ಸಾರಾಂಶ
ಸಂಡೂರು: ಪರಿಶಿಷ್ಟ ಪಂಗಡದ ಪಟ್ಟಿಗೆ ಕುರುಬರು ಸೇರಿದಂತೆ ಇನ್ನಿತರ ಹಿಂದುಳಿದ ವರ್ಗದ ಪಟ್ಟಿಯಲ್ಲಿರುವ ಜಾತಿಗಳವರನ್ನು ಸೇರ್ಪಡೆಗೊಳಿಸಬಾರದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದ ಮುಖಂಡರು ಗುರುವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಿಂದ ತಾಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಗ್ರೇಡ್-೨ ತಹಸೀಲ್ದಾರ್ ಸುಧಾ ಅರಮನೆ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಬಳಿಕ ಮಾತನಾಡಿದ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ವಿ. ಅಂಬರೀಷ್, ಬುಡಕಟ್ಟು ಸಮುದಾಯಗಳನ್ನು ಒಳಗೊಂಡಿರುವ ಪರಿಶಿಷ್ಟ ಪಂಗಡದ ಪಟ್ಟಿಗೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಪ್ರಬಲ ಜಾತಿಯವರನ್ನು ಯಾವುದೇ ಕಾರಣಕ್ಕೆ ಸೇರ್ಪಡೆ ಮಾಡಬಾರದು ಎಂದು ಹೇಳಿದರು.
ಮುಖಂಡರಾದ ವಸಂತಕುಮಾರ್, ಜಯಣ್ಣ, ವಿ.ಎಸ್. ಶಂಕರ್ ಮಾತನಾಡಿ, ಪರಿಶಿಷ್ಟ ವರ್ಗಗಳ ಇಲಾಖೆಗೆ ಸ್ವತಂತ್ರ ಕ್ಯಾಬಿನೆಟ್ ಸಚಿವರನ್ನು ನೇಮಿಸಬೇಕು. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕೂಡಲೆ ಸ್ಕಾಲರ್ಶಿಪ್ ಬಿಡುಗಡೆ ಮಾಡಬೇಕು. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸುವುದು ಮುಂತಾದವು ನಮ್ಮ ಪ್ರಮುಖ ಬೇಡಿಕೆಗಳಾಗಿದ್ದು, ಅವುಗಳ ಈಡೇರಿಕೆಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದ ಉಪಾಧ್ಯಕ್ಷ ಎನ್. ಚಂದ್ರು, ಮಂಜು ಬಾಳೆಕಾಯಿ, ಟಿ. ಶ್ರೀನಿವಾಸ, ಕೆ. ಪಂಪಾಪತಿ, ಪ್ರಧಾನ ಕಾರ್ಯದರ್ಶಿ ಆರ್. ರಘುನಾಥ, ಟಿ. ರ್ರಿಸ್ವಾಮಿ, ಕಾರ್ಯದರ್ಶಿ ಕೆ. ಹುಲಿರಾಜ್, ಯು. ಹೊನ್ನೂರಸ್ವಾಮಿ, ಕಾನೂನು ಸಲಹೆಗಾರರಾದ ಪಿ. ಪರಶುರಾಮ, ಮುಖಂಡರಾದ ಡಿ. ಕೃಷ್ಣಪ್ಪ, ಡಿ. ಪ್ರಹ್ಲಾದ, ಟಿ. ಪರಶುರಾಮ, ಟಿ. ನಾಗರಾಜ, ಆರ್. ಬಸವರಾಜ, ಫಕ್ಕೀರಪ್ಪ, ಸತ್ಯನಾರಾಯಣ, ಮಂಜುನಾಥ, ನಾಗರಾಜ ಉಪಸ್ಥಿತರಿದ್ದರು.