಾಗಿ ಹೋರಾಟ ನಡೆಸುತ್ತೇವೆ ಎಂದರು.
ಈ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ಕೊಂಡು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಗಳ ಮುಚ್ಚವುದು ಕೈಬಿಡಬೇಕೆಂದು ಅವರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ AIKKMS ರೈತ ಸಂಘಟನೆಯ ಜಿಲ್ಲಾ ಮುಖಂಡ ಕುಮಾರ್, AIMSS ಮಹಿಳಾ ಸಂಘಟನೆ ಜಿಲ್ಲಾ ಮುಖಂಡೆ ಕುಮುದ ಮತ್ತು ಸೊಡರನಾಳು ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷ ಶಂಕರಪ್ಪ, ಉಪಾಧ್ಯಕ್ಷ ರಾಮಲಿಂಗಪ್ಪ, ಶಂಕರಲಿಂಗಪ್ಪ, ಹಾಗೂ ಕಾರ್ಯದರ್ಶಿ ಕಲ್ಪನಾ, ಮತ್ತು ಸದಸ್ಯರು ಗಾಯತ್ರಿ, ಜಯಣ್ಣ ಸಿದ್ದಪ್ಪನಹಟ್ಟಿ ಗ್ರಾಮದ ಯಲ್ಲಪ್ಪ, ರಾಜು, ವಸಂತ್, ರಾಮಚಂದ್ರಪ್ಪ, ಕೃಷ್ಣಪ್ಪ ಪೂಜಾರಿ ಹಾಗೂ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.