ಸಂತೆಯಲ್ಲಿ ಡಬಲ್ ಶುಲ್ಕ ವಸೂಲಿಗೆ ವಿರೋಧ

| Published : Aug 24 2024, 01:22 AM IST

ಸಾರಾಂಶ

ಬಂಗಾರಪೇಟೆ ಎಂಪಿಎಂಸಿ ವಾರದ ಸಂತೆಯಲ್ಲಿ ಡಬಲ್ ಶುಲ್ಕ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಬೇಕು ದಲ್ಲಾಳಿಗಳ ಹಾವಳಿಯಿಂದಾಗಿ ರೈತರು ಡಬಲ್‌ ಶುಲ್ಕ ಪಾವತಿಸುವಂತಾಗಿದೆ. ರೈತಭವನ ದುಸ್ಥಿತಿಯಿಂದಾಗಿ ತಂಗಲು ಸ್ಥಳವಿಲ್ಲದೆ ರೈತರ ಪರದಾಟ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ವಾರದ ಸಂತೆಯಲ್ಲಿ ಡಬಲ್ ಶುಲ್ಕ ವಸೂಲಿ ಮಾಡುವ ಮೂಲಕ ರೈತರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕಚೇರಿ ಮುಂದೆ ಪ್ರತಿಭಟಿಸಿದರು.

ಸಂಘದ ಜಿಲ್ಲಾಧ್ಯಕ್ಷ ಟಿ.ಎ.ರಾಮೇಗೌಡ ಮಾತನಾಡಿ, ವಾರದ ಸಂತೆಯಲ್ಲಿ ಡಬಲ್ ಶುಲ್ಕ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಬೇಕು ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.

ಪಾಳು ಬಿದ್ದ ರೈತಭವನ

ಜಿಲ್ಲೆಯಲ್ಲೆ ದೊಡ್ಡ ಎಪಿಎಂಸಿಯಾಗಿರುವ ಪಟ್ಟಣದ ಎಪಿಎಂಸಿಗೆ ನೂರಾರು ರೈತರು ರಾತ್ರಿವೇ ತರಕಾರಿಗಳನ್ನು ತಂದು ಬೆಳಗಿನ ಜಾವ ಮಾರಾಟ ಮಾಡುತ್ತಾರೆ. ಇಲ್ಲಿ ರೈತರಿಗಾಗಿ ನಿರ್ಮಾಣ ಮಾಡಿರುವ ರೈತ ಭವನ ಹಲವು ದಶಕಗಳಿಂದ ಬಳಸದೆ ಪಾಳು ಬಿದ್ದಿದೆ, ಆದ್ದರಿಂದ ಕೂಡಲೇ ಎಪಿಎಂಸಿ ಪಾಳು ಬಿದ್ದಿರುವ ರೈತ ಭವನವನ್ನು ರೈತರ ಬಳಕೆಗೆ ಅನುವು ಮಾಡಿಕೊಡಬೇಕು ಎಂದರು.

ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆಯಲ್ಲಿ ರೈತರು ಮುಕ್ತವಾಗಿ ಮಾರಾಟ ಮಾಡಲು ಆಗದೆ ದಲ್ಲಾಳಿಗಳ ಕಪಿಮುಷ್ಟಿಯಲ್ಲಿ ಸಿಲುಕುವಂತಾಗಿದೆ. ಪ್ರಾಂಗಣಕ್ಕೆ ಬರುವ ರೈತರಿಂದ ಎರಡು ಬಾರಿ ಶುಲ್ಕ ಪಡೆಯುವ ಸಿಬ್ಬಂದಿ ಯಾವ ಮಾನದಂಡದ ಮೇಲೆ ಡಬಲ್ ವಸೂಲಿ ಮಾಡುವರು ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಪಟ್ಟುಹಿಡಿದರು.

ದಲ್ಲಾಳಿಗ ಹಾವಳಿ, ಡಬಲ್ ಶುಲ್ಕ ವಸೂಲಿ ಹಾಗೂ ರೈತರ ಭವನವನ್ನು ರೈತರಿಗೆ ಅನುಕೂಲವಾಗುವಂತೆ ನವೀಕರಿಸಿ ಕೊಡಬೇಕು ಹಾಗೂ ಪ್ರಾಂಗಣದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಒತ್ತಾಯಿಸಿ ಎಪಿಎಂಸಿ ಕಾರ್ಯದರ್ಶಿ ಶ್ರೀನಿವಾಸ್‌ರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಂಜುನಾಥ್,ಚಲಪತಿ,ಶಿವಕುಮಾರ್,ಶ್ರೀನಿವಾಸನಾಯ್ಡು,ನಾರಾಯಣಪ್ಪಯಲ್ಲಪ್ಪ,ಕೃಷ್ಣಪ್ಪ,ಗೋವಿದಪ್ಪ ಇದ್ದರು.